‘ಮರ್ಯಾದಾ ಹತ್ಯೆ’: ದಲಿತ ಯುವಕನ ಪ್ರೀತಿಸಿದ ಪುತ್ರಿಯ ಕೊಲೆಗೈದ ತಂದೆ

Update: 2018-10-29 15:00 GMT

ವಿಜಯವಾಡ, ಅ.29: ಆಂಧ್ರಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ 20ರ ಹರೆಯದ ಮಗಳನ್ನು ಹತ್ಯೆ ಮಾಡಿ ಬಳಿಕ ಸೋಮವಾರ ಬೆಳಕು ಹರಿಯುವ ಮುನ್ನವೇ ತರಾತುರಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದು, ಇದು ‘ಮರ್ಯಾದಾ ಹತ್ಯೆ’ ಪ್ರಕರಣವಾಗಿದೆ ಎಂದು ಶಂಕಿಸಲಾಗಿದೆ.

ಕೊಮರೊಲುಮಂಡಳದ ನಾಗಿರೆಡ್ಡಿಪಳ್ಳಿ ಎಂಬಲ್ಲಿ ಈ ಘಟನೆ ನಡೆದಿದೆ. ಹೈದರಾಬಾದ್‌ನಲ್ಲಿ ಕಾನ್‌ಸ್ಟೆಬಲ್ ಆಗಿದ್ದ ಕೆ.ಪಾಪಯ್ಯ ಎಂಬಾತನ ಪುತ್ರಿ ಇಂದ್ರಜಾ ಎಂಬಾಕೆ ದಲಿತ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಇತ್ತೀಚೆಗೆ ಸೇವೆಯಿಂದ ನಿವೃತ್ತನಾಗಿದ್ದ ಪಾಪಯ್ಯ ಊರಿನಲ್ಲೇ ನೆಲೆಸಿದ್ದು ಮಗಳ ಪ್ರೀತಿಗೆ ವಿರೋಧ ಸೂಚಿಸಿದ್ದ ಹಾಗೂ ಈ ಬಗ್ಗೆ ಮನೆಯಲ್ಲಿ ಹಲವು ಬಾರಿ ವಾಗ್ವಾದ ನಡೆದಿತ್ತು. ರವಿವಾರ ರಾತ್ರಿ ಕೂಡಾ ತಂದೆ ಹಾಗೂ ಮಗಳ ಮಧ್ಯೆ ವಾಗ್ಯುದ್ದ ನಡೆದಿದೆ. ಈ ಸಂದರ್ಭ ಪಾಪಯ್ಯ ತನ್ನ ಮಗಳ ಕುತ್ತಿಗೆಗೆ ನೇಣುಬಿಗಿದು ಕೊಲೆ ಮಾಡಿದ್ದ ಎನ್ನಲಾಗಿದೆ. ಸೋಮವಾರ ನಸುಕಿನ ಜಾವದಲ್ಲೇ ಸ್ಮಶಾನಕ್ಕೆ ಮಗಳ ಶವವನ್ನು ಸಾಗಿಸಿ ಅಂತ್ಯ ಸಂಸ್ಕಾರ ನಡೆಸಿದ್ದಾನೆ. ರವಿವಾರ ರಾತ್ರಿ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗ್ರಾಮಸ್ಥರಲ್ಲಿ ಹೇಳಿದ್ದಾನೆ. ಈತನ ಹೇಳಿಕೆ ಬಗ್ಗೆ ಸಂಶಯಗೊಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು ಇದೀಗ ಈತನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News