ಯುವಕನ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಸೆರೆ

Update: 2018-10-11 14:01 GMT

ಬೆಂಗಳೂರು, ಅ.11: ಬೈಕ್ ಸವಾರರೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪ ಪ್ರಕರಣ ಸಂಬಂಧ ಇಬ್ಬರು ಯುವಕರನ್ನು ಬಂಧಿಸಿರುವ ಈಶಾನ್ಯ ವಿಭಾಗದ ಕೊಡಿಗೇಹಳ್ಳಿ ಠಾಣಾ ಪೊಲೀಸರು, 2 ಮೊಬೈಲ್ ಫೋನ್, ಚಾಕು, ಬೈಕ್ ಜಪ್ತಿ ಮಾಡಿದ್ದಾರೆ.

ಯಶವಂತಪುರದ ಮತ್ತಿಕೆರೆ 3ನೆ ಕ್ರಾಸ್, 2ನೇ ಮೇನ್ ನಿವಾಸಿ ಚೇತನ್ (22) ಹಾಗೂ ಯಶವಂತಪುರ 3ನೆ ಕ್ರಾಸ್ ರೈಲ್ವೆ ಪ್ಯಾರಲ್ ರಸ್ತೆ ನಿವಾಸಿಮುಹಮ್ಮದ್ ಮನ್ಸೂರ್ ಶರೀಫ್ (22) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಆ.19ರಂದು ರಾತ್ರಿ 10 ಗಂಟೆ ಸುಮಾರಿಗೆ ಚಂದ್ರಶೇಖರ್, ನಾರಾಯಣಸ್ವಾಮಿ ಎಂಬವರು ಬೈಕ್‌ನಲ್ಲಿ ರಿಂಗ್ ರಸ್ತೆಯ ಸರ್ವೀಸ್ ತಲುಪಿದಾಗ ಮರಳು ಲಾರಿ ನಿಲ್ದಾಣದ ಬಳಿ ಇಬ್ಬರು ಅಪರಿಚಿತರು ಇವರನ್ನು ಅಡ್ಡಗಟ್ಟಿ ಚಾಕು ತೋರಿಸಿ ಹಣ ಮತ್ತು ಮೊಬೈಲ್ ಕೊಡುವಂತೆ ಹೆದರಿಸಿದ್ದರು. ನಾರಾಯಣಸ್ವಾಮಿ ಅವರು ತನ್ನ ಮೊಬೈಲ್ ಮತ್ತು 3 ಸಾವಿರ ರೂ. ನಗದು ಅನ್ನು ಅರೋಪಿಗಳಿಗೆ ನೀಡಿದ್ದರು. ಆದರೆ, ಚಂದ್ರಶೇಖರ್ ಅವರು ನಗದು ನೀಡಿದ್ದರೂ ಮೊಬೈಲ್ ನೀಡಲು ನಿರಾಕರಿಸಿದಾಗ ಆರೋಪಿಗಳು ಚಾಕುವಿನಿಂದ ಚಂದ್ರಶೇಖರ್ ಅವರ ತೊಡೆಗೆ ಚುಚ್ಚಿ ಗಂಭೀರ ಸ್ವರೂಪದ ಗಾಯಗೊಳಿಸಿದ್ದರು ಎನ್ನಲಾಗಿದೆ.

ತಕ್ಷಣ ಚಂದ್ರಶೇಖರ್‌ನನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಮೃತಪಟ್ಟಿದ್ದರು. ಈ ಬಗ್ಗೆ ಕೊಡಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News