ಅಕ್ಟೋಬರ್ 10 ರೊಳಗೆ ಸಚಿವ ಸಂಪುಟ ವಿಸ್ತರಣೆ: ದಿನೇಶ್ ಗುಂಡೂರಾವ್

Update: 2018-09-26 13:47 GMT

ಬೆಂಗಳೂರು, ಸೆ. 26: 'ಸಚಿವ ಸಂಪುಟ ವಿಸ್ತರಣೆ ಅಕ್ಟೋಬರ್ 10ರ ಒಳಗೆ ಆಗಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೇಳಿದ್ದಾರೆ. ಅಕ್ಟೋಬರ್ 2ಕ್ಕೆ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದೇನೆ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ 4ಕ್ಕೆ ವಿಧಾನ ಪರಿಷತ್ ಚುನಾವಣೆಯೂ ನಡೆಯಲಿದ್ದು, ಪಿತೃಪಕ್ಷದ ಹಿನ್ನೆಲೆಯಲ್ಲಿ, ನಮ್ಮ ಪಕ್ಷದಲ್ಲೂ ಜ್ಯೋತಿಷ್ಯ ನೋಡುವವರು ಇದ್ದಾರೆ. ಆ ಬಳಿಕ ಸೂಕ್ತ ಸಮಯ ನಿಗದಿ ಮಾಡಲಾಗುವುದು ಎಂದರು.

ಶಾಸಕರು ತಮ್ಮ ಸಮಸ್ಯೆಗಳನ್ನ ಹೇಳಿಕೊಂಡಿದ್ದಾರೆ. ಅದರ ಬಗ್ಗೆ ಸಲಹೆ-ಸೂಚನೆ ನೀಡಿದ್ದೇವೆ. ಯಾರೂ ಅಸಮಾಧಾನರಾಗಿಲ್ಲ. ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡದಂತೆ ತಿಳಿಸಿದ್ದೇವೆ. ಪಕ್ಷದ ವಿರುದ್ಧ ಹೇಳಿಕೆ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಕ್ಷದ ವಿರುದ್ಧ ಹೇಳಿಕೆ ನೀಡಿದರೆ ಅವರು ಎಷ್ಟೇ ದೊಡ್ಡವರಿದ್ದರೂ ಕ್ರಮ ನಿಶ್ಚಿತ. ಪಕ್ಷದೊಳಗಿನ ಚರ್ಚೆ ನಮಗಷ್ಟೇ ಗೊತ್ತಿರುತ್ತದೆ. ಅಲ್ಲಿ ಹೀಗೆ ಆಯಿತು, ಇಲ್ಲಿ ಹೀಗೆ ಆಯಿತಂತೆ ಅಂತ ಊಹೆ ಮಾಡಿದರೆ ಅದಕ್ಕೆ ಉತ್ತರ ನೀಡಲು ಸಾಧ್ಯವಿಲ್ಲ. ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News