ರಾಷ್ಟ್ರಪತಿಗೆ ದೂರು ಕೊಟ್ಟರೂ ಹೆದರುವ ಪ್ರಶ್ನೆಯಿಲ್ಲ: ಕುಮಾರಸ್ವಾಮಿ
ಬೆಂಗಳೂರು, ಸೆ.20: ರಾಜ್ಯಪಾಲರಿಗಲ್ಲ, ರಾಷ್ಟ್ರಪತಿಗೆ ಬೇಕಾದರೂ ಬಿಜೆಪಿ ದೂರು ಕೊಡಲಿ. ಅವರ ಬೆದರಿಕೆಗಳಿಗೆಲ್ಲ ಹೆದರುವ ಪ್ರಶ್ನೆಯೇ ಇಲ್ಲವೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಗುರುವಾರ ಬಿಜೆಪಿ ವಿರುದ್ಧ ದಂಗೆ ಏಳಬೇಕಾಗುತ್ತದೆ ಎಂಬ ಹೇಳಿಕೆಯ ವಿರುದ್ಧ ಬಿಜೆಪಿ ನಾಯಕರು ರಾಜ್ಯಪಾಲರಿಗೆ ದೂರು ಕೊಡುವ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರು ಸಮ್ಮಿಶ್ರ ಸರಕಾರಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಇದಕ್ಕೆಲ್ಲ ಹೆದರಿದರೆ ರಾಜ್ಯ ನಡೆಸಲು ಸಾಧ್ಯವಾಗುತ್ತದೆಯೆ ಎಂದು ತಿಳಿಸಿದರು.
ಬಿಜೆಪಿಯವರು ಅಧಿಕಾರದ ದಾಹಕ್ಕಾಗಿ ಸುಗಮವಾಗಿ ನಡೆಯುತ್ತಿರುವ ಸಮ್ಮಿಶ್ರ ಸರಕಾರದ ವಿರುದ್ಧ ಮುಗಿ ಬಿದ್ದಿದ್ದಾರೆ. ಇಂತಹ ಸ್ವಾರ್ಥ ಬಿಜೆಪಿ ನಾಯಕರೊಂದಿಗೆ ಕಾಂಗ್ರೆಸ್-ಜೆಡಿಎಸ್ನ ಯಾವ ಶಾಸಕರೂ ಕೈ ಜೋಡಿಸುವುದಿಲ್ಲ. ಇಷ್ಟಾಗಿಯೂ ಬಿಜೆಪಿ ಪ್ರಜಾಪ್ರಭುತ್ವಕ್ಕೆ ವಿರುದ್ಧ ಕಾರ್ಯತಂತ್ರಗಳನ್ನು ಮುಂದುವರೆಸುತ್ತಿದೆ ಎಂದು ಅವರು ಆರೋಪಿಸಿದರು.