ಬೆಂಗಳೂರು : ಕೊಠಡಿಗೆ ನುಗ್ಗಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಶಾಲಾ ಮುಖ್ಯಸ್ಥನ ಹತ್ಯೆ

Update: 2018-10-14 14:15 GMT

ಬೆಂಗಳೂರು, ಅ.14:ಶಾಲಾ ಮುಖ್ಯಸ್ಥನೋರ್ವರಿಗೆ ದುಷ್ಕರ್ಮಿಗಳು ಚಾಕು ಇರಿದು ಹಲ್ಲೆ ನಡೆಸಿ, ಹತ್ಯೆಗೈದಿರುವ ಘಟನೆ ಇಲ್ಲಿನ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಅಗ್ರಹಾರ ದಾಸರಹಳ್ಳಿಯ ಹಾವನೂರು ಪಬ್ಲಿಕ್ ಶಾಲೆಯ ಮುಖ್ಯಸ್ಥ ರಂಗನಾಥ್ ನಾಯಕ್(63) ಕೊಲೆಯಾದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.

ರವಿವಾರ ಬೆಳಗ್ಗೆ ಕಾರ್ಯ ನಿಮಿತ್ತ ರಂಗನಾಥ್ ನಾಯಕ್, ಕೆಲ ಸಿಬ್ಬಂದಿಗಳು ಶಾಲೆಗೆ ಬಂದಿದ್ದರು. ಬೆಳಗ್ಗೆ 10ರ ಸಮಯದಲ್ಲಿ ರಂಗನಾಥ್ ನಾಯಕ್ ತಮ್ಮ ಕೊಠಡಿಯಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ಐದಾರು ಮಂದಿ ದುಷ್ಕರ್ಮಿಗಳು ಏಕಾಏಕಿ ಕೊಠಡಿಗೆ ನುಗ್ಗಿ ಮಾರಕಾಸ್ತ್ರಗಳಿಂದ ಥಳಿಸಿ ಮನಬಂದಂತೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ರಂಗನಾಥ್ ಅವರ ಚೀರಾಟ ಕೇಳಿ ಸಿಬ್ಬಂದಿಗಳು ಇವರ ಕೊಠಡಿ ಬಳಿ ಬಂದು ನೋಡುವಷ್ಟರಲ್ಲಿ ರಂಗನಾಥ್ ಅವರು ಸಾವನ್ನಪ್ಪಿದ್ದರು. ನಗರದ ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಗಡಿ ರಸ್ತೆ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News