ಆನ್ಲೈನ್ ವಂಚಕರಿಗೆ ಸಹಾಯ: ಇಬ್ಬರ ಬಂಧನ
ಬೆಂಗಳೂರು, ಅ.31: ಆನ್ ಲೈನ್ ವಂಚಕರಿಗೆ ತಮ್ಮ ಬ್ಯಾಂಕ್ ಖಾತೆ ಹಾಗೂ ಎಟಿಎಂ ಕಾರ್ಡ್ ನೀಡಿ ವಂಚನೆ ಮಾಡಲು ಸಹಕರಿಸಿದ ಆರೋಪದಡಿ ಇಬ್ಬರನ್ನು ಸಿಸಿಬಿ ಘಟಕದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಗೌರಿಬಿದನೂರಿನ ವಿದ್ಯಾ ನಗರದ ಕಮಲಾಕರ (26), ಎಂ.ಜಿ. ರಸ್ತೆಯ ವಿನೋದ್ (28) ಬಂಧಿತ ಆರೋಪಿಗಳೆಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಅ.14 ರಂದು ಆನ್ಲೈನ್ ವಂಚನೆ ಮಾಡುತ್ತಿದ್ದ ಆರೋಪದಡಿ ರಾಘವೇಂದ್ರ (24), ವಿದ್ಯಾನಗರದ ರಾಕೇಶ್ ಎಂಬುವವರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ವಂಚನೆಗೆ ಬ್ಯಾಂಕ್ ಖಾತೆ ಹಾಗೂ ಎಟಿಎಂ ಕಾರ್ಡ್ ನೀಡಿದ್ದವರ ಮಾಹಿತಿ ನೀಡಿದ್ದರು. ಈ ಸಂಬಂಧ ಕಾರ್ಯಾಚರಣೆ ನಡೆಸಿ, ಈ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳಾದ ವಿನೋದ್, ಕಮಲಾಕರ್ ಬ್ಯಾಂಕ್ ಖಾತೆಗಳನ್ನು ತೆರೆದು ರಾಘವೇಂದ್ರ ಹಾಗೂ ರಾಕೇಶ್ಗೆ ಡೆಬಿಟ್ ಕಾರ್ಡ್ ನೀಡಿ ವಂಚನೆಗೆ ಸಹಕರಿಸುತ್ತಿದ್ದರು. ಆರೋಪಿಗಳು ಕಾವಲ್ ಬೈರಸಂದ್ರದ ಬಳಿ ಇರುವ ಖಚಿತ ಮಾಹಿತಿ ಆಧರಿಸಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.