ಮಾಧ್ಯಮ ಕ್ಷೇತ್ರ ಮಲಿನಗೊಳ್ಳದಂತೆ ಎಚ್ಚರ ಅಗತ್ಯ: ಎಚ್.ಎಂ.ರೇವಣ್ಣ

Update: 2018-10-13 16:47 GMT

ಬೆಂಗಳೂರು, ಅ.13: ದೇಶದಲ್ಲಿ ಮಾಧ್ಯಮ ಕ್ಷೇತ್ರ ಮಲಿನವಾದರೆ ರಾಷ್ಟ್ರ ಮತ್ತು ರಾಜ್ಯ ರಾಜಕಾರಣವು ಅದೇ ಹಾದಿ ಹಿಡಿಯಲಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ನಗರದ ದೇವರಾಜ ಅರಸು ಭವನದಲ್ಲಿ ಮಾಧ್ಯಮ ಅಕಾಡೆಮಿ ಅಧ್ಯಕ್ಷ, ಪತ್ರಕರ್ತ ಎಂ.ಸಿದ್ದರಾಜು ಸಾಧನೆ ಮತ್ತು ಸಂಭ್ರಮ ಕುರಿತ ಸಿದ್ಧಹಸ್ತ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಇಂದಿನ ಮಾಧ್ಯಮಗಳ ಸ್ಥಿತಿಗತಿಗಳನ್ನು ನೋಡಿದರೆ ಆತಂಕ ಉಂಟಾಗುತ್ತದೆ. ಕೆಲವು ಚಾನಲ್‌ಗಳಲ್ಲಿ ಅವರೇ ಕೆಲಸ ಮಾಡಿಕೊಂಡು ಅವರೇ ಸಂಪಾದನೆ ಮಾಡಿಕೊಳ್ಳಬೇಕಾದ ಪರಿಸ್ಥಿತಿಗೆ ಮುಟ್ಟಿವೆ. ಈ ವಾತಾವರಣ ಬದಲಾಗದಿದ್ದರೆ ಮುಂದಿನ ದಿನಗಳು ಕಷ್ಟಕರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಾಧ್ಯಮದಲ್ಲಿ ಕೆಲಸ ಮಾಡುವವರು ತಾವು ಎಲ್ಲರಿಗಿಂತ ಮಿಗಿಲು ಎಂಬ ಭ್ರಮೆಯಲ್ಲಿದ್ದಾರೆ. 20 ವರ್ಷದ ಯುವತಿ ಮಾಜಿ ಪ್ರಧಾನಿ ದೇವೇಗೌಡರನ್ನು ಮಿಸ್ಟರ್ ದೇವೇಗೌಡ ಎಂದು ಹೆಸರಿಡಿದು ಮಾತನಾಡುವಷ್ಟು ಉದ್ಧಟತನದ ವಾತಾವರಣದೆ. ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಅದು ಸರಿಯಾಗಿದ್ದರೆ ಸಮಾಜಕ್ಕೆ ಒಳ್ಳೆಯದು, ಅಲ್ಲಿಯೂ ಮಲಿನ ವಾತಾವರಣ ನಿರ್ಮಾಣವಾದರೆ ಇತರೆ ಎಲ್ಲ ಕ್ಷೇತ್ರಗಳ ಮೇಲೆ ದುಷ್ಪರಿಣಾ ಬೀರಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಹಿರಿಯ ಪತ್ರಕರ್ತ ಸಿದ್ದರಾಜು ಬಹಳಷ್ಟು ಸಲಹೆಗಳನ್ನು ನೀಡಿದ್ದಾರೆ. 37 ವರ್ಷ ಸುದೀರ್ಘ ಜೀವನದಲ್ಲಿ ಸಿದ್ದರಾಜು ಎಂದಿಗೂ ರಾಜೀ ಮಾಡಿಕೊಂಡವರಲ್ಲ. ಸತ್ಯ, ಸುಳ್ಳುಗಳ ಜೊತೆ ನಿಷ್ಠುರವಾಗಿ ವರ್ತಿಸಿದವರು. ಅವರು ಕೆಲಸ ಮಾಡಿದ ಪಿಟಿಐ ಸಂಸ್ಥೆ ಇಂದಿಗೂ ಸತ್ಯಾಸತ್ಯತೆಯ ನಂಬಿಕೆಯನ್ನು ಉಳಿಸಿಕೊಂಡಿದೆ ಎಂದು ಅವರು ಹೇಳಿದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ಮಾತನಾಡಿ, ಕಾಡಿನಲ್ಲಿ ಯಾವುದೇ ಆಶ್ರಯಲ್ಲದೆ ಬೆಳೆದ ಮರದಂತೆ ಸಿದ್ದರಾಜು ಬೆಳೆದಿದ್ದಾರೆ. ಅತ್ಯಂತ ಹಿಂದುಳಿದ ಬಡ ಕುಟುಂಬದಿಂದ ಬಂದಿದ್ದಾರೆ. ಮಡಿವಾಳ ಸಮುದಾಯದಿಂದ ಬಂದು ಬಹಳ ಎತ್ತರದ ಸಾಧನೆ ಮಾಡಿದ ಅವರು, ಉದ್ಯೋಗದಲ್ಲಿ ಪಾವಿತ್ರತೆ ಕಾಪಾಡಿಕೊಂಡವರು. ಅವರು ಪಾಲಿಸಿದ ಉತ್ತಮ ವೃತ್ತಿ ಧರ್ಮದಿಂದಾಗಿ ಅವರಿಗೆ ಒಳ್ಳೆಯ ಸ್ಥಾನಗಳು ದಕ್ಕಿವೆ. ನಿಷ್ಪಕ್ಷಪಾತವಾಗಿ ಕೆಲಸ ಮಾಡಿಯೂ ಯಾರ ಶತ್ರುತ್ವವನ್ನು ಕಟ್ಟಿಕೊಳ್ಳದ ಉತ್ತಮ ಪತ್ರಕರ್ತ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಸಿದ್ದರಾಜು ಅವರು ನಡೆದು ಬಂದ ಹಾದಿ ಮತ್ತು ಸಾಧನೆಗಳ ಸಾಕ್ಷಚಿತ್ರ ಬಿಡುಗಡೆ ಮಾಡಲಾಯಿತು. ಸಿದ್ಧ ಹಸ್ತ ಪುಸ್ತಕದ ಸಂಪಾದಕರಾದ ಲಕ್ಷ್ಮಣ ಕೊಡಸೆ, ಹಿರಿಯ ಪತ್ರಕರ್ತರಾದ ಜಿ.ಡಿ.ಗೋಪಾಲ್, ಎ.ಕೆ.ಸತ್ಯ, ಡಾ.ಮೈ.ಸಿ.ಪಾಟೀಲ್, ಜಯಾಸಿದ್ದರಾಜ್, ಕೆಂಪರಾಜು, ನಂಜುಂಡಪ್ಪ, ಎಂ.ಎಸ್. ಮಣಿ, ಮಂಜುನಾಥ್ ಬೊಮ್ಮನಕಟ್ಟಿ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News