ಹುಕ್ಕಾ ಬಾರ್ಗಳಿಗೆ ಬಿಸಿ ಮುಟ್ಟಿಸಿದ ಸಿಸಿಬಿ: 9 ಜನರ ಬಂಧನ, ನಗದು ಜಪ್ತಿ
ಬೆಂಗಳೂರು, ಅ.13: ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಹುಕ್ಕಾ ಬಾರ್ಗಳ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು 9 ಜನರನ್ನು ಬಂಧಿಸಿ 73,870 ರೂ. ನಗದು ಸೇರಿದಂತೆ ಹುಕ್ಕಾ ಪರಿಕರಗಳನ್ನು ಜಪ್ತಿ ಮಾಡಿದ್ದಾರೆ.
ಸುಬ್ರಹ್ಮಣ್ಯನಗರದ ಪ್ರಶಾಂತ್ ನಂದಿ(34), ಎಚ್ಎಸ್ಆರ್ ಲೇಔಟ್ನ ವಿನಯ್ (37), ಬಾಣಸವಾಡಿಯ ಐಸ್ಕೆಫೆ ಮಾಲಕ ಕಾರ್ತಿಕ್, ಕೋರ ಮಂಗಲದ ಅರೇಬಿ ಸಿಕ್ಯೂ ಕೆಫೆಯ ವ್ಯವಸ್ಥಾಪಕ ಅರುಣ್ ಸೇರಿದಂತೆ 9 ಜನರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.
ನಗರದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಹುಕ್ಕಾ ಬಾರ್ಗಳ ಮಾಹಿತಿ ಸಂಗ್ರಸಿದ ಸಿಸಿಬಿ ಪೊಲೀಸರು, ಏಳು ವಿಶೇಷ ತಂಡಗಳನ್ನು ರಚಿಸಿ ನಗರದ ಐದು ಪೊಲೀಸ್ ಠಾಣೆ ವ್ಯಾಪ್ತಿಯ ಒಟ್ಟು 7 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.
ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ವಿ.ಮರಿಯಪ್ಪ, ಬಿ. ಎಸ್. ಮೋಹನ್ ಕುಮಾರ್, ಪಿ.ಟಿ.ಸುಬ್ರಹ್ಮಣ್ಯ, ವೆಂಕಟೇಶ್ ಪ್ರಸನ್ನ, ಮಂಜುನಾಥ್ ಚೌದರಿ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ತನಿಖೆ ಮುಂದುವರೆಸಲಾಗಿದೆ