ಕರ್ನಾಟಕ ಉಚ್ಛ ನ್ಯಾಯಾಲಯ: ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕಾರ
ಬೆಂಗಳೂರು, ನ. 3: ಕರ್ನಾಟಕ ಹೈಕೋರ್ಟಿನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ ಕೆಂಪಯ್ಯ ಸೋಮಶೇಖರ್, ಕೊಟ್ರವ್ವ ಸೋಮಪ್ಪ ಮುದುಗಲ್, ಶ್ರೀನಿವಾಸ್ ಹರೀಶ್ ಕುಮಾರ್, ಜಾನ್ ಮೈಕೆಲ್ ಕುನ್ನಾ, ಬಸವರಾಜ್ ಅಂದಾನಗೌಡ ಪಾಟೀಲ್, ನಂಗಲಿ ಕೃಷ್ಣರಾವ್ ಸುಧೀಂದ್ರರಾವ್, ಹೊಸೂರ್ ಭುಜಂಗ ರಾಯ ಪ್ರಭಾಕರ್ ಶಾಸ್ತ್ರಿ ಸೇರಿದಂತೆ 7 ಮಂದಿ ಹೈಕೋರ್ಟಿನ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇದೇ ವೇಳೆ ಅಶೋಕ್ ಗೋಲಪ್ಪನಿಜಗಣ್ಣನವರ್, ಹೇತೂರ್ ಪುಟ್ಟಸ್ವಾಮಿಗೌಡ ಸಂದೇಶ್, ಕೃಷ್ಣನ್ ನಟರಾಜನ್, ಪ್ರಹ್ಲಾದರಾವ್ ಗೋವಿಂದರಾವ್ ಮುತಾಲಿಕ್ ಪಾಟೀಲ್ ಮತ್ತು ಅಪ್ಪಾಸಾಹೇಬ್ ಶಾಂತಪ್ಪಬೆಳ್ಳುಂಕೆ ಸೇರಿ 5 ಮಂದಿ ಹೈಕೋರ್ಟಿನ ಹೆಚ್ಚುವರಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಶನಿವಾರ ಇಲ್ಲಿನ ರಾಜಭವನದ ಗಾಜಿನಮನೆಯಲ್ಲಿ ಏರ್ಪಡಿಸಿದ್ದ ವಿಶೇಷ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯಿ ವಾಲ ಅವರು, ಹೈಕೋರ್ಟಿನ ನ್ಯಾಯಮೂರ್ತಿಗಳಿಗೆ ನ್ಯಾಯಮೂರ್ತಿ ಪದವಿಯ ಅಧಿಕಾರ ಪ್ರಮಾಣ ವಚನವನ್ನು ಬೋಧನೆ ಮಾಡಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯಹಾರಗಳ ಸಚಿವ ಕೃಷ್ಣ ಭೈರೇಗೌಡ, ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ, ಹೈಕೋರ್ಟ್ ಸೇರಿದಂತೆ ವಿವಿಧ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ಅಧಿಕಾರಿಗಳು ಮತ್ತು ಇತರೆ ನ್ಯಾಯಾಲಯಗಳಲ್ಲಿನ ಹಿರಿಯ ಹಾಗೂ ಕಿರಿಯ ವಕೀಲರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಆರಂಭದಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರು ರಾಷ್ಟ್ರಪತಿ ಭವನದಿಂದ ಸ್ವೀಕೃತವಾದ ನೇಮಕಾತಿ ಆದೇಶವನ್ನು ವಾಚನ ಮಾಡಿದರು.