ಮಕ್ಕಳು ಪಟಾಕಿ ಹೆಚ್ಚುವಾಗ ಪೋಷಕರು ಜಾಗ್ರತೆ: ಸಾರ್ವಜನಿಕರಿಗೆ ಪೊಲೀಸ್ ಮಹಾ ನಿರ್ದೇಶಕರ ಸಲಹೆ
ಬೆಂಗಳೂರು, ನ.2: ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರು ಪಟಾಕಿಗಳನ್ನು ಹಚ್ಚುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾ ನಿರ್ದೇಶಕರು ಸಾರ್ವಜನಿಕರಿಗೆ ಸಲಹೆಗಳನ್ನು ನೀಡಿದ್ದಾರೆ.
ಮಕ್ಕಳು ದೊಡ್ಡವರ ಸಮ್ಮುಖದಲ್ಲೇ ಪಟಾಕಿ ಹಚ್ಚುವಂತೆ ಸೂಚಿಸಬೇಕು. ತೆರೆದ ಪ್ರದೇಶದಲ್ಲಿ ಪಟಾಕಿ ಹಚ್ಚುವುದು ಸುರಕ್ಷಿತ. ಯಾವುದೇ ಸಂದರ್ಭದಲ್ಲಿ ಮನೆಯೊಳಗೆ ಪಟಾಗಿ ಹಚ್ಚಬಾರದು. ಆದಷ್ಟು ಶರೀರಕ್ಕೆ ಹೊಂದಿಕೊಳ್ಳುವಂತಹ ಬಟ್ಟೆಗಳನ್ನು ಧರಿಸತಕ್ಕದ್ದು. ದೊಗಲೆ ಬಟ್ಟೆಗಳನ್ನು ಧರಿಸಬಾರದು. ಸುರ ಸುರ ಬತ್ತಿ ಇತ್ಯಾದಿಗಳನ್ನು ಶರೀರದಿಂದ ಆದಷ್ಟು ದೂರ ಹಿಡಿಯಬೇಕು. ಪಟಾಕಿ ಹಚ್ಚುವ ಸಮಯದಲ್ಲಿ ಅದರ ಮೇಲೆ ಬಾಗಬಾರದು. ಸಾಧ್ಯವಾದಷ್ಟು ಮಟ್ಟಿಗೆ ಪಕ್ಕದಿಂದ ಹಚ್ಚತಕ್ಕದ್ದು. ಯಾವುದೇ ಪಾತ್ರೆ, ಡಬ್ಬ, ಬಾಟಲ್ ಅಥವಾ ಇಕ್ಕಟ್ಟು ಸ್ಥಳಗಳಲ್ಲಿ ಪಟಾಕಿ ಹಚ್ಚಬಾರದು.
ಪಟಾಕಿಗಳನ್ನು ಜೇಬಿನಲ್ಲಿಡಬಾರದು. ಯಾವುದೇ ಸಂದರ್ಭದಲ್ಲಿ ಪಟಾಕಿಗಳನ್ನು ಬೆಂಕಿಯ ಅಥವಾ ಉಷ್ಣತೆ ಹೆಚ್ಚಿರುವ ಸ್ಥಳಗಳಲ್ಲಿ ಇಡಬಾರದು ಹಾಗೂ ಪೊಟ್ಟಣಗಳನ್ನು ತೆರೆಯಬಾರದು. ಹಚ್ಚಿರುವ ಪಟಾಕಿ ಸಿಡಿಯದಿದ್ದರೆ ಅದನ್ನು ಪರೀಕ್ಷಿಸಲು ಪ್ರಯತ್ನಿಸಬಾರದು.
ಹೂ ಕುಂಡಗಳನ್ನು ಕೈಯಲ್ಲಿ ಹಿಡಿದುಕೊಂಡು ಹಚ್ಚಬಾರದು. ರಾಕೆಟ್ಗಳನ್ನು ಬಳಸುವುದನ್ನು ಪೂರ್ಣ ತಪ್ಪಿಸುವುದು ಉತ್ತಮ. ಪಟಾಕಿ ಹಚ್ಚುವಾಗ ಯಾವಾಗಲೂ ಪಕ್ಕದಲ್ಲಿ ನೀರನ್ನು ಇಟ್ಟುಕೊಳ್ಳುವುದು ಸುರಕ್ಷಿತ. ಆಕಸ್ಮಿಕವಾಗಿ ಸುಟ್ಟ ಗಾಯಗಳಾದರೆ ಕೂಡಲೇ ತಣ್ಣೀರನ್ನು ಸುರಿಯತಕ್ಕದ್ದು. ಸಾಧ್ಯವಾದಷ್ಟು ಮಟ್ಟಿಗೆ ಸ್ನೇಹಿತರ ಜೊತೆ ಸೇರಿ ಸಾರ್ವಜನಿಕ ತೆರೆದ ಪ್ರದೇಶಗಳಲ್ಲಿ ಪಟಾಕಿ ಹಚ್ಚುವುದು ಸೂಕ್ತ. ಇದರಿಂದ ಎಲ್ಲರೂ ಸಂತೋಷ ಪಡಬಹುದು ಹಾಗೂ ಸುರಕ್ಷಿತ.
ಪಟಾಕಿ ಹಚ್ಚುವಾಗ ಮಕ್ಕಳು, ವಯಸ್ಸಾದವರು, ಕಾಯಿಲೆ ಇರುವವರು ಹಾಗೂ ಪ್ರಾಣಿಗಳನ್ನು ಗಮನಿಸಿ, ಅವರಿಗೆ ಆಗುವ ತೊಂದರೆಗಳನ್ನು ತಪ್ಪಿಸಲು ಪ್ರಯತ್ನಿಸಿ ಸಾಧ್ಯವಾದಷ್ಟು ಮಟ್ಟಿಗೆ ಹೆಚ್ಚು ಶಬ್ದ ಬರುವ ಪಟಾಕಿಗಳನ್ನು ಆಸ್ಪತ್ರೆ ಮತ್ತು ಇತರೆ ಸೂಕ್ಷ್ಮ ಪ್ರದೇಶಗಳಲ್ಲಿ ಬಳಸುವುದನ್ನು ತಪ್ಪಿಸಿ ಎಂದು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.