ಚಿಕ್ಕಮ್ಮನ ಮೇಲೆ ಹಲ್ಲೆ ನಡೆಸಿಲ್ಲ: ಸ್ಯಾಂಡಲ್ ವುಡ್ ನಟ ರಿಷಿ ಸ್ಪಷ್ಟನೆ

Update: 2018-10-20 16:33 GMT

ಬೆಂಗಳೂರು, ಅ. 20: ನಾನು ಚಿಕ್ಕಮ್ಮನ ಮೇಲೆ ಯಾವುದೇ ರೀತಿಯ ಬೆದರಿಕೆ ಹಾಗೂ ಹಲ್ಲೆಗೆ ಯತ್ನಿಸಿಲ್ಲ, ನನ್ನ ಏಳಿಗೆ ಸಹಿಸಲಾರದೆ ನನ್ನ ಚಿಕ್ಕಮ್ಮ ಹಾಗೂ ಚಿಕ್ಕಪ್ಪ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಚಿತ್ರ ನಟ ರಿಷಿ ಹೇಳಿದ್ದಾರೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಾಯಿಯ ಮೂವರು ತಂಗಿಯರಲ್ಲಿ ಕೊನೆಯವರೇ ಶಾಲಿನಿ ಗುರುಮೂರ್ತಿ, ಮೊದಲಿನಿಂದಲೂ ನಮ್ಮ ಕುಟುಂಬದವರೊಂದಿಗೆ ದೂರವಿದ್ದ ಅವರು, ಆಗಾಗ ನಮ್ಮ ಕುಟುಂಬದೊಂದಿಗೆ ಜಗಳ ಮಾಡಿಕೊಳ್ಳುತ್ತಿದ್ದರು. ಒಂದೂವರೆ ವರ್ಷದ ಹಿಂದೆ ನಮ್ಮ ಅಜ್ಜಿ ತೀರಿಕೊಂಡಿದ್ದರು. ಕಳೆದ ಕೆಲವು ದಿನಗಳ ಹಿಂದೆ ನಮ್ಮ ಮನೆಗೆ ಬಂದಿದ್ದ ಚಿಕ್ಕಮ್ಮ ಶಾಲಿನಿ ನನಗೆ ಆಸ್ತಿಯಲ್ಲಿ ಪಾಲು ಬೇಕು ಹಾಗೂ ಅಮ್ಮನ ಒಡವೆಗಳು ಬೇಕು ಎಂದು ಕೂಗಾಡಿದರು. ನನಗೆ ಆರೋಗ್ಯ ಸರಿಯಿಲ್ಲ, ಆಸ್ತಿ ತರದಿದ್ದರೆ ನನ್ನ ಗಂಡ ನನ್ನನ್ನು ಮನೆಗೆ ಸೇರಿಸಿಕೊಳ್ಳುವುದಿಲ್ಲ ಎಂದು ನಮ್ಮ ತಾತ ಹಾಗೂ ತಾಯಿಯ ಹತ್ತಿರ ವಾಗ್ವಾದ ನಡೆಸಿದ್ದರು. ಆಗ ಅಲ್ಲಿಯೇ ಇದ್ದ ನಾನು ಮೇಲಿನಿಂದ ಕೆಳಗೆ ಬಂದು ಕೂಗಾಡಬೇಡಿ, ಸಮಾಧಾನದಿಂದ ಮಾತನಾಡಿ ಎಂದು ಅಷ್ಟೇ ಹೇಳಿದೆ.

ಇದಾದ ಎರಡು ದಿನಕ್ಕೆ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ನನ್ನ ಚಿಕ್ಕಪ್ಪ ಗುರುಮೂರ್ತಿ ಅವರು ನನ್ನ ವಿರುದ್ಧ ಕೊಲೆ ಯತ್ನದ ದೂರು ನೀಡಿದ್ದಾರೆ. ಈ ಸುದ್ಧಿ ಬಹಿರಂಗಗೊಂಡು ಕೆಲ ಮಾಧ್ಯಮಗಳು ಯುವ ನಟ ರಿಷಿ ಅವರಿಂದ ಚಿಕ್ಕಮ್ಮನ ಮೇಲೆ ಹಲ್ಲೆ ಎಂದು ಬಿತ್ತರಿಸಿದ್ದು ತುಂಬಾ ಬೇಸರವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News