ಅ.2ರ ಅನಿರ್ದಿಷ್ಟಾವಧಿ ಧರಣಿಗೆ ಬಹಿಷ್ಕೃತ ಹಿತಕಾರಿಣಿ ಸಭಾ ಬೆಂಬಲ
ಬೆಂಗಳೂರು, ಸೆ.24: ಎ.ಜಿ.ಸದಾಶಿವ ಆಯೋಗ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವಂತೆ ಅ.2ರಂದು ಸ್ವಾತಂತ್ರ ಉದ್ಯಾನವನದಲ್ಲಿ ಮಾದಿಗ ಸಮುದಾಯದ ಒಕ್ಕೂಟ ಕೈಗೊಂಡಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಬಹಿಷ್ಕೃತ ಹಿತಕಾರಿಣಿ ಸಭಾ ಬೆಂಬಲವನ್ನು ನೀಡಲಿದೆ ಎಂದು ತಿಳಿಸಿದೆ.
ಈ ಕುರಿತು ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಭಾದ ಅಧ್ಯಕ್ಷ ಡಾ.ಎಚ್.ಆರ್.ಸುರೇಂದ್ರ ಮಾತನಾಡಿ, ರಾಜ್ಯವನ್ನು ಆಳಿದ ಜನಾಂಗಗಳು ಹೊಲೆಮಾದಿಗರನ್ನು ಒಡೆದು ಆಳುವ ಧೋರಣೆಯನ್ನು ಇದುವರೆಗೂ ಮುಂದುವರೆಸಿದ್ದಾರೆ. ನಾಡಿನ ಸಮಸ್ತ ಸಂಪತ್ತು ಆಯಾ ಜಾತಿ ಜನಾಂಗಗಳಿಗೆ ಜಾತಿ ಜನ ಸಂಖ್ಯಾಗನುಗುಣವಾಗಿ ಹಂಚಿಕೆಯಾಗಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಹೊಲೆಯ ಮತ್ತು ಮಾದಿಗ ಸಮುದಾಯದವರು 1.8ಕೋಟಿ ಜನಸಂಖ್ಯೆಯಿದ್ದರೂ ಶಿಕ್ಷಣ, ಆಡಳಿತ, ಉದ್ಯೋಗ ಮತ್ತು ರಾಜಕೀಯ ರಂಗಗಳಲ್ಲಿ ಅತೀವ ಅನ್ಯಾಯಕ್ಕೆ ಗುರಿಯಾಗಿದ್ದು, ಅಸ್ಪಶ್ಯರಿಗೆ ಪ್ರತ್ಯೇಕ ಮೀಸಲಾತಿ ಕಾಯ್ದೆ ಜಾರಿಯಾಗಬೇಕು. ಎಸ್ಸಿ, ಎಸ್ಟಿ ಭಡ್ತಿ ಮೀಸಲಾತಿಯನ್ನು 16(4ಎ) ಸಂರಕ್ಷಿಸಿ ಅಟ್ರಾಸಿಟಿ ಕಾಯ್ದೆಯ ಮೂಲವನ್ನು ರಕ್ಷಿಸಬೇಕೆಂದು ಆಗ್ರಹಿಸಿದರು.