ಕೋಳಿ ಸಾಕಾಣಿಕೆ ದೊಡ್ಡ ಉದ್ಯಮವಾಗಿ ಬೆಳೆಸಲು ಅಗತ್ಯ ಕ್ರಮ: ಸಚಿವ ವೆಂಕಟರಾವ್ ನಾಡಗೌಡ

Update: 2018-10-12 16:19 GMT

ಬೆಂಗಳೂರು, ಅ.12: ರಾಜ್ಯದಲ್ಲಿ ಕೋಣಿ ಸಾಕಾಣಿಕೆ ಬೃಹತ್ ಉದ್ಯಮವಾಗಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ವತಿಯಿಂದ ಕೋಳಿ ಸಾಕಾಣೆದಾರರಿಗೆ ಅಗತ್ಯ ಪ್ರೋತ್ಸಾಹ ನೀಡಲಾಗುವುದು ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವರಾದ ವೆಂಕಟರಾವ್ ನಾಡಗೌಡ ತಿಳಿಸಿರು.

ಶುಕ್ರವಾರ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಗರದ ಕರ್ನಾಟಕ ಪಶುವೈದ್ಯಕೀಯ ಪರಿಷತ್‌ನಲ್ಲಿ ಆಯೋಜಿಸಿದ್ದ ವಿಶ್ವ ಮೊಟ್ಟೆ ದಿನ-2018 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಾಲು ಉತ್ಪಾದಕರ ಸಂಘದ ರೀತಿಯಲ್ಲಿ ಕೋಳಿ ಸಾಕಾಣಿಕೆ ಮಾಡುವ ಎಲ್ಲ ರೈತರು ಒಗ್ಗೂಡಿ ಸಹಕಾರ ಸಂಘಗಳ ಮುಖಾಂತರ ದೊಡ್ಡಮಟ್ಟದಲ್ಲಿ ಕೋಳಿ ಸಾಕಾಣಿಕೆ ಮಾಡಬೇಕು. ಈಗಾಗಲೆ ಕೋಳಿ ಸಾಕಾಣಿಕೆ ಮಾಡುತ್ತಿರುವ ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉಚಿತವಾಗಿ ಕೋಳಿಮರಿಗಳ ವಿತರಣೆ ಮಾಡಲಾಗುವುದು ಎಂದು ಅವರು ಹೇಳಿದರು.

ಕುಕ್ಕುಟ ಮಹಾ ಮಂಡಳಿ ಅಧ್ಯಕ್ಷ ಡಿ.ಕೆ.ಕಾಂತರಾಜು ಮಾತನಾಡಿ, ಹೆಚ್ಚು ಪೌಷ್ಟಿಕಾಂಶ ತುಂಬಿರುವಂತಹ ಮೊಟ್ಟೆಯನ್ನು ಒಬ್ಬ ವ್ಯಕ್ತಿಯು ವರ್ಷಕ್ಕೆ ಕನಿಷ್ಠ 180 ಮೊಟ್ಟೆ ಸೇವಿಸಬೇಕು ಆದರೆ, ಕರ್ನಾಟಕದಲ್ಲಿ ಕೇವಲ 69 ಮೊಟ್ಟೆ ಸೇವಿಸುತ್ತಿದ್ದಾನೆ. ಹೀಗಾಗಿ ಮೊಟ್ಟೆ ಸೇವನೆಯಿಂದ ಆಗಬಹುದಾದ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಮುಂಬರುವ ದಿನಗಳಲ್ಲಿ ಕೋಳಿ ಸಾಕಾಣಿಕೆ ಮಾಡುವ ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವಂತೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು. ಈ ವೇಳೆ ಮೊಟ್ಟೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಥಾ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News