‘ದಲಿತ’ ಪದವನ್ನು ‘ಪರಿಶಿಷ್ಟ ಜಾತಿ’ ಎಂಬ ಅರ್ಥಕ್ಕೆ ಸೀಮಿತಗೊಳಿಸಬಾರದು

Update: 2018-09-18 18:33 GMT

ದಲಿತ ಎಂಬ ಪದವು ಶೋಷಣೆ, ತಾರತಮ್ಯ ಮತ್ತು ಪುರುಷಾಧಿಪತ್ಯದ ಒಟ್ಟಾರ್ಥವನ್ನು ಸಂಕೇತಿಸುವುದರಿಂದ ದಮನಿತರ ನಡುವಿನ ಸೌಹಾರ್ದಕ್ಕೆ ಯಾವುದೇ ಆತಂಕವನ್ನು ಹುಟ್ಟುಹಾಕುವುದಿಲ್ಲ. ಹಾಗೆಯೇ ಮತ್ತೊಂದು ಅತಿ ಮುಖ್ಯವಾದ ಮತ್ತು ಮೂಲಭೂತವಾದ ನೈತಿಕ ದೃಷ್ಟಿಯಿಂದಲೂ ‘ದಲಿತ’ ಎಂಬ ಪದವನ್ನು ‘ಪರಿಶಿಷ್ಟ ಜಾತಿ’ ಎಂಬರ್ಥಕ್ಕೆ ಇಳಿಸಲಾಗುವುದಿಲ್ಲ. ‘ಪರಿಶಿಷ್ಟ ಜಾತಿ’ ಎಂಬ ಪದದಂತಲ್ಲದೆ ‘ದಲಿತ’ ಎಂಬ ವ್ಯಾಖ್ಯಾನವು ಅಧಿಕೃತವಾಗಿ ಸಾಬೀತುಗೊಳ್ಳಬೇಕಾದ ಹೊರೆಯನ್ನು ಹೊತ್ತುಕೊಂಡಿಲ್ಲ. ‘ದಲಿತ’ ಎಂಬ ಪದವು ತುಳಿತಕ್ಕೀಡಾದ, ದಮನಕ್ಕೊಳಗಾದ, ವಂಚಿತ ಎಂಬ ಅರ್ಥವನ್ನು ಹೊಂದಿರುವುದರಿಂದ ತನ್ನ ವ್ಯಾಖ್ಯಾನವನ್ನು ಸೀಮಿತಗೊಳಿಸುವ ಎಲ್ಲಾ ಸಾಧ್ಯತೆಗಳನ್ನು ಅದು ಬುಡಮೇಲುಗೊಳಿಸುತ್ತದೆ.


ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಇನ್ನು ಮುಂದೆ ಮಾಧ್ಯಮಗಳು ‘ದಲಿತ’ ಎಂಬ ಪದವನ್ನು ಬಳಸಬಾರದೆಂದು ಇತ್ತೀಚೆಗೆ ಸಲಹಾತ್ಮಕ ಸೂಚನೆಯೊಂದನ್ನು ಹೊರಡಿಸಿದೆ. ಇದರ ಪರಿಣಾಮವಾಗಿ ಪದಗಳ ಬಳಕೆಯಲ್ಲಿ ಒಂದು ನೈತಿಕ ಶ್ರೇಣೀಕರಣವೇ ಏರ್ಪಟ್ಟಿದೆ. ನಾಗಪುರದ ಕೆಲವು ಬೌದ್ಧರು ಮಾಡಿದ ಮನವಿಯನ್ನು ಪುರಸ್ಕರಿಸುತ್ತಾ ‘ದಲಿತ’ ಎಂಬ ಪದವು ನೈತಿಕವಾಗಿ ಆಕ್ರಮಣಕಾರಿಯೂ ಮತ್ತು ಅಪಮಾನಕಾರಿಯೂ ಆಗಿರುವುದರಿಂದ ಅದನ್ನು ಕೈಬಿಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿರುವ ಕೇಂದ್ರ ಸರಕಾರ ಅದರ ಬದಲಿಗೆ ಸಾಂವಿಧಾನಿಕವಾಗಿ ನೀಡಲ್ಪಟ್ಟಿರುವ ಪರಿಶಿಷ್ಟ ಜಾತಿ ಎಂಬ ಪದವು ಹೆಚ್ಚು ಸರಿಯಾದದ್ದು ಎಂದು ಹೇಳಿದೆ.

ಆದರೆ ಪರಿಶಿಷ್ಟ ಜಾತಿ (ಎಸ್ಸಿ)ಗಳಿಂದ ಸ್ಪರ್ಧೆಯನ್ನು ಎದುರಿಸಬೇಕಾಗಿದೆ ಎಂದು ಭಾವಿಸುವ ಮೇಲ್ಜಾತಿಗಳಿಂದ ಈ ಪದವು ಈಗಾಗಲೇ ಸಾಕಷ್ಟು ದುರ್ಬಳಕೆಯಾಗಲ್ಪಟ್ಟಿರುವುದರಿಂದ ಸಂವಿಧಾನಕ್ಕೆ ಈ ಪದ ಬಳಕೆಯ ಮೇಲೆ ಯಾವುದೇ ನಿಯಂತ್ರಣವಿಲ್ಲದಂತಾಗಿದೆ. ದಿಲ್ಲಿಯ ವೈದ್ಯಕೀಯ ಕಾಲೇಜೊಂದರಲ್ಲಿ ಎಸ್ಸಿ ವಿದ್ಯಾರ್ಥಿಗಳ ಜಾತಿ ಸೂಚಿಸಿ ಅವಹೇಳನ ಮಾಡುವ ಉದ್ದೇಶದಿಂದಲೇ ಈ ಪದವನ್ನು ಬಳಕೆ ಮಾಡಲಾಗಿತ್ತು. ಎಸ್ಸಿಗಳು ತಮಗೆ ಸರಿಸಮವಾಗಿ ತಮ್ಮ ಕಾಲೇಜಿನಲ್ಲಿ ಸೇರ್ಪಡೆಯಾಗಿರುವುದನ್ನು ಸಹಿಸಲಾಗದ ಮೇಲ್ಜಾತಿ ವಿದ್ಯಾರ್ಥಿಗಳು ಸಂವಿಧಾನದತ್ತವಾದ ಪರಿಶಿಷ್ಟ ಜಾತಿ-ಶೆಡ್ಯೂಲ್ಡ್ ಕ್ಯಾಸ್ಟ್- ಎಂಬ ಪದವನ್ನು ‘ಶೆಡ್ಡೂ’ ಎಂದು ವಿಕೃತಗೊಳಿಸುವ ಮೂಲಕ ಅವಹೇಳನಕಾರಿಯಾಗಿ ಬಳಸಲಾರಂಭಿಸಿದರು. ಹೀಗೆ ಈ ಪದವನ್ನು ವಿಕೃತಗೊಳಿಸುವ ಮೂಲಕ ಮೇಲ್ಜಾತಿಗಳು ಎಸ್ಸಿಗಳನ್ನು ನೈತಿಕವಾಗಿ ದಮನಿಸುತ್ತಿದ್ದರಲ್ಲದೆ ಈ ವರ್ಗಕ್ಕೆ ಸೇರಿದ ಹಾಲಿ ಮತ್ತು ಭಾವೀ ಫಲಾನುಭವಿಗಳಲ್ಲಿ ಬೇಗುದಿಯನ್ನು ಹುಟ್ಟುಹಾಕಿದರು. ಈ ಪದವು ಅಪಮಾನಕಾರಿಯಾಗಿದ್ದರೂ, ಅದರ ಫಲಾನುಭವಿಗಳು ಆ ಪದವನ್ನು ಕಾಪಾಡಿಕೊಳ್ಳಲು ಮುಂಚೂಣಿಯಲ್ಲಿ ನಿಂತಿದ್ದಾರೆ ಮತ್ತು ಮೇಲ್ಜಾತಿಗಳು ಈ ಸೌಲಭ್ಯದ ದುರುಪಯೋಗ ಮಾಡಿಕೊಳ್ಳದಂತೆ ತಡೆಟ್ಟಲು ಜಾತಿ ಪ್ರಮಾಣಪತ್ರವನ್ನು ಸರಿಯಾದ ಪರಿಶೀಲನಾ ಪ್ರಕ್ರಿಯೆಗಳ ಮೂಲಕ ಸರಕಾರಿ ಯಂತ್ರಾಂಗವೇ ಒದಗಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

‘ಪರಿಶಿಷ್ಟ ಜಾತಿ’ ಎಂಬ ಪದವು ನೈತಿಕವಾಗಿಯೂ ಒಳಗಿಂದಲೇ ಕೊರೆಕೊರೆದು ಟೊಳ್ಳುಗೊಳಿಸುವ ಪದವಾಗಿದೆ. ಒಂದು ಜಾತಿ ದೃಢೀಕರಣ ಪ್ರಮಾಣಪತ್ರವಾಗಿ ಅದು ಅವಕಾಶಗಳ ವ್ಯವಸ್ಥೆಯೊಳಗೆ ಪ್ರವೇಶವನ್ನು ಒದಗಿಸಿಕೊಡುವುದು ನಿಜ. ಆದರೆ ಅದೇ ಸಮಯದಲ್ಲಿ ಅದು ದಮನಿತರೊಳಗಿನ ಸೌಹಾರ್ದತೆಗೆ ಧಕ್ಕೆ ತರುವುದಲ್ಲದೆ ಎಸ್ಸಿ ಸಮುದಾಯದೊಳಗೆ ಯಾರು ಅಧಿಕೃತ ಎಸ್ಸಿ ಎಂಬ ಬಗ್ಗೆ ಒಳಜಗಳವನ್ನೂ ಹುಟ್ಟುಹಾಕುತ್ತದೆ. ‘ದಲಿತ’ ಎಂಬ ಪದವು ಒಂದರ್ಥದಲ್ಲಿ ಎಸ್ಸಿ ಒಳಗಿಂದಲೇ ಹುಟ್ಟಿದ್ದರೂ ಅದನ್ನು ಆ ವರ್ಗಕ್ಕೆ ಮಾತ್ರ ಸೀಮಿತಗೊಳಿಸಲು ಸಾಧ್ಯವಿಲ್ಲ. ಅದು ಶೆಡ್ಯೂಲ್ಡ್ ಕಾಸ್ಟ್- ಪರಿಶಿಷ್ಟ ಜಾತಿ- ಎಂಬ ಅನುಸಂಧಾನವರ್ತಿ ಪದವನ್ನು ನಿರಾಕರಿಸುತ್ತಾ ಹುಟ್ಟಿರುವ ಪದವಾಗಿದೆ.

1970ರ ದಶಕದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿದ್ದರೂ ಅದರ ಬಗ್ಗೆ ಬಹಿರಂಗವಾಗಿ ಯಾವುದೇ ನಿಲುವು ತೆಗೆದುಕೊಳ್ಳದ ಹಲವಾರು ಎಸ್ಸಿ ರಾಜಕಾರಣಿಗಳ ನಿಷ್ಕ್ರಿಯತೆಯಿಂದಾಗಿ ‘ದಲಿತ ಪ್ಯಾಂಥರ್ಸ್’ನ ಉಗಮವಾಯಿತು. ಇಂತಹ ಪ್ರಬಲ ರಾಜಕೀಯ ಪ್ರಜ್ಞೆಯ ಹಿನ್ನೆಲೆಗಾಗಿಯೇ ದಲಿತ ಎಂಬ ಪದವನ್ನು ಪರಿಶಿಷ್ಟ ಜಾತಿ ಎಂಬರ್ಥಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಅದು ದಮನಕಾರಿ ಶಕ್ತಿಗಳ ಮತ್ತು ಅದರ ವಿರುದ್ಧ ಧ್ವನಿ ಎತ್ತದೆ ಆಳುವವರ್ಗದ ಚೌಕಟ್ಟಿನೊಳಗೆ ದಲಿತ ದಮನದೊಡನೆ ಅನುಸಂಧಾನ ಮಾಡಿಕೊಂಡ ಅನುವರ್ತಿ ರಾಜಕಾರಣದ ವಿರುದ್ಧ ಹುಟ್ಟಿದ ಪ್ರತಿರೋಧದ ಪ್ರತಿಪಾದನೆಯಾಗಿತ್ತು. ದಲಿತ ಎಂಬ ಪದವು ಶೋಷಣೆ, ತಾರತಮ್ಯ ಮತ್ತು ಪುರುಷಾಧಿಪತ್ಯದ ಒಟ್ಟಾರ್ಥವನ್ನು ಸಂಕೇತಿಸುವುದರಿಂದ ದಮನಿತರ ನಡುವಿನ ಸೌಹಾರ್ದಕ್ಕೆ ಯಾವುದೇ ಆತಂಕವನ್ನು ಹುಟ್ಟುಹಾಕುವುದಿಲ್ಲ. ಹಾಗೆಯೇ ಮತ್ತೊಂದು ಅತಿ ಮುಖ್ಯವಾದ ಮತ್ತು ಮೂಲಭೂತವಾದ ನೈತಿಕ ದೃಷ್ಟಿಯಿಂದಲೂ ‘ದಲಿತ’ ಎಂಬ ಪದವನ್ನು ‘ಪರಿಶಿಷ್ಟ ಜಾತಿ’ ಎಂಬರ್ಥಕ್ಕೆ ಇಳಿಸಲಾಗುವುದಿಲ್ಲ.

‘ಪರಿಶಿಷ್ಟ ಜಾತಿ’ ಎಂಬ ಪದದಂತಲ್ಲದೆ ‘ದಲಿತ’ ಎಂಬ ವ್ಯಾಖ್ಯಾನವು ಅಧಿಕೃತವಾಗಿ ಸಾಬೀತುಗೊಳ್ಳಬೇಕಾದ ಹೊರೆಯನ್ನು ಹೊತ್ತುಕೊಂಡಿಲ್ಲ. ‘ದಲಿತ’ ಎಂಬ ಪದವು ತುಳಿತಕ್ಕೀಡಾದ, ದಮನಕ್ಕೊಳಗಾದ, ವಂಚಿತ ಎಂಬ ಅರ್ಥವನ್ನು ಹೊಂದಿರುವುದರಿಂದ ತನ್ನ ವ್ಯಾಖ್ಯಾನವನ್ನು ಸೀಮಿತಗೊಳಿಸುವ ಎಲ್ಲಾ ಸಾಧ್ಯತೆಗಳನ್ನು ಅದು ಬುಡಮೇಲುಗೊಳಿಸುತ್ತದೆ. ಆದರೆ ‘ದಲಿತ’ ಎಂಬ ಪದವೂ ಸಹ ತನ್ನ ಸುದೀರ್ಘ ಬಳಕೆಯ ಇತಿಹಾಸದಲ್ಲಿ ಹಲವಾರು ಪ್ರತಿರೋಧಗಳನ್ನು ಎದುರಿಸಿದೆ. ಅಂಥ ವಿರೋಧಗಳು ಪ್ರಧಾನವಾಗಿ ವ್ಯಕ್ತವಾಗಿರುವುದು ಮಹಾರಾಷ್ಟ್ರದ ಬೌದ್ಧ ಸಾಹಿತಿಗಳಿಂದ, ದಕ್ಷಿಣ ಭಾರತದ ಪ್ರಖ್ಯಾತ ಸಂಗೀತಗಾರರಿಂದ. ಇದೀಗ ಮತ್ತೊಮ್ಮೆ ಮಹಾರಾಷ್ಟ್ರದ ಕೆಲವು ಸ್ವಘೋಷಿತ ಬೌದ್ಧರು ‘ದಲಿತ’ ಎಂಬ ಪದದ ಬಳಕೆಯನ್ನು ವಿರೋಧಿಸುತ್ತಿದ್ದಾರೆ. ಅವರ ಪ್ರಕಾರ ‘ದಲಿತ’ ಎಂಬ ಪದವು ತಮಗಾದ ಐತಿಹಾಸಿಕ ಅಪಮಾನವನ್ನು ನೆನಪಿಸುವುದರಿಂದ ಮುಜುಗರವನ್ನು ಉಂಟುಮಾಡುತ್ತದೆ.

ಈ ಬೌದ್ಧರ ಕೋರಿಕೆಯಿಂದ ಪ್ರಭಾವಿತವಾಗಿರುವ ಕೇಂದ್ರದ ಮಾಹಿತಿ ಮತ್ತು ಪ್ರಚಾರ ಇಲಾಖೆಯು ಇನ್ನು ಮುಂದೆ ದಲಿತ ಎಂಬ ಪದವನ್ನು ಕೈಬಿಟ್ಟು ಪರಿಶಿಷ್ಟ ಜಾತಿ ಎಂಬ ಪದವನ್ನು ಏಕವರ್ಗ ಸೂಚಕವಾಗಿ ಬಳಸಬೇಕೆಂದು ಮಾಧ್ಯಮಗಳಿಗೆ ಸಲಹೆ ಮಾಡಿದೆ. ಸಂವಿಧಾನದಲ್ಲಿ ‘ಪರಿಶಿಷ್ಟ ಜಾತಿ’ ಎಂಬ ವರ್ಗೀಕರಣವನ್ನು ಸೃಷ್ಟಿಸಿದ್ದೇ ವಿವಿಧ ಬಗೆಯ ಅಸ್ಪೃಶ್ಯ ಜಾತಿಗಳನ್ನು ಒಂದೇ ಸುಸಂಬದ್ಧ ವರ್ಗೀಕರಣದಡಿಯಲ್ಲಿ ತರಲಿಕ್ಕಾಗಿ ಎಂದು ಕೆಲವರು ಈ ಬಗ್ಗೆ ಅಲ್ಪಸ್ವಲ್ಪಸಮಾಧಾನವನ್ನು ಪಟ್ಟುಕೊಳ್ಳಬಹುದು. ಈ ಪದವು ಖಾತರಿಗೊಳಿಸುವ ಸುಸಂಬದ್ಧ ವರ್ಗೀಕರಣದ ಮೂಲಕವೇ ಸುರಕ್ಷಿತ ಅವಕಾಶಗಳು ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಲಾಭವನ್ನು ವಿತರಿಸಬಹುದೆಂದು ಸಂವಿಧಾನವು ನಿರೀಕ್ಷಿಸಿತ್ತು. ಆದರೆ ದಲಿತರ ಸಾಂಕೇತಿಕ ಮತ್ತು ಸಾಂಸ್ಕೃತಿಕ ಲೋಕದ ಮೇಲೂ ಒಂದೇ ಪದದ ಬಳಕೆಯನ್ನು ಹೇರುತ್ತಿರುವ ಪ್ರಭುತ್ವದ ಕ್ರಮವು ಮಾತ್ರ ಅನಗತ್ಯವಾದದ್ದು ಮಾತ್ರವಲ್ಲ ನ್ಯಾಯಸಮ್ಮತವೂ ಅಲ್ಲ. ಆದರೆ ಒಂದೇ ಪದವನ್ನು ಹೇರುವ ಸರಕಾರದ ಕ್ರಮದ ಹಿಂದೆ ಸಂವಿಧಾನದಲ್ಲಿ ನಿರೀಕ್ಷಿಸಲಾದ ಸಬಲೀಕರಿಸುವ ಉದ್ದೇಶಗಳಿಗಿಂತ ಭಿನ್ನವಾದ ಗುರಿಯೊಂದು ಇದ್ದಂತಿದೆ.

ಒಂದು ವಿಭಿನ್ನತೆಯುಳ್ಳ ಸಮಾಜದ ಮೇಲೆ ಪರಿಶಿಷ್ಟ ಜಾತಿ ಎಂಬ ಪದವನ್ನು ಒಂದು ಸಾರ್ವತ್ರಿಕ ರೀತಿಯಲ್ಲಿ ಹೇರುವ ಹುನ್ನಾರವನ್ನು ಸರಕಾರ ಮಾಡುತ್ತಿದೆ. ‘ಪರಿಶಿಷ್ಟ ಜಾತಿ’ ಎಂಬ ಪದಕ್ಕೆ ತನ್ನ ಬೆಂಬಲವನ್ನು ಸೂಚಿಸುವ ಮೂಲಕ ದಲಿತ ಎಂಬ ಪದವನ್ನು ಕಳಂಕಿತಗೊಳಿಸಿ ಅದರ ಪರಿಧಿಯಿಂದ ದಲಿತ ಮತ್ತು ಬೌದ್ಧರಿಬ್ಬರನ್ನೂ ದೂರ ಮಾಡುವ ಉದ್ದೇಶ ಪ್ರಭುತ್ವಕ್ಕಿದೆ. ದಲಿತ ಪದ ಬಳಕೆಯ ಬಗ್ಗೆ ಪ್ರಸ್ತುತ ಕೆಲವು ಬೌದ್ಧರು ಕೋರಿರುವ ಕಾನೂನು ಕ್ರಮಗಳು ಅಂತಿಮವಾಗಿ ದಲಿತರ ಸಾಂಕೇತಿಕ ಲೋಕವ್ಯವಸ್ಥೆಯ ಮೇಲೆಯೂ ಪ್ರಭುತ್ವವು ತನ್ನ ಪರಮಾಧಿಕಾರವನ್ನು ಚಲಾಯಿಸುವ ಅವಕಾಶವನ್ನು ಒದಗಿಸುತ್ತದೆ. ದಲಿತರ ಇಂತಹ ಸಾಂಕೇತಿಕ ಲೋಕವ್ಯವಸ್ಥೆಯು ತನ್ನೊಳಗೆ ದಮನಿತರ ನಡುವೆ ಏರ್ಪಟ್ಟಿರುವ ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಒಡನಾಟಗಳನ್ನೂ ಮತ್ತು ಪರಿವರ್ತನಾ ಸಂಕೇತಗಳ ಸುತ್ತ ಅವರೆಲ್ಲಾ ವಿಶಾಲವಾಗಿ ಸಂಘಟಿತಗೊಂಡಿರುವ ವಿದ್ಯಮಾನವನ್ನೂ ಒಳಗೊಂಡಿದೆ. ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆಯೆಂದರೆ ಮರಾಠವಾಡ ವಿಶ್ವವಿದ್ಯಾನಿಲಯಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಇಡಬೇಕೆಂದು ಒತ್ತಾಯಿಸಿ 1978ರಲ್ಲಿ ದಿಲ್ಲಿಯ ಬೋಟ್‌ಕ್ಲಬ್‌ನಲ್ಲಿ ಲಕ್ಷಾಂತರ ದಲಿತ ಪ್ಯಾಂಥರ್ಸ್‌ಗಳು ನಡೆಸಿದ ಬೃಹತ್ ಪ್ರದರ್ಶನ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ರೋಹಿತ್ ವೇಮುಲಾರ ಸಾವಿಗೆ ಕಾರಣವಾದ ವ್ಯವಸ್ಥಿತ ಕಿರುಕುಳ ಮತ್ತು ಅಪಮಾನಗಳ ವಿರುದ್ಧ ಹುಟ್ಟಿಕೊಂಡ ಬೃಹತ್ ಮತ್ತು ವಿಶಾಲ ನೆಲೆಯ ಪ್ರತಿರೋಧಗಳು. ವಿಶಾಲ ಸನ್ನಿವೇಶದ ಹಿನ್ನೆಲೆಯಲ್ಲೇ ‘ದಲಿತ’ ಎಂಬ ಪದವನ್ನು ‘ಪರಿಶಿಷ್ಟ ಜಾತಿ’ ಎಂಬ ಸೀಮಿತಾರ್ಥಕ್ಕೆ ಇಳಿಸಲಾಗುವುದಿಲ್ಲ.

ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News