ಬ್ಯಾಂಕುಗಳಿಗೆ ಸಾಲ ತೀರಿಸುವ ಪ್ರಕರಣ: ಡಿಆರ್ಎಟಿ ಆದೇಶ ಪ್ರಶ್ನಿಸಿ ಮಲ್ಯ ಸಲ್ಲಿಸಿದ್ದ ಅರ್ಜಿ ವಜಾ
ಬೆಂಗಳೂರು, ಅ.7: ಬ್ಯಾಂಕುಗಳಿಗೆ ಸಾಲ ತೀರಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ 3,101 ಕೋಟಿ ಠೇವಣಿ ಇರಿಸಬೇಕು ಎಂಬ ಸಾಲ ವಸೂಲಾತಿ ಮೇಲ್ಮನವಿ ನ್ಯಾಯಮಂಡಳಿ(ಡಿಆರ್ಎಟಿ) ಆದೇಶ ಪ್ರಶ್ನಿಸಿದ್ದ ವಿಜಯ ಮಲ್ಯ ಅಜಿಯರ್ನ್ನು ಹೈಕೋರ್ಟ್ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಕಾಯ್ದಿರಿಸಿದ್ದ ಆದೇಶವನ್ನು ಪ್ರಕಟಿಸಿದೆ. ಕಿಂಗ್ಫಿಷರ್ ಕಂಪೆನಿ 2005ರಲ್ಲಿ ಬ್ಯಾಂಕುಗಳಿಂದ ಸಾಲ ಪಡೆದಿತ್ತು. ಇದಕ್ಕೆ ಮಲ್ಯ ವೈಯಕ್ತಿಕ ಭದ್ರತೆ ನೀಡಿದ್ದರು. ಕಂಪೆನಿ ಸಕಾಲದಲ್ಲಿ ಸಾಲ ತೀರಿಸಿಲ್ಲ ಎಂಬ ಕಾರಣಕ್ಕೆ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಸೇರಿದಂತೆ 12 ಬ್ಯಾಂಕುಗಳು ಡಿಆರ್ಟಿ ಮೊರೆ ಹೋಗಿದ್ದವು.
ವಿಚಾರಣೆ ನಡೆಸಿದ್ದ ಡಿಆರ್ಟಿ ವಾರ್ಷಿಕ ಬಡ್ಡಿ ದರ ಶೇ.15.2ರಂತೆ 6,203 ಕೋಟಿ ಪಾವತಿ ಮಾಡಬೇಕು ಎಂದು 2013ರ ಮೇ 31ರಂದು ಆದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ ಮಲ್ಯ, ಚೈನ್ನೈನ ಸಾಲ ವಸೂಲಾತಿ ಮೇಲ್ಮನವಿ ನ್ಯಾಯಮಂಡಳಿ ಮೊರೆ ಹೋಗಿದ್ದರು. ಸಾಲಕ್ಕೆ ನನ್ನಿಂದ ಬಲವಂತವಾಗಿ ಭದ್ರತೆ ಪಡೆಯಲಾಗಿದೆ. ಕಾನೂನು ಪ್ರಕಾರ ನನ್ನ ಭದ್ರತೆ ಸಿಂಧು ಆಗುವುದಿಲ್ಲ ಎಂದು ಆಕ್ಷೇಪಿಸಿದ್ದರು. ಬ್ಯಾಂಕುಗಳು ಎಲ್ಲ ಕಂತುಗಳನ್ನೂ ಹಂತ ಹಂತವಾಗಿ ಸಮಯಕ್ಕೆ ಸರಿಯಾಗಿ ನೀಡಿದ್ದರೆ ಕಂಪೆನಿ ಮುಚ್ಚುವ ಪ್ರಮೇಯವೇ ಒದಗುತ್ತಿರಲಿಲ್ಲ ಎಂದು ಹೇಳಿದ್ದರು. ಆದರೆ, ಇದನ್ನು ಒಪ್ಪದ ಡಿಆರ್ಎಟಿ 3,101 ಕೋಟಿ ಠೇವಣಿ ಇರಿಸಬೇಕೆಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿದ್ದ ಮಲ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು.