ಶಾಸಕರ ಖರೀದಿಗೆ ಆಸ್ಪದ ನೀಡದಂತೆ ಸ್ಪೀಕರ್‌ಗೆ ಜೆಡಿಎಸ್ ಮನವಿ

Update: 2018-09-21 14:37 GMT

ಬೆಂಗಳೂರು, ಸೆ.21: ಜನರಿಂದ ಆಯ್ಕೆಯಾದ ಯಾವುದೇ ಶಾಸಕರು ಮತದಾರರಿಗೆ ಮತ್ತು ಆ ವಿಧಾನಸಭಾ ಕ್ಷೇತ್ರಕ್ಕೆ ಉತ್ತರದಾಯಿತ್ವವನ್ನು ಹೊಂದಿರುತ್ತಾರೆ. ರಾಜಕೀಯ ಪ್ರಭಾವ, ಬೆದರಿಕೆ, ಒತ್ತಡ ಅಥವಾ ಹಣದ ಆಮಿಷಕ್ಕಾಗಿ ಮತ್ತು ಅಧಿಕಾರದ ಲಾಲಸೆಗಾಗಿ ಆಯ್ಕೆಯಾದ ಸ್ಥಾನಕ್ಕೆ ರಾಜೀನಾಮೆ ನೀಡುವ ಯಾವುದೇ ಶಾಸಕರ ಪ್ರಯತ್ನವನ್ನು ತಡೆಯುವಂತೆ ಸ್ಪೀಕರ್ ರಮೇಶ್‌ಕುಮಾರ್‌ಗೆ ಬರೆದಿರುವ ಪತ್ರದಲ್ಲಿ ಜೆಡಿಎಸ್ ವಕ್ತಾರ ರಮೇಶ್‌ಬಾಬು ಮನವಿ ಮಾಡಿದ್ದಾರೆ.

ರಾಜ್ಯ ಬಿಜೆಪಿ ಸಂವಿಧಾನದ ಆಶಯಗಳಿಗೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿ ಕಳೆದ ಒಂದು ತಿಂಗಳಿನಿಂದ ರಾಜ್ಯದ ಸಮ್ಮಿಶ್ರ ಸರಕಾರವನ್ನು ಅನೈತಿಕ ಮಾರ್ಗಗಳ ಮೂಲಕ ಅಸ್ಥಿರಗೊಳಿಸಲು ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ರಾಜ್ಯದಲ್ಲಿ ಸಮ್ಮಿಶ್ರ ಸರಕಾರವನ್ನು ಪತನಗೊಳಿಸುವುದಾಗಿ ಅನೇಕ ಸಂದರ್ಭಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಬಹಿರಂಗವಾಗಿ ಮತ್ತು ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರ ಹೇಳಿಕೆಗಳಿಗೆ ಪೂರಕವಾಗಿ ಇವರ ಪಕ್ಷದ ಕೇಂದ್ರ ಸಚಿವರು, ಸಂಸದರು, ಶಾಸಕರು ಹಾಗೂ ಪಕ್ಷದ ಪ್ರಮುಖರು ನಿರಂತರವಾಗಿ ಹೇಳಿಕೆಗಳನ್ನು ನೀಡುವುದರ ಜೊತೆಗೆ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ನಮ್ಮ ಪಕ್ಷದ ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್‌ಗೌಡರಿಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಬಿಜೆಪಿ 30 ಕೋಟಿ ರೂ.ಗಳ ಆಮಿಷ ನೀಡಿದೆ. ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ.ಕುಮಾರಸ್ವಾಮಿ, ವಿಜಯಪುರ ಜಿಲ್ಲೆಯ ನಾಗಠಾಣ ಕ್ಷೇತ್ರದ ಶಾಸಕ ದೇವಾನಂದ ಚೌಹಾಣ್, ನೆಲಮಂಗಲ ಕ್ಷೇತ್ರದ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿಗೆ ಹಣದ ಆಮಿಷವೊಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಪ್ರಭಾವ ಬೀರಿದ್ದಾರೆ ಎಂದು ರಮೇಶ್‌ಬಾಬು ಆರೋಪಿಸಿದ್ದಾರೆ.

ಅದೇ ರೀತಿ ಕಾಂಗ್ರೆಸ್ ಪಕ್ಷದ ಎಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ಹಿರೆಕೆರೂರು ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್, ಹೊಸಕೋಟೆ ಕ್ಷೇತ್ರದ ಶಾಸಕ ಎಂ.ಟಿ.ಬಿ.ನಾಗರಾಜ್, ಕುಂದಗೋಳ ಕ್ಷೇತ್ರದ ಶಾಸಕ ಸಿ.ಎಸ್.ಶಿವಳ್ಳಿ, ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ, ಬೀದರ್ ಕ್ಷೇತ್ರದ ಶಾಸಕ ರಹೀಂಖಾನ್ ಸೇರಿದಂತೆ ಇನ್ನಿತರರಿಗೆ ಹಣದ ಆಮಿಷವೊಡ್ಡಿರುವುದಾಗಿ ಮತ್ತು ಅಕ್ರಮ ಮಾರ್ಗಗಳಿಂದ ಒತ್ತಡ ಹೇರುತ್ತಿರುವುದಾಗಿ ಮಾಧ್ಯಮಗಳಲ್ಲಿ ನಿರಂತರವಾಗಿ ಸುದ್ದಿಗಳು ಬರುತ್ತಿವೆ ಎಂದು ಅವರು ಹೇಳಿದ್ದಾರೆ.

ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಘಟನಾವಳಿಗಳನ್ನು ತಾವು ಹತ್ತಿರದಿಂದ ನೋಡಿರುತ್ತೀರಿ. ಶಾಸಕರನ್ನು ಖರೀದಿ ಮಾಡುವ ಪ್ರಯತ್ನ ಹಾಗೂ ಹಣಕ್ಕಾಗಿ ಆಯ್ಕೆಯಾದ ಸ್ಥಾನಗಳಿಗೆ ರಾಜೀನಾಮೆ ನೀಡುವ ಯಾವುದೇ ಪ್ರಯತ್ನ ಅತ್ಯಂತ ಅವಮಾನಕರವಾದ ಸಂಗತಿಯಾಗಿದೆ ಎಂದು ರಮೇಶ್‌ಬಾಬು ತಿಳಿಸಿದ್ದಾರೆ.

ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಯಾವುದೇ ಚುನಾಯಿತ ಶಾಸಕರು ಇಂತಹ ಅಕ್ರಮಗಳಲ್ಲಿ ಭಾಗಿಯಾಗಿದ್ದರೆ ಅಥವಾ ಇಂತಹ ಅಕ್ರಮಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕುಮ್ಮಕ್ಕು ನೀಡುವ ರಾಜಕೀಯ ಪಕ್ಷ, ಅದರ ಪದಾಧಿಕಾರಿಗಳು, ಸಂಸದ, ಶಾಸಕರು ಹಾಗೂ ಸಮಾಜಘಾತುಕ ವ್ಯಕ್ತಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿ ರಮೇಶ್‌ಬಾಬು ಕೋರಿದ್ದಾರೆ.

ಅವಶ್ಯಕವಾದಲ್ಲಿ ಅಕ್ರಮ ಚಟುವಟಿಕೆ ಮೂಲಕ ಸಂಸದೀಯ ವ್ಯವಸ್ಥೆಯನ್ನು ಘಾಸಿಗೊಳಿಸುತ್ತಿರುವ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲು ಕ್ರಮ ಕೈಗೊಳ್ಳಬೇಕಾಗಿ ಕೋರುತ್ತೇವೆ. ಜನತಂತ್ರದ ರಕ್ಷಣೆ, ವೌಲ್ಯಗಳ ಪ್ರತಿಪಾದನೆ ಮತ್ತು ಸಂಸದೀಯ ವ್ಯವಸ್ಥೆಯನ್ನು ಗೌರವಿಸುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News