ಪತಿಯ ಕೊಲೆ ಪ್ರಕರಣ: ಪತ್ನಿ, ಪ್ರಿಯಕರ ಬಂಧನ

Update: 2018-09-22 12:37 GMT

ಬೆಂಗಳೂರು, ಸೆ.22: ಪ್ರಿಯಕರನ ಜತೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದ ಆರೋಪ ಪ್ರಕರಣ ಸಂಬಂಧ ಪತ್ನಿ ಸೇರಿ ಇಬ್ಬರನ್ನು ಇಲ್ಲಿನ ಈಶಾನ್ಯ ವಿಭಾಗದ ಯಲಹಂಕ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ಹೋಬಳಿಯ ವೀರಸಾಗರ ಗ್ರಾಮದ ನಿವಾಸಿ ಮಮತಾ(23) ಮತ್ತು ಯಶವಂತಪುರದ ಬಿಕೆ ನಗರ ನಿವಾಸಿ ಅಪ್ಪು(24) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ವೀರಸಾಗರ ಗ್ರಾಮದಿಂದ ರಾಮಗೊಂಡನಹಳ್ಳಿಗೆ ಹೋಗುವ ರಸ್ತೆ ಪಕ್ಕದಲ್ಲಿ ಸಗಾಯ್ರಾಜ್(30) ಎಂಬ ವ್ಯಕ್ತಿಯನ್ನು ದುಷ್ಕರ್ಮಿಗಳು ಕತ್ತು ಬಿಗಿದು ಕೊಲೆ ಮಾಡಿದ್ದ ಬಗ್ಗೆ ಯಲಹಂಕ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು, ಹಲವು ಮಾಹಿತಿ ಕಲೆ ಹಾಕಿ ಮೃತನ ಪತ್ನಿ ಹಾಗೂ ಪ್ರಿಯಕರನನ್ನು ಬಂಧಿಸಿದ್ದಾರೆ.

ಮಮತಾ ಮದುವೆಯಾಗುವ ಮುನ್ನವೇ ಒಂದು ಮಗುವಿದ್ದ ಯಶವಂತಪುರ ನಿವಾಸಿ ಅಪ್ಪುಎಂಬುವವರನ್ನು ಪ್ರೀತಿಸುತ್ತಿದ್ದು, ಈ ವಿಚಾರ ತಿಳಿದ ಮಮತಾ ಮನೆಯವರು ಸಗಾಯ್ರಾಜ್ ಎಂಬುವರೊಂದಿಗೆ 5 ವರ್ಷದ ಹಿಂದೆ ಮದುವೆ ಮಾಡಿಸಿದ್ದು, ದಂಪತಿಗೆ ಮಕ್ಕಳಿರಲಿಲ್ಲ. ಈ ನಡುವೆ ಮಮತಾ ತನ್ನ ಪ್ರಿಯಕರನೊಂದಿಗೆ ಅಕ್ರಮ ಸಂಬಂಧ ಮುಂದುವರಿಸಿದ್ದರು ಎನ್ನಲಾಗಿದೆ.

ಮಮತಾ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿ ಸೆ.18ರಂದು ಮಧ್ಯರಾತ್ರಿ ಪತಿ ಸಗಾಯ್ರಾಜ್‌ನಿಗೆ ಮದ್ಯ ಸೇವನೆ ಮಾಡುವಂತೆ ಹೇಳಿ ಕಾರಿನಲ್ಲಿ ಸುತ್ತಾಡಿಸಿದ್ದಾರೆ. ತದನಂತರ ಸಂಭ್ರಮ್ ಕಾಲೇಜು ಬಳಿ ಇರುವ ಅಂಬಾಭವಾನಿ ದೇವಸ್ಥಾನದ ಸಮೀಪ ನಿರ್ಮಾಣ ಹಂತದ ಕಟ್ಟಡದ ಬಳಿ ಪತಿಯ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಮಾಹಿತಿ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News