ಕಲೆಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಸರಕಾರ ಬದ್ಧ: ಸಚಿವೆ ಡಾ.ಜಯಮಾಲ

Update: 2018-09-17 17:01 GMT

ಬೆಂಗಳೂರು, ಸೆ.17: ಕರ್ನಾಟಕದಲ್ಲಿರುವ ಕುಸುರಿ ಕೆಲಸ, ಶಿಲ್ಪಕಲೆ, ಆಭರಣ ಕಲೆ ಬೇರೆ ಎಲ್ಲಿಯೂ ಸಿಗುವುದಿಲ್ಲ. ಆದರೆ, ನಮ್ಮಲ್ಲಿ ಕಲೆಯಿದ್ದರೂ ಅದಕ್ಕೆ ಮಾರುಕಟ್ಟೆ ಸೌಲಭ್ಯ ಸಿಗುತ್ತಿಲ್ಲ. ಹೀಗಾಗಿ, ನಮ್ಮ ಕಲೆಗೆ ದೇಶ-ವಿದೇಶ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲ ರೀತಿಯ ಸಹಕಾರ ಮತ್ತು ನೆರವು ನೀಡುತ್ತದೆ ಎಂದು ಸಚಿವೆ ಡಾ.ಜಯಮಾಲ ಭರವಸೆ ನೀಡಿದ್ದಾರೆ.

ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯುತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮಲ್ಲಿ ಹಲವು ಬಗೆಯ ಕಲಾವಿದರಿದ್ದಾರೆ. ಆದರೆ, ದೇಶ-ವಿದೇಶ ಮಟ್ಟದಲ್ಲಿ ಬೇರೆ ರಾಜ್ಯಗಳಿಗೆ ಹೆಚ್ಚಿನ ಮಾನ್ಯತೆ ಸಿಗುತ್ತಿದೆ. ವಿದೇಶಗಳಲ್ಲಿ ಮಾರಾಟವಾಗುತ್ತಿರುವ ಚಿನ್ನದ ವಸ್ತುಗಳು ಕರ್ನಾಟಕದವರು ತಯಾರಿಸಿದ್ದರೂ, ಅದನ್ನು ಬೇರೆ ರಾಜ್ಯದವರು ಮಾರಾಟ ಮಾಡುತ್ತಿದ್ದಾರೆ ಎಂದರು.

ಭಾರತದ ಶಿಲ್ಪಕಲೆಗಳು ಸೇರಿದಂತೆ ಎಲ್ಲ ಕಲಾ ಪ್ರಕಾರಗಳಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾದುದು. ದೇಶದ ಪ್ರಮುಖ ದೇವಸ್ಥಾನದಲ್ಲಿ ಒಂದಾದ ಪೂರಿ ಜಗನ್ನಾಥ ದೇವಸ್ಥಾನ ಸೇರಿದಂತೆ ಅನೇಕ ದೇವಾಲಯಗಳಲ್ಲಿ ಅರಳಿರುವ ಕಲೆಗಳಲ್ಲಿ ವಿಶ್ವಕರ್ಮ ಸಮುದಾಯದ ಪಾತ್ರ ಅಡಗಿದೆ ಎಂದು ಹೇಳಿದರು.

ಕರ್ನಾಟಕದ ಬೇಲೂರು, ಹಳೇಬೀಡು, ಹಂಪಿಯಲ್ಲಿರುವ ಐತಿಹಾಸಿಕ ಸ್ಮಾರಕಗಳು, ದೇವಾಲಯಗಳಲ್ಲಿ ಬಿಡಿಸಿರುವ ಶಿಲ್ಪಕಲೆಯು ಇಂದಿನ ಪೀಳಿಗೆಗೆ ಸವಾಲಾಗಿದೆ. ಅಂದು ನಿರ್ಮಿಸಿರುವ ಒಂದೇ ಒಂದು ದೇವಾಲಯವನ್ನು ಅಥವಾ ಕಲೆಯನ್ನು ಇಂದಿನ ಪೀಳಿಗೆ ನಿರ್ಮಿಸಲು ಸಾಧ್ಯವಿಲ್ಲ. ಇದು ಇಂದಿನ ಸವಾಲಾಗಿದೆ ಎಂದು ನುಡಿದರು.

ಬೇಲೂರು-ಹಳೇಬೀಡುಗೆ ಹೊಂದಿಕೊಂಡಂತೆ ಸರಕಾರಿ ಸ್ಥಳವಿದ್ದು, ಅದರಲ್ಲಿ ಇಂದಿನ ಇಂಜಿನಿಯರ್ ಹಾಗೂ ಕಲಾವಿದರಿಗೆ ಹಿಂದಿನ ಕಾಲದ ರೀತಿಯಲ್ಲಿ ಕಲಾಪ್ರಕಾರಗಳನ್ನು ರಚಿಸುವ ಚಾಲೆಂಜ್ ನೀಡಲು ಬಳಸಿಕೊಳ್ಳಲು ಚಿಂತನೆಯಿದೆ. ಈ ಮೂಲಕ ಕಲಾವಿದರಿಗೆ ಉದ್ಯೋಗ ಸೃಷ್ಟಿಸಿದಂತಾಗುತ್ತದೆ. ಅಲ್ಲದೆ, ಪ್ರಪಂಚಕ್ಕೆ ಹಿಂದಿನ ಕಲೆಗಳನ್ನು ಬೇರೆ ಯಾರಿಂದಲೂ ನಿರ್ಮಿಸಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿದಂತಾಗುತ್ತದೆ. ಇದು ಕೇಂದ್ರ ಸರಕಾರದ ಮುಂದಾಳತ್ವದಲ್ಲಿ ನಡೆಯಬೇಕಿದ್ದು, ಈ ಸಂಬಂಧ ಕೇಂದ್ರದೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಅವರು ಹೇಳಿದರು.

ಸಚಿವ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ವಿಶ್ವಕರ್ಮ ಸಮುದಾಯ ಶ್ರಮ ಜೀವಿಗಳಾಗಿದ್ದು, ಶ್ರದ್ಧೆ, ಭಕ್ತಿಯಿಂದ ತಾವು ಒಪ್ಪಿಕೊಳ್ಳುವ ಕೆಲಸವನ್ನು ಮಾಡಿ ಮುಗಿಸುತ್ತಾರೆ. ಆದುದರಿಂದಲೇ ಇಂದು ಅವರು ವಿಶ್ವ ಮಟ್ಟದಲ್ಲಿ ಮಹತ್ವದ ಸ್ಥಾನ ಪಡೆದಿದ್ದಾರೆ ಎಂದು ಶ್ಲಾಘಿಸಿದರು.

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ವಿಶ್ವಕರ್ಮರನ್ನು ಹಿಂದುಳಿದ ವರ್ಗದ ಅಡಿಯಲ್ಲಿ ಸೇರ್ಪಡೆ ಮಾಡುವ ಮೂಲಕ ಸಮಾಜದಲ್ಲಿ ಘನತೆಯಿಂದ ಜೀವಿಸಲು ಸಹಕಾರ ನೀಡಿದ್ದರು. ಅನಂತರ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಕರ್ಮ ನಿಗಮ ಮಂಡಳಿ ಮಾಡುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದ ಅವರು, ಮುಂದಿನ ಒಂದು ತಿಂಗಳೊಳಗೆ ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸರಸ್ವತಿ ಪೀಠದ ಕಾಳಹಸ್ತೇಂದ್ರ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಶರವಣ, ಇಲಾಖೆಯ ನಿರ್ದೇಶಕ ವಿಶುಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಕೆ.ಎಸ್.ಪ್ರಭಾಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News