ಕಾರಂಜಾ ಯೋಜನೆ ಮುಳುಗಡೆ ಸಂತ್ರಸ್ತರಿಗೆ ಮಾನವೀಯ ದೃಷ್ಟಿಯಿಂದ ಪರಿಹಾರಕ್ಕೆ ಕ್ರಮ: ಡಿ.ಕೆ. ಶಿವಕುಮಾರ್

Update: 2018-10-15 14:57 GMT

ಬೆಂಗಳೂರು, ಅ. 15: ಬೀದರ್‌ನ ಕಾರಂಜಾ ಯೋಜನೆ ಮುಳುಗಡೆ ಸಂತ್ರಸ್ತರು 60 ದಿನಗಳಿಂದ ಕೈಗೊಂಡಿದ್ದ ಧರಣಿ ಸತ್ಯಾಗ್ರಹ ಕೈಬಿಟ್ಟಿದ್ದು, ಮಾನವೀಯತೆ ದೃಷ್ಟಿಯಿಂದ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಭರವಸೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ರೈತರೊಂದಿಗಿನ ಸಭೆ ಬಳಿಕ ಮಾತನಾಡಿದ ಅವರು, ಯೋಜನೆಯಿಂದ 29 ಸಾವಿರ ಎಕರೆಗೆ ನೀರಾವರಿ ಗುರಿಯಿದೆ. 2018ರ ವೇಳೆಗೆ 24 ಸಾವಿರ ಎಕರೆಗೆ ನೀರಾವರಿ ಕಲ್ಪಿಸಲಾಗಿದೆ ಎಂದರು.

ಯೋಜನೆ ಮುಳುಗಡೆಯಾದ ರೈತರ ಭೂಮಿಗೆ ಪರಿಹಾರ ಕೊಟ್ಟಿಲ್ಲ. ನಿರಾಶ್ರಿತರ ದೃಢೀಕರಣ ಪತ್ರ ಸಿಕ್ಕಿಲ್ಲ ಎಂಬ ಬೇಡಿಕೆ ಹಾಗೂ ಪರಿಹಾರ ಕಲ್ಪಿಸಲು 2005ರಲ್ಲಿ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಅಧಿಕಾರಿ ಸಮಿತಿ ರಚಿಸಲಾಗಿತ್ತು. ಆ ಸಮಿತಿ ಒಟ್ಟು 55ಕೋಟಿ ರೂ.ಪರಿಹಾರ ಪಾವತಿಸುವಂತೆ ಶಿಫಾರಸು ಮಾಡಿತ್ತು. ಆದರೆ, ಆರ್ಥಿಕ ಇಲಾಖೆ ಸಮ್ಮತಿಸದ ಕಾರಣ ಸಂಪುಟ ಸಭೆ ವರದಿಯನ್ನು 2015ರಲ್ಲಿ ತಿರಸ್ಕರಿಸಿದೆ. ಇದೀಗ ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ, ರೈತರ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದರು.

ಈ ಯೋಜನೆಯ ಪರಿಹಾರ ಪಾವತಿಯನ್ನು ಮುಂದಿಟ್ಟುಕೊಂಡು ಇತರೆ ಯೋಜನೆಗಳ ಸಂತ್ರಸ್ತರು ಕೋರ್ಟ್ ಮೆಟ್ಟಿಲೇರುವ ಆತಂಕವಿದ್ದು, ಸರಕಾರ ಅತ್ಯಂತ ಎಚ್ಚರಿಕೆಯಿಂದ ಕಾನೂನು, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಅವಲೋಕಿಸಿ ಕ್ರಮವಹಿಸಲಿದೆ ಎಂದರು.

ಹೋರಾಟ ನಿಲ್ಲದು: ಸಭೆಯಲ್ಲಿ ಪಾಲ್ಗೊಂಡಿದ್ದ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಜಿಲಾನಿ ಪಟೇಲ್, ಮುಳುಗಡೆ ಸಂತ್ರಸ್ತರಿಗೆ 300ರೂ.ನಿಂದ ಪರಿಹಾರ ನೀಡಲಾಗಿದೆ. ಕೋರ್ಟ್ ಮೆಟ್ಟಿಲೇರಿದವರಿಗೆ ಬಡ್ಡಿ ಸಹಿತ ಎಕರೆಗೆ 88 ಸಾವಿರ ರೂ.ನೀಡಲು ಆದೇಶಿಸಿದೆ. ಅದೇ ರೀತಿ ಎಲ್ಲರಿಗೂ ಪರಿಹಾರ ನೀಡಬೇಕು. ರಾಜ್ಯ ಸರಕಾರ ಮೌಕಿಕ ಭರವಸೆ ನೀಡಿದೆ. ಆದರೆ, 50 ಸಾವಿರಕ್ಕೂ ಹೆಚ್ಚು ಮಂದಿ ರೈತರು ಭೂಮಿ ಕಳೆದುಕೊಂಡಿದ್ದು ನಿರಾಶ್ರಿತರಾಗಿದ್ದೇವೆ. ಹೀಗಾಗಿ ರಾಜ್ಯ ಸರಕಾರ ಕೂಡಲೇ ಕೋರ್ಟ್ ಆದೇಶದಂತೆ ಪರಿಹಾರ ಪಾವತಿಸಲು ಆದೇಶ ಹೊರಡಿಸಬೇಕು. ಅಲ್ಲಿಯ ವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ್, ಮುಜರಾಯಿ ಸಚಿವ ರಾಜಶೇಖರ್‌ ಪಾಟೀಲ್, ಶಾಸಕ ರಹೀಮ್ ಖಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಬಿ.ಖಂಡ್ರೆ, ಪರಿಷತ್ ಸದಸ್ಯ ರಘುನಾಥ್ ಮಲ್ಕಾಪುರೆ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News