ಬೆಂಗಳೂರು: ಠಾಣೆಯಲ್ಲಿ ವ್ಯಕ್ತಿ ನಿಗೂಢ ಸಾವು ಪ್ರಕರಣ; ಸಿಐಡಿ ತನಿಖೆ

Update: 2018-09-21 16:28 GMT

ಬೆಂಗಳೂರು, ಸೆ.21: ಕಳವು ಪ್ರಕರಣದ ವಿಚಾರಣೆಗೆ ಕರೆತಂದಿದ್ದ ಆರೋಪಿ ಪೊಲೀಸ್ ಠಾಣೆಯ ಕಟ್ಟಡದಿಂದ ಜಿಗಿದು ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣ ಸಂಬಂಧ ಸಿಐಡಿ ತನಿಖೆ ನಡೆಸಲಿದೆ.

ನಗರದ ಅಮೃತಹಳ್ಳಿ ಠಾಣೆ ಪೊಲೀಸರು ವಿಚಾರಣೆಗೆ ಕರೆತಂದಿದ್ದ ವ್ಯಕ್ತಿ ಸತೀಶ್ ಮಹಡಿಯಿಂದ ಕೆಳಗೆ ಬಿದ್ದು ಗುರುವಾರ ಮೃತಪಟ್ಟಿದ್ದ. ಈ ಸಂಬಂಧ ಸಿಐಡಿ ಪೊಲೀಸರು ಅಮೃತಹಳ್ಳಿ ಪೊಲೀಸ್ ಠಾಣೆಗೆ ತೆರಳಿ ತನಿಖೆ ಕೈಗೊಳ್ಳಲಿದ್ದಾರೆ.

ಪೊಲೀಸರು ಈತನನ್ನು ವಿಚಾರಣೆಗೆ ಕರೆತರುತ್ತಿದ್ದಾಗ ತಪ್ಪಿಸಿಕೊಂಡು ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೋ, ಇಲ್ಲ ಪೊಲೀಸರ ಹೊಡೆತ ತಾಳಲಾಗದೆ ತಪ್ಪಿಸಿಕೊಳ್ಳಲು ಹೋಗಿ ಸಾವನ್ನಪ್ಪಿದ್ದಾನೆಯೋ ಅಥವಾ ಯಾರಾದರೂ ತಳ್ಳಿದ್ದಾರೆಯೋ ಎಂಬ ಬಗ್ಗೆ ಸಿಐಡಿ ಪೊಲೀಸರ ತನಿಖೆಯಿಂದ ತಿಳಿದುಬರಲಿದೆ.

ಆರೋಪಿಯ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಮೂಲತಃ ರಾಮನಗರ ಜಿಲ್ಲೆ, ವೀರಸಾಗರ ನಿವಾಸಿಯಾದ ಆರೋಪಿ ಸತೀಶನ ವಿರುದ್ಧ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಪೊಲೀಸರ ಕೈಗೆ ಸಿಕ್ಕಿ ಜೈಲಿಗೆ ಹೋಗಿ ಬಂದಿದ್ದರೂ ಸಹ ತನ್ನ ಚಾಳಿ ಬಿಡದೆ ಮನೆಗಳ್ಳತನ ಮಾಡಿ ಬಂಧಿತನಾಗಿ, ಇದೀಗ ಕಟ್ಟಡದಿಂದ ಜಿಗಿದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News