ಜ್ಯೋತಿಷಿ-ಪುರೋಹಿತರೆ ಈ ದೇಶದ ಉಗ್ರವಾದಿಗಳು: ಜ್ಞಾನಪ್ರಕಾಶ್ ಸ್ವಾಮೀಜಿ

Update: 2018-09-17 16:57 GMT

ಬೆಂಗಳೂರು, ಸೆ.17: ಧಾರ್ಮಿಕ ಭಾವನೆಗಳನ್ನು ಬಂಡವಾಳ ಮಾಡಿಕೊಂಡು ಭಯದ ವಾತಾವರಣ ನಿರ್ಮಿಸಿರುವ ಜ್ಯೋತಿಷಿಗಳು, ಪುರೋಹಿತರೇ ಈ ದೇಶದ ಉಗ್ರವಾದಿಗಳು ಎಂದು ಮೈಸೂರಿನ ಉರಿಲಿಂಗ ಪೆದ್ದಿಮಠದ ಪೀಠಾಧ್ಯಕ್ಷ ಜ್ಞಾನಪ್ರಕಾಶ್ ಸ್ವಾಮೀಜಿ ಟೀಕಿಸಿದ್ದಾರೆ.

ಸೋಮವಾರ ನಗರದ ಕಬ್ಬನ್ ಪಾರ್ಕ್‌ನ ಎನ್‌ಜಿಒ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ(ಸಮತಾವಾದ) ಏರ್ಪಡಿಸಿದ್ದ, ದ್ರಾವಿಡ ಸಂಸ್ಕೃತಿ ಚಿಂತಕ ಪೆರಿಯಾರ್ ರಾಮಸ್ವಾಮಿ ಅವರ 139ನೆ ಜನ್ಮದಿನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಧರ್ಮದ ನಂಬಿಕೆಯನ್ನು ಪ್ರಮುಖವಾಗಿಸಿಕೊಂಡು, ದಿನನಿತ್ಯ ಮುಗ್ಧ ಜನರನ್ನು ಶೋಷಣೆ ಮಾಡಿ ಭಯದ ವಾತಾವರಣ ನಿರ್ಮಿಸುತ್ತಿರುವ ಜ್ಯೋತಿಷಿಗಳು, ಪುರೋಹಿತರು ನಿಜವಾದ ಭಯೋತ್ಪಾದಕರು. ಅಷ್ಟೇ ಮಾತ್ರವಲ್ಲದೆ, ಭಾರತ್ ಮಾತಾ ಕೀ ಜೈ ಎಂದು ಘೋಷಣೆಯನ್ನಿಟ್ಟುಕೊಂಡು ದೇಶವನ್ನು ಛಿದ್ರಗೊಳಿಸಲಾಗುತ್ತಿದೆ ಎಂದರು.

ಮೋಸದ ಮಂತ್ರಗಳು: ಮದುವೆ ಸಂದರ್ಭದಲ್ಲಿ ತಾಳಿಯನ್ನು ಕಷ್ಟಪಟ್ಟು ತಯಾರಿಸಿಕೊಳ್ಳುವುದು ನಾವು. ಆದರೆ, ಪುರೋಹಿತರು, ‘ಮಾಗಲ್ಯಂ ತಂತುನಾನೇನ’ ಎನ್ನುತ್ತಾರೆ. ಇದರ ಅರ್ಥ, ತಾಳಿಯನ್ನು ವಧುವಿಗೆ ಪುರೋಹಿತ ಕಟ್ಟುತ್ತಾನೆ ಎಂದು ಹೇಳುವುದು. ಅದೇ ರೀತಿ, ತಾಳಿ ಕಟ್ಟಿದ ಬಳಿಕ, ಸಂಸ್ಕೃತದ ಮಂತ್ರವೊಂದು, ಪತ್ನಿಯನ್ನು ಇಂದ್ರ, ಅಗ್ನಿ, ವರುಣ, ಕುಬೇರನ ಬಳಿ ಮಲಗಿಸಿದ ನಂತರ ನೀವು ಮಲಗಿ ಎಂದು ಹೇಳುತ್ತದೆ. ಇದೆಲ್ಲವನ್ನೂ, ಮನುಶಾಸ್ತ್ರದ ವಿವಾಹ ಸಂಹಿತೆಯಿಂದ ಪಡೆಯಲಾಗಿದ್ದು, ಎಲ್ಲದರಲ್ಲೂ ಮೋಸ ಅಡಗಿದೆ ಎಂದು ಅವರು ಹೇಳಿದರು.

ವಿವೇಕಾನಂದರು, ದೇವರನ್ನು ಹುಡುಕಿಕೊಂಡು ದೇವಸ್ಥಾನಕ್ಕೆ ಹೋಗಬೇಡಿ. ಮನುಷ್ಯನ, ಬಡವನ ಹೃದಯದಲ್ಲಿ ದೇವರಿದ್ದಾನೆ ಎಂದಿದ್ದಾರೆ. ಆದರೆ, ಧರ್ಮದ ಹೆಸರಿನಲ್ಲಿ ರಾಜಕಾರಣ, ಜಾತಿ ಹೆಸರಿನಲ್ಲಿ ಶೋಷಣೆ ನಡೆಸಲಾಗುತ್ತಿದೆ. ಸಮಾಜ ಸುಧಾರಕರು ಹೇಳಿದ ತತ್ವಕ್ಕೆ ವಿರುದ್ಧವಾದ ವಾತಾವರಣ ದೇಶದಲ್ಲಿಂದು ನಿರ್ಮಾಣವಾಗಿದೆ ಎಂದು ತಿಳಿಸಿದರು.

ದೇವರ ಮೇಲಿನ ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ದುರುಪಯೋಗಪಡಿಸಿಕೊಳ್ಳುತ್ತಿದ್ದವರನ್ನು ಪೆರಿಯಾರ್ ಪ್ರಶ್ನಿಸುತ್ತಿದ್ದರು. ಅಷ್ಟೇ ಅಲ್ಲದೆ, ವೈಜ್ಞಾನಿಕತೆಯ ಆಧಾರದ ಮೇಲೆ ವಿಚಾರ ಧಾರೆಯನ್ನು ಪ್ರತಿಪಾದಿಸಿದರು ಎಂದ ಅವರು, ಕುವೆಂಪು ಅವರ ವಾಕ್ಯದಂತೆ ನಾವು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಬೇಕು ಎಂದರು ಹೇಳಿದರು.

ದೇವರು ಬಂದು ಶೋಷಿತರನ್ನು ರಕ್ಷಿಸುತ್ತಾನೆ ಎಂದು ತಿಳಿದು ದೇವಸ್ಥಾನವನ್ನು ನಿರ್ಮಿಸಿದರೆ ಪ್ರಯೋಜನವಿಲ್ಲ. ಡಾ.ಅಂಬೇಡ್ಕರ್, ಪೆರಿಯಾರ್, ಫುಲೆ, ಬಸವಣ್ಣ ಇನ್ನಿತರರು ಶೋಷಿತರ ವಿಮೋಚನೆಗೆ ಶ್ರಮಿಸಿದವರು. ಅವರು ಶಿಕ್ಷಣ, ಮೀಸಲಾತಿ ಹಾಗೂ ಸ್ವಾಭಿಮಾನವನ್ನು ತಂದುಕೊಟ್ಟವರು. ಹೀಗಾಗಿ, ಅವರ ಅನುಯಾಯಿಗಳು ಆಗಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಹೈಕೋರ್ಟ್‌ನ ಹಿರಿಯ ವಕೀಲ ಸಿ.ಜಗದೀಶ್, ಪೆರಿಯಾರ್ ಚಿಂತಕಿ ಕಲೈ ಸೆಲ್ವಿ, ದಸಂಸ(ಸಮತಾವಾದ) ಎಚ್.ಮಾರಪ್ಪ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ದೇವರಿದ್ದರೂ ಸಿರಿವಂತಿಕೆಯಿಲ್ಲ

ವರಮಹಾಲಕ್ಷ್ಮೀ ಹಬ್ಬವನ್ನು ಭಾರತದಲ್ಲಿ ಮಾತ್ರ ಆಚರಿಸುತ್ತಾರೆ. ಬೇರೆ ದೇಶಗಳಲ್ಲಿ ಆಚರಿಸುವುದಿಲ್ಲ. ಆದರೂ, ಅಲ್ಲಿ ಸಿರಿವಂತಿಕೆ ಹೆಚ್ಚಿದೆ. ನಮ್ಮಲ್ಲಿ ನಾಯಿಯನ್ನು ನಾರಾಯಣ, ದೇವರು ಎನ್ನುತ್ತಾರೆ. ಈ ದೇವರು ಕಚ್ಚಿದಾಗ ಚುಚ್ಚುಮದ್ದು ಏಕೆ ಹಾಕಿಸಿಕೊಳ್ಳುತ್ತಾರೆ. ದೇವರು ಕಚ್ಚಿದರೆ ಒಳ್ಳೆಯದಲ್ಲವೇ?

-ಜ್ಞಾನಪ್ರಕಾಶ್ ಸ್ವಾಮೀಜಿ, ಪೀಠಾಧ್ಯಕ್ಷ, ಉರಿಲಿಂಗ ಪೆದ್ದಮಠದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News