ಎಲ್ಲ ವರ್ಗದ ಮಕ್ಕಳು ಒಂದೇ ಶಾಲೆಯಲ್ಲಿ ಕಲಿಯುವಂತಾಗಬೇಕು: ಡಾ.ಎಲ್.ಹನುಮಂತಯ್ಯ

Update: 2018-09-30 16:13 GMT

ಬೆಂಗಳೂರು, ಸೆ. 30: ಸರಕಾರದ ಉನ್ನತ ಅಧಿಕಾರಿಗಳು ಹಾಗೂ ಬಡವರ ಮಕ್ಕಳು ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸಮಾಡಿದಾಗ ಮಾತ್ರ 75ನೆ ಸ್ವಾತಂತ್ರೋತ್ಸವ ಆಚರಿಸುವುದಕ್ಕೆ ಅರ್ಥ ಬರುತ್ತದೆ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ ಹೇಳಿದ್ದಾರೆ.

ರವಿವಾರ ವಿಜಯನಗರದ ಕಾಸಿಯಾ ಸಭಾಂಗಣದಲ್ಲಿ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಜಯಂತಿ ಅಂಗವಾಗಿ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಐಎಎಸ್ ಅಧಿಕಾರಿಯ ಮಕ್ಕಳು ಹಾಗೂ ಪೌರಕಾರ್ಮಿಕರ ಮಕ್ಕಳು ಒಂದೇ ಶಾಲೆಯಲ್ಲಿ ಓದುವಂತೆ ಆಗಬೇಕು. ಸರಕಾರಿ ಶಾಲೆಗಳನ್ನು ಉಳಿಸಬೇಕಾದರೆ ಸಮಾನ ಶಿಕ್ಷಣ ಪದ್ದತಿ ತರುವ ಅವಶ್ಯಕತೆ ಇದೆ. ಈ ಕುರಿತು ಎಲ್ಲರೂ ಚಿಂತನೆ ಮಾಡಬೇಕಿದೆ ಎಂದು ತಿಳಿಸಿದರು.

ಸರಕಾರಿ ಶಾಲಾ ಮಕ್ಕಳಿಗೆ ವಿವಿಧ ಸೌಲಭ್ಯಗಳು ದೊರೆಯುತ್ತಿದ್ದರೂ ಮಕ್ಕಳು ಶಾಲೆಗೆ ಏಕೆ ಬರುತ್ತಿಲ್ಲ ಎಂಬುದನ್ನು ಸರಕಾರವು ವಿಮರ್ಶೆ ಮಾಡಿಕೊಳ್ಳಬೇಕು. ಸರಕಾರಿ ಶಾಲೆಗಳಲ್ಲಿ ನಮ್ಮ ಮಕ್ಕಳು ಓದಿದರೇ ಉಜ್ವಲ ಭವಿಷ್ಯವಿದೆ ಎಂದು ಪೋಷಕರಲ್ಲಿ ನಂಬಿಕೆ ತರಿಸಬೇಕು. ಅಲ್ಲದೆ, ಖಾಸಗಿ ಶಾಲೆಗಳ ಗುಣಮಟ್ಟವನ್ನು ಸರಕಾರಿ ಶಾಲೆಗಳಲೂ ಕೊಟ್ಟಾಗ ಮಾತ್ರ ಕನ್ನಡ ಶಾಲೆಗಳು ಉಳಿಯುತ್ತವೆ ಎಂದರು.

ಈಗ ನಾವು ನೀವು ಗಂಭೀರವಾಗಿ ಚಿಂತನೆ ಮಾಡುವ ಕಾಲ ಬಂದಿದೆ. ಸರಕಾರಿ ಶಾಲೆಗಳನ್ನು ಉಳಿಸುವ ಕೆಲಸವಾಗಬೇಕು. ಸೋಮಣ್ಣ, ನಾನು, ಮೇಲ್ಮನೆ ಸದಸ್ಯ ದೇವೇಗೌಡ ಸರಕಾರಿ ಶಾಲೆಯಲ್ಲಿ ಓದಿದ್ದೇವೆ. ಎಪ್ಪತ್ತರ ದಶಕದಲ್ಲಿ ಏನೂ ಸೌಲಭ್ಯಗಳಿರಲಿಲ್ಲ, ಈಗ ಎಲ್ಲವೂ ಸಿಗುತ್ತಿದೆ. ಆದರೆ, ಯಾವ ಮಕ್ಕಳೂ ಶಾಲೆಗೆ ಬರುತ್ತಿಲ್ಲ. ಹೀಗಾಗಿ ನಾವೆಲ್ಲ ಮಕ್ಕಳನ್ನು ಸರಕಾರಿ ಶಾಲೆ ಕಡೆಗೆ ತರುವ ಅವಶ್ಯವಿದೆ ಎಂದು ಅಭಿಪ್ರಾಯಪಟ್ಟರು.

20 ಸಾವಿರ ಸರಕಾರಿ ಶಾಲೆ ಮುಚ್ಚಬೇಕೆಂದು ಸರಕಾರದ ವರದಿಯಲ್ಲಿದೆ. ಕೋಲಾರದ ಒಂದು ಶಾಲೆಯಲ್ಲಿ ಒಂದು ಮಗುವಿಗೆ ಒಬ್ಬ ಶಿಕ್ಷಕನಿರುವುದನ್ನು ಗಮನಿಸಿದಾಗ ವಿದ್ಯಾರ್ಥಿಯಲ್ಲಿ ಏಕತಾ ಭಾವ ಕಾಡುತ್ತದೆ. ಹೀಗಾಗಿ ಇಂತಹ ಶಾಲೆಗಳನ್ನು ಮುಚ್ಚಲು ಯಾವುದೇ ಸಂದೇಹವಿಲ್ಲ ಎಂದರು.

ಗಾಂಧೀಜಿಯವರು ಕಾಂಗ್ರೆಸ್ ಸದಸ್ಯರಾಗುವವರಿಗೆ ಖಾದಿ ಧರಿಸಬೇಕು, ಮಧ್ಯ ಸೇವಿಸಬಾರದು, ಹರಿಜನ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಳ್ಳಬೇಕೆಂದು 3 ಷರತ್ತುಗಳನ್ನು ಹಾಕಿದ್ದರು, ಎಲ್ಲ ಸದಸ್ಯರು ಮೊದಲ ಷರತ್ತಿಗೆ ಒಪ್ಪಿದರು, ಎರಡನೆ ಷರತ್ತಿಗೆ ಸಾರ್ವಜನಿಕವಾಗಿ ಮಧ್ಯ ಸೇವಿಸದೆ ಕದ್ದು ಮುಚ್ಚಿ ಕುಡಿಯುತ್ತಿದ್ದರು, ಇನ್ನು ಮೂರನೆ ಷರತ್ತಿಗೆ ನಾವು ಒಪ್ಪಿದರೂ ನಮ್ಮ ಮನೆಯಲ್ಲಿ ಒಪ್ಪುವುದಿಲ್ಲ ಎಂದು ಕೈಚೆಲ್ಲಿದರು ಎಂದು ನಾಳೆ ಗಾಂಧೀಜಿಯವರ 150 ಜಯಂತ್ಯುತ್ಸವ ಇರುವುದನ್ನು ನೆನಪಿಸಿಕೊಂಡು ತಿಳಿಸಿದರು. ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವುದು ನಮ್ಮೆಲ್ಲರ ಜವಾಬ್ದಾರಿ. ಸಮಾಜದಲ್ಲಿ ಕೆಲವರು ಕೆಟ್ಟವರು ಇದ್ದಾರೆ. ಇನ್ನು ಕೆಲವರು ಒಳ್ಳೆಯವರೂ ಇದ್ದಾರೆ. ಸಮಾಜವನ್ನು ಸ್ವಚ್ಛಗೊಳಿಸಿ ತಳಸಮುದಾಯವರಿಗೆ ಮುಕ್ತ ಅವಕಾಶ ಕೊಟ್ಟಿದೆ, ಸಮಾನತೆ ಕೊಟ್ಟಿಲ್ಲ. ಹಾಗಾಗಿ, ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜಕಾರಣದಲ್ಲಿ ಕೆಲವರು ಪಕ್ಷದಿಂದ ಬೆಳೆಯುತ್ತಾರೆ. ಕೆಲವರು ಸ್ವಯಂ ಶಕ್ತಿಯಿಂದ ಬೆಳೆಯುತ್ತಿದ್ದಾರೆ. ಪಕ್ಷದಲ್ಲಿದ್ದು ಪಕ್ಷಾತೀತವಾಗಿ ಬೆಳೆಯುವುದು ಬಲು ಅಪರೂಪ. ಅಂತವರ ಸಾಲಿನಲ್ಲಿ ಸೋಮಣ್ಣನವರು ಸೇರುತ್ತಾರೆ. ಸಮಾಜದ ಬೆಳವಣಿಗೆ ನಮ್ಮ ಉದ್ದೇಶ. ನಾವಿಬ್ಬರೂ ಬೇರೆ ಬೇರೆ ಜಾತಿಯಲ್ಲಿ ಹುಟ್ಟಿದರು ನಾವಿಬ್ಬರೂ ಮಾನವ ಜಾತಿಯವರು ಎಂದರು.

ಶೈಲಜಾ ಸೋಮಣ್ಣ ಮಾತನಾಡಿ, ಬಿಬಿಎಂಪಿ ಶಾಲೆಯ 110 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದವರಿಗೆ ಸನ್ಮಾನಿಸಲಾಗುತ್ತಿದೆ. ಇಂದಿನ ಯುವ ಪೀಳಿಗೆಗೆ ವಿಶ್ವೇಶ್ವರಯ್ಯರವರ ವಿಚಾರಗಳು ಸ್ಫೂರ್ತಿಯಾಗಿವೆ. ಅವರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಹಾದಿಯಲ್ಲಿ ನಾವೆಲ್ಲ ಹೋಗಬೇಕಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಸಹಕಾರ ಇಲಾಖೆ ನಿವೃತ್ತ ಪ್ರಧಾನ ಕಾರ್ಯದರ್ಶಿ ಡಾ.ಸಿ.ಸೋಮಶೇಖರ್, ವಿಧಾನ ಪರಿಷತ್ತು ಸದಸ್ಯ ವಿ.ಸೋಮಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News