ನಮ್ಮೊಳಗನ್ನು ಸ್ವಚ್ಛಗೊಳಿಸಿಕೊಂಡರೆ ಮಾತ್ರ ವಸ್ತುನಿಷ್ಠ ಸುದ್ಧಿ ಕೊಡಬಹುದು: ನ್ಯಾ.ಎನ್.ಸಂತೋಷ್ ಹೆಗ್ಡೆ

Update: 2018-10-21 16:46 GMT

ಬೆಂಗಳೂರು, ಅ. 21: ನಮ್ಮೊಳಗನ್ನು ನಾವು ಆಗಾಗ ಸ್ವಚ್ಛಗೊಳಿಸಿಕೊಂಡರೆ ಮಾತ್ರ, ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠ ಸುದ್ದಿಗಳನ್ನು ಕೊಡಲು ಸಾಧ್ಯ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ರವಿವಾರ ನಗರದ ಕಸಾಪದ ಅಕ್ಕಮಹಾದೇವಿ ಸಭಾಂಗಣದಲ್ಲಿ ಎಂ.ವ್ಯೋಮಕೇಶ ಅವರ ‘ಬ್ರೇಕಿಂಗ್ ನ್ಯೂಸ್ ಮರ್ಮ, ಟಿಆರ್‌ಪಿ ಮಂತ್ರ ಹಾಗೂ ಸುದ್ದಿಮನೆ ಸ್ವಾರಸ್ಯಗಳು’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪತ್ರಕರ್ತರಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳುವ ಪ್ರವೃತ್ತಿ ಇರಬೇಕು ಹಾಗೂ ಇಂದಿನ ಪತ್ರಕರ್ತರಲ್ಲಿ ಓದಿನ ಕೊರತೆ ಕಾಣುತ್ತಿದೆ. ಸಾಹಿತ್ಯ ಓದಿನಿಂದ ಮಾನವೀಯತೆ ಬೆಳೆಯುತ್ತದೆ. ಮಾನವೀಯ ದೃಷ್ಟಿಕೋನದಲ್ಲಿ ಬರೆಯುವ ಸುದ್ದಿಗಳು ಸಮಾಜಕ್ಕೆ ಪೂರಕವಾಗಿರುತ್ತವೆ ಎಂದು ನುಡಿದರು.

ಎಂ.ವ್ಯೋಮಕೇಶ ಅವರ ಈ ಪುಸ್ತಕದಲ್ಲಿ, ಸುದ್ದಿ ವಾಹಿನಿಗಳ ಟಿಆರ್‌ಪಿ, ಸುದ್ದಿ ವಾಚಕ, ತಪ್ಪು-ಹಾಸ್ಯ ಹಾಗೂ ಸುದ್ದಿ ವಾಹಿನಿಗಳು ಹೇಗೆ, ಕಾರ್ಯ ನಿರ್ವಹಿಸುತ್ತವೆ ಎಂದೆಲ್ಲಾ ಅಂಶಗಳನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಈ ರೀತಿಯ ಪುಸ್ತಕಗಳನ್ನು ಎಲ್ಲರೂ ಓದುವಂತೆ ಆಗಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತ ದೀಪಕ್ ತಿಮ್ಮಯ್ಯ ಮಾತನಾಡಿ, ಪತ್ರಕರ್ತರು ಸಮಾಜ ಸುಧಾರಣೆ ಮಾಡುವ ಅಗತ್ಯವಿಲ್ಲ. ಬದಲಾಗಿ, ಜನರಿಗೆ ಸತ್ಯದ ಮಾಹಿತಿ ತಲುಪಿಸಿದರೆ, ಸಾಕು. ಇನ್ನು ಸುದ್ದಿ ವಾಹಿನಿಗಳು ವೀಕ್ಷಕರನ್ನು ದಿಕ್ಕು ತಪ್ಪಿಸುವುದನ್ನು ಬಿಡಬೇಕು. ಸಾಮಾಜಿಕ ಸಮಸ್ಯೆಗಳ ಕುರಿತು ಮಾತನಾಡಬೇಕು ಎಂದು ಸಲಹೆ ಮಾಡಿದರು.

ಪತ್ರಕರ್ತ ಗೌರಿಶ್ ಅಕ್ಕಿ ಮಾತನಾಡಿ, ಸುದ್ಧಿ ವಾಹಿನಿಗಳಿಂದು ರಾಜಕೀಯ ಪಕ್ಷಗಳ ಮುಖವಾಣಿಗಳಾಗಿ ಕೆಲಸ ಮಾಡುತ್ತೀವೆ. ಆದರೆ, ಮುಂದಿನ ದಿನಗಳಲ್ಲಾದರೂ, ಸುದ್ದಿ ವಾಹಿನಿಗಳು, ಓರ್ವ ವ್ಯಕ್ತಿ, ಪಕ್ಷದ ಪರವಾಗಿ ನಿಲ್ಲುವುದು ಬಿಟ್ಟು, ಸಮಾಜ ಪರವಾಗಿ ಮಾತನಾಡಬೇಕೆಂದು ತಿಳಿಸಿದರು. ಲೇಖಕ ಎಂ. ವ್ಯೋಮಕೇಶ, ಕಿರುತೆರೆ ನಟ ರೆಹಮಾನ್ ಹಸನ್, ಶೀತಲ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News