ಬೆಂಗಳೂರು: ಸಹೋದರರಿಬ್ಬರ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯ

Update: 2018-09-18 12:23 GMT

ಬೆಂಗಳೂರು, ಸೆ.18: ಸಹೋದರರಿಬ್ಬರ ನಡುವೆ ನಡೆದ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯವಾದ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಬ್ಯಾಡರಹಳ್ಳಿಯ ತಾವರೆಕೆರೆಯ ಹೊನ್ನಗನಹಟ್ಟಿ ನಿವಾಸಿ ಜಗದೀಶ್(23) ಕೊಲೆಯಾದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದು, ಕೃತ್ಯವೆಸಗಿರುವ ಆರೋಪಿ ಅಣ್ಣ ಮುನಿರಾಜು ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಕಳೆದ ಒಂದು ತಿಂಗಳ ಹಿಂದೆಯಷ್ಟೇ ಜಗದೀಶ್‌ಗೆ ಮದುವೆ ಆಗಿತ್ತು. ಪತ್ನಿಗೆ ಅಣ್ಣ ಮುನಿರಾಜು ನಿಂದನೆ ಮಾಡಿದ ಕಾರಣದಿಂದಾಗಿ ಜಗಳ ನಡೆದಿದೆ ಎನ್ನಲಾಗಿದೆ.

ಸೋಮವಾರ ಮಾಗಡಿ ಮುಖ್ಯರಸ್ತೆಯ ಅಂಜನಾನಗರದ ಕೆಇಬಿ ರಸ್ತೆಯಲ್ಲಿರುವ ಅಣ್ಣ ಮುನಿರಾಜು ಮನೆಗೆ ಹೋಗಿದ್ದ ಜಗದೀಶ್, ಅಣ್ಣನೊಂದಿಗೆ ಜಗಳವಾಡಿ, ಆತನ ಕಾರಿನ ಗಾಜು ಪುಡಿ ಮಾಡಿದ್ದ. ಇದರಿಂದ ಆಕ್ರೋಶಗೊಂಡ ಮುನಿರಾಜು ನಾಲ್ಕನೇ ಮಹಡಿಯಿಂದ ಸಿಮೆಂಟ್ ಇಟ್ಟಿಗೆಯನ್ನು ತಮ್ಮನ ಮೇಲೆ ಎಸೆದಿದ್ದಾನೆ. ಇಟ್ಟಿಗೆ ತಲೆಗೆ ಬಿದ್ದು ಅಲ್ಲೇ ಕುಸಿದುಬಿದ್ದ ಜಗದೀಶ್‌ನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News