ಸಮಾಜ ಸೇವೆಯಲ್ಲಿ ತೊಡಗಿರುವವರಿಗಾಗಿ ಆರೋಹಣಾ ಸೋಷಿಯಲ್ ಇನ್ನೋವೇಷನ್ ಸಮಾಜ ಸೇವಾ ಪ್ರಶಸ್ತಿ: ಸುಧಾನಾರಾಯಣ ಮೂರ್ತಿ
ಬೆಂಗಳೂರು, ಅ. 23: ಸಮಾಜ ಸೇವೆಯಲ್ಲಿ ತೊಡಗಿರುವವರಿಗಾಗಿ ಇನ್ಫೋಸಿಸ್ ಪ್ರತಿಷ್ಠಾನದಿಂದ ಆರೋಹಣಾ ಸೋಷಿಯಲ್ ಇನ್ನೋವೇಷನ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲು ಉದ್ದೇಶಿಸಲಾಗಿದೆ ಎಂದು ಪ್ರತಿಷ್ಠಾನ ಸಂಸ್ಥಾಪಕಿ ಸುಧಾನಾರಾಯಣ ಮೂರ್ತಿ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಆಯೋಜಿಸಿದ್ದ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಬಗೆಗೆ ಉತ್ತಮ ಉದ್ದೇಶ ಹೊಂದಿರುವ ವ್ಯಕ್ತಿ ಹಾಗೂ ಎನ್ಜಿಒಗಳಿಗೆ ಬೆಂಬಲ ನೀಡುವ ಉದ್ದೇಶದಿಂದಾಗಿ, ಪ್ರಶಸ್ತಿಗಾಗಿ 1.5 ಕೋಟಿ ರೂ.ಗಳ ನಿಧಿ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಸಮಾಜದಲ್ಲಿ ಬದಲಾವಣೆ ತರುವಂತಹ ಸಾಮಥ್ಯವಿರುವ ಅರ್ಹ ಸಾಮಾಜಿಕ ಇನ್ನೋವೇಟರ್ಗಳಿಗೆ ಪ್ರಶಸ್ತಿ ನೀಡಿ ಗೌರವಿಸಲು ಆಯ್ಕೆಗಾಗಿ ತೀರ್ಪುಗಾರರ ಸಮಿತಿ ರಚಿಸಲಾಗಿದ್ದು, ಸಮಿತಿಯಲ್ಲಿ ಐಎಎಂನ ಪ್ರೊ.ತ್ರಿಲೋಚನ್ಶಾಸ್ತ್ರಿ, ವಿಜ್ಞಾನ ತಜ್ಞ ಅರವಿಂದ್ ಗುಪ್ತ ಹೈದರಾಬಾದ್ನ ಐಐಟಿಯ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಉಪನ್ಯಾಸಕ ಜಿವಿವಿ ಶರ್ಮಾ, ಹೈದರಾಬಾದ್ನ ಐಎಎಂನ ಅತಿಥಿ ಉಪನ್ಯಾಸಕ ಪ್ರೊ.ಅನಿಲ್ಗುಪ್ತಾ ತಂಡದಲ್ಲಿ ಇರಲಿದ್ದಾರೆ ಎಂದರು.
ಮೊದಲ ಆವೃತ್ತಿಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಡಿ.31ಕೊನೆಯ ದಿನವಾಗಿದೆ. ಸಾಮಾಜಿಕ ವಲಯದಲ್ಲಿ ವಿಶಿಷ್ಟ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಮತ್ತು ಆ ಮೂಲಕ ದೇಶದಲ್ಲಿರುವ ಅವಕಾಶವಂಚಿತ ತಂಡಗಳು, ವ್ಯಕ್ತಿಗಳು ಹಾಗೂ ಇನ್ಜಿಒಗಳನ್ನು ಗುರುತಿಸುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹಾಗೂ ತೀರ್ಪು ನೀಡುವ ಮಾನದಂಡ ಕುರಿತ ಮಾಹಿತಿಗಾಗಿ www.infosys.com/aarohan ಸಂಪರ್ಕಿಸುವಂತೆ ಸುಧಾ ನಾರಾಯಣ ಮೂರ್ತಿ ತಿಳಿಸಿದ್ದಾರೆ.