ಮೀ ಟೂ ಆಂದೋಲನ ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ: ನಟ ಚೇತನ್ ಸ್ಪಷ್ಟನೆ

Update: 2018-10-22 16:29 GMT

ಬೆಂಗಳೂರು, ಅ.22: ಪ್ರೇಮ ಬರಹ ಸಿನಿಮಾದಲ್ಲಿ ಚೇತನ್‌ಗೆ ಅವಕಾಶ ನೀಡಿರಲಿಲ್ಲ ಎಂಬ ಕಾರಣದಿಂದಾಗಿ ಶ್ರುತಿ ಹರಿಹರನ್ ಪರವಾಗಿ ನಿಂತು ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಅರ್ಜುನ್ ಸರ್ಜಾ ಮಾವ, ಹಿರಿಯ ನಟ ರಾಜೇಶ್ ಆರೋಪಿಸಿದ್ದಾರೆ.

ಶ್ರುತಿ ಹರಿಹರನ್ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅರ್ಜುನ್ ಸರ್ಜಾರ ಪ್ರೇಮ ಬರಹ ಚಿತ್ರ ನಿರ್ದೇಶಿಸಿದ ಸಂದರ್ಭದಲ್ಲಿ ನಾಯಕ ನಟನಾಗಿ ಚೇತನ್‌ರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಕೊನೆಕ್ಷಣದಲ್ಲಿ ನಟರನ್ನು ಬದಲಾವಣೆ ಮಾಡಿ, ಮತ್ತೊಬ್ಬರನ್ನು ಆಯ್ಕೆ ಮಾಡಲಾಗಿತ್ತು. ಆ ಹಿಂದಿನ ಸೇಡನ್ನು ಚೇತನ್ ಈಗ ತೀರಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಚಿತ್ರರಂಗದಲ್ಲಿ ಮಡಿವಂತಿಕೆ, ಮೈಲಿಗೆ ಎಂಬುದಿಲ್ಲ. ನನ್ನ ಅಳಿಯ ಅರ್ಜುನ್ ಸರ್ಜಾ ವಿರುದ್ಧ ಆರೋಪ ಕೇಳಿಬಂದಿದೆ. ಹೀಗಾಗಿ, ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದೇನೆ. ಅವರು ಕೈಗೊಳ್ಳುವ ಕ್ರಮಕ್ಕೆ ನಾನು ಬದ್ಧನಾಗಿದ್ದೇನೆ. ಅರ್ಜುನ್‌ರನ್ನು ನಾನು ಸುಮಾರು ವರ್ಷಗಳಿಂದ ನೋಡಿದ್ದೇನೆ. ಹಿರಿಯ ಕಲಾವಿದರೊಂದಿಗೆ ಅವರು ನಟಿಸಿದ್ದಾರೆ. ಅವರ ವಿರುದ್ಧ ಒಂದು ದೂರು ಇದುವರೆಗೂ ಬಂದಿಲ್ಲ. ಈಗ ಇವರು ಹತ್ತು ವರ್ಷಗಳ ಹಿಂದಿನದ್ದನ್ನು ತೆಗೆದು ಸುಖಾಸುಮ್ಮನೆ ರಗಳೆ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸರಿಯಾಗಿ ಕನ್ನಡ ಮಾತಾಡೋಕೆ ಬರಲ್ಲ ಇವರಿಗೆ. ಅವರು ಅರ್ಜುನ್‌ರ ಮೇಲೆ ಆಪಾದನೆ ಮಾಡಲು ಮುಂದಾಗಿದ್ದಾರೆ ಎಂದ ಅವರು, ಆಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಬಂಧ ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ಮಾತನಾಡಿದ್ದು, ಪ್ರೇಮ ಬರಹ ಚಿತ್ರದಿಂದ ಚೇತನ್‌ರನ್ನು ಕೈ ಬಿಟ್ಟರು ಎಂಬ ದುರುದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ಅವರನ್ನು ಆಯ್ಕೆ ಮಾಡಿದ ಸಂದರ್ಭದಲ್ಲಿ ಮುಂಗಡವಾಗಿ 10 ಲಕ್ಷ ಹಣವನ್ನು ನೀಡಿದ್ದರು. ಆದರೆ, ಅವರನ್ನು ಕೈಬಿಟ್ಟಾಗ ಆ ಹಣವನ್ನೂ ವಾಪಸ್ಸು ನೀಡಲಿಲ್ಲ. ಬದಲಿಗೆ, ಅರ್ಜುನ್ ಸರ್ಜಾ ವಿರುದ್ಧ ಎಲ್ಲರ ಬಳಿ ಕೆಟ್ಟದಾಗಿ ಅಪಪ್ರಚಾರ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಹುಭಾಷಾ ನಟ ಪ್ರಕಾಶ್ ರಾಜ್ ಶ್ರುತಿ ಹರಿಹರನ್ ಆರೋಪಕ್ಕೆ ಬೆಂಬಲ ವ್ಯಕ್ತಪಡಿಸಿ ತನಿಖೆಯಾಗಲಿ ಎಂಬ ಮಾತು ಹೇಳದೇ ಏಕಾಏಕಿ ತಪ್ಪು, ಕ್ಷಮೆಯಾಚಿಸಬೇಕು ಎಂದು ತೀರ್ಪು ನೀಡಿರುವುದು ಸರಿಯಲ್ಲ. ಇದು ನಿಜವಾದ ಸಾಮಾಜಿಕ ಬದ್ಧತೆ ಅಥವಾ ಮಹಿಳಾ ಪರವಾದ ಬದ್ಧತೆಯಲ್ಲ. ಇದರ ಹಿಂದೆ ಹಿಡನ್ ಅಜೆಂಡಾವಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿರುವ ನಟ ಚೇತನ್, ನಾನು ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಅಭಿಯಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ. ನನ್ನ ಮತ್ತು ಅವರ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಅರ್ಜುನ್ ಸರ್ಜಾ ಬಳಿ ಪ್ರೇಮ ಬರಹ ಸಿನಿಮಾಕ್ಕಾಗಿ 10 ಲಕ್ಷ ಹಣ ಪಡೆದಿಲ್ಲ, 9 ಲಕ್ಷ ಮುಂಗಡವಾಗಿ ಪಡೆದಿದ್ದೆ. ಮುಂದಿನ ದಿನಗಳಲ್ಲಿ ನಾವು ಒಟ್ಟಿಗೆ ಕೆಲಸ ಮಾಡಬಹುದು ಎಂದು ಸರ್ಜಾ ನನ್ನಲ್ಲಿ ಹೇಳಿದ್ದರು. ಹೀಗಾಗಿ, ಅವರು ನೀಡಿದ ಹಣವನ್ನು ವಾಪಸ್ಸು ಕೊಟ್ಟಿರಲಿಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News