ಕಾಲ್ಪನಿಕ ವೇತನ ವರದಿ ಯಥಾವತ್ ಜಾರಿಗೊಳಿಸದಿದ್ದರೆ ಬಹಿಷ್ಕಾರ: ಅನುದಾನಿತ ಶಾಲಾ ಶಿಕ್ಷಕರ ಎಚ್ಚರಿಕೆ

Update: 2018-10-15 17:13 GMT

ಬೆಂಗಳೂರು, ಅ. 15: ರಾಜ್ಯ ಸರಕಾರ ಬಸವರಾಜ ಹೊರಟ್ಟಿ ಅವರ ‘ಕಾಲ್ಪನಿಕ ವೇತನ’ ವರದಿ ಯಥಾವತ್ತಾಗಿ ಜಾರಿಗೊಳಿಸದಿದ್ದರೆ, ಶಾಲಾ ಚಟುವಟಿಕೆಗಳನ್ನು ಬಹಿಷ್ಕರಿಸುತ್ತೇವೆ ಎಂದು ಅನುದಾನಿತ ಶಾಲಾ ಶಿಕ್ಷಕರು ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ನೇತೃತ್ವದಲ್ಲಿ ಜಮಾಯಿಸಿರುವ ಶಾಲಾ ಶಿಕ್ಷಕರು, ಹಳೇ ಪಿಂಚಣಿ ಯೋಜನೆ ನೀಡುವಂತೆ ಪಟ್ಟು ಹಿಡಿದು ಇಂದಿನಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ನಾಲ್ಕು ದಿನಗಳ ಹಿಂದೆ, ನಗರದ ಸಿಟಿ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ ಉದ್ಯಾನವನದವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರೂ, ಸರಕಾರ ಆಗಲಿ, ಸಂಬಂಧ ಪಟ್ಟ ಸಚಿವರೇ ಆಗಲಿ, ಇತ್ತ ತಲೆ ಹಾಕಿಲ್ಲ. ಇನ್ನು, ಇಲಾಖೆಯ ಹಿರಿಯ ಅಧಿಕಾರಿಗಳು ನೆಪಕ್ಕಷ್ಟೇ ಮನವಿ ಪತ್ರ ಪಡೆದು ಸುಮ್ಮನೆ ಆಗಿದ್ದಾರೆ ಎಂದು ಮುಳಬಾಗಿಲು ತಾಲೂಕಿನ ಹಿರಿಯ ಶಿಕ್ಷಕ ರಾಮಚಂದ್ರ ಆರೋಪಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವೈ.ಹಡಗಲಿ ಮಾತನಾಡಿ, ಸರಕಾರ ಹಿರಿಯ ನಾಗರಿಕರಿಗೆ ನಿರ್ದಿಷ್ಟ ಮೊತ್ತದ ಪಿಂಚಣಿ ನೀಡುವ ಯೋಜನೆಗಳನ್ನು ರೂಪಿಸಿದೆ. ಹತ್ತಾರು ವರ್ಷಗಳ ಕಾಲ ಮಕ್ಕಳಿಗೆ ವಿದ್ಯೆ ಬೋಧಿಸಿದ ಶಿಕ್ಷಕರಿಗೆ ಪಿಂಚಣಿ ಯೋಜನೆ ರೂಪಿಸಿಲ್ಲ. ಇದರಿಂದಾಗಿ ಅವರ ಕೊನೆಗಾಲದಲ್ಲಿ ಸಾಮಾಜಿಕ ಭದ್ರತೆ ಇಲ್ಲವಾಗಿದೆ ಎಂದು ಅಳಲು ತೊಡಿಕೊಂಡರು.

ಹೊಸ ಪಿಂಚಣಿ ಯೋಜನೆಯಿಂದಾಗಿ ಸುಮಾರು 35 ಸಾವಿರ ಶಿಕ್ಷಕರು ಮಾಸಿಕ ಪಿಂಚಣಿಯಿಂದ ವಂಚಿತರಾಗಿದ್ದಾರೆ. ಪಿಂಚಣಿ ಇಲ್ಲದೆ ಈಗಾಗಲೇ ನಿವೃತ್ತಿಯಾಗಿರುವವರಿಗೆ ಮತ್ತು ಸೇವೆಯಲ್ಲಿ ಇರುವಾಗಲೇ ಸಾವನ್ನಪ್ಪಿದ ಶಿಕ್ಷಕರ ಕುಟುಂಬದ ಸದಸ್ಯರಿಗೆ ಪಿಂಚಣಿ ನೀಡಬೇಕು. ನೂತನ ಪಿಂಚಣಿ ಯೋಜನೆಯಲ್ಲಿನ ಗೊಂದಲಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಹನುಮಂತಪ್ಪ, ರಾಜ್ಯದಲ್ಲಿನ ಅನುದಾನಿತ ಶಾಲೆಗಳಲ್ಲಿ 2006ಕ್ಕಿಂತ ಮುಂಚಿನಿಂದಲೂ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ರಾಜ್ಯ ಸರಕಾರ ಪಿಂಚಣಿ ಸೌಲಭ್ಯ ಕಲ್ಪಿಸಲಿ ಎಂದು ಆಗ್ರಹಿಸಿದರು.

ಸರಕಾರ 2006 ಏಪ್ರಿಲ್ 1ರಂದು ನೂತನ ಪಿಂಚಣಿ ಯೋಜನೆ ಜಾರಿ ಮಾಡಿತು. 2006ರಲ್ಲಿ ನೇಮಕರಾಗಿ ತದನಂತರದ ವರ್ಷಗಳಲ್ಲಿ ನೇಮಕಾತಿ ಪತ್ರ ಪಡೆದಿರುವ ನೌಕರರು ರಾಜ್ಯದಲ್ಲಿದ್ದಾರೆ. ಅವರಿಗೆ ಹೊಸ ಯೋಜನೆ ಅನ್ವಯಿಸಲಾಗಿದೆ. ಇದರಿಂದಾಗಿ ಅವರು ಮಾಸಿಕ ಪಿಂಚಣಿಯಿಂದ ವಂಚಿತರಾಗಿದ್ದಾರೆ ಎಂದರು.

ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಐದಾರು ಜಿಲ್ಲೆಯ ಶಿಕ್ಷಕರು, ಇಂದು ಧರಣಿಯಲ್ಲಿ ಪಾಲ್ಗೊಂಡು, ಬೇಡಿಕೆ ಈಡೇರಿಸುವರೆಗೂ ಸ್ವಾತಂತ್ರ ಉದ್ಯಾನವನದಲ್ಲಿ ಅಹೋರಾತ್ರಿ ಉಳಿದು ಕೊಳ್ಳುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News