ಬೆಂಗಳೂರು: ಮಗಳನ್ನು ಕೊಲೆಗೈದು, ಪೋಷಕರೊಂದಿಗೆ ಆತ್ಮಹತ್ಯೆಗೆ ಶರಣಾದ ಮಹಿಳೆ

Update: 2018-11-12 15:46 GMT

ಬೆಂಗಳೂರು, ನ.12: ಮಗಳನ್ನು ಕೊಲೆಗೈದ ತಾಯಿ, ಪೋಷಕರೊಂದಿಗೆ ಸೇರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.

ಜನಾರ್ದನ್(52), ಸುಮಿತ್ರಾ(45) ಅವರ ಮಗಳು ಸುಧಾರಾಣಿ(29) ಮತ್ತು ಮೋನಿಕಾ(6) ಮೃತಪಟ್ಟಿರುವ ದುರ್ದೈವಿಗಳು ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?: ಒಂದೇ ಕುಟುಂಬದ ನಾಲ್ವರು ಸಾವು ಪ್ರಕರಣ ಸಂಬಂಧ ಮೃತ ಸುಧಾರಾಣಿ ಎಂಬಾಕೆಯ ಹೆಸರಿನಲ್ಲಿ ಡೆತ್‌ನೋಟ್ ಪೊಲೀಸರಿಗೆ ಸಿಕ್ಕಿದೆ. ಇದರಲ್ಲಿ, ನಮ್ಮ ಸಾವಿಗೆ ಬೇರೆ ಯಾರೂ ಕಾರಣವಲ್ಲ. ನನಗೆ ಒಂದು ಮನೆ ತೆಗೆದುಕೊಳ್ಳುವ ಕನಸು ಇತ್ತು. ಹೀಗಿರುವಾಗ, ವ್ಯಕ್ತಿಯೋರ್ವನನ್ನು ನಂಬಿ, 25 ಲಕ್ಷ ರೂ. ನಗದು ಕೊಟ್ಟಿದ್ದೆ. ಆದರೆ, ಆ ವ್ಯಕ್ತಿ ಹಣ ತೆಗೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ.

ಹಣ ಕಳೆದುಕೊಂಡ ವಿಚಾರ ಅಪ್ಪ-ಅಮ್ಮನಿಗೆ ತಿಳಿಸಿದ್ದೆ. ಬಳಿಕ ಹಣ ವಾಪಸ್ಸು ಸಿಗಬಹುದು ಎಂಬ ವಿಶ್ವಾಸದಲ್ಲಿ ಸಾಕಷ್ಟ ಪ್ರಯತ್ನಪಟ್ಟೆವು. ಅನೇಕರೊಂದಿಗೆ ಈ ವಿಚಾರ ತಿಳಿಸಿದರೂ, ಯಾವುದೇ ಪರಿಹಾರ ದೊರೆಯಲಿಲ್ಲ. ಹೀಗಾಗಿ, ನೊಂದು ಶನಿವಾರ ತಡರಾತ್ರಿ ಅಪ್ಪ ಜನಾರ್ದನ, ತಾಯಿ ಸುಮಿತ್ರಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬಳಿಕ, ನಾನು(ಸುಧಾರಾಣಿ) ಮಗಳು ಮೋನಿಕಾಳನ್ನು ಉಸಿರುಗಟ್ಟಿಸಿ ಕೊಲೆಗೈದು, ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಉಲ್ಲೇಖ ಮಾಡಲಾಗಿದೆ ಎಂದು ವರದಿಯಾಗಿದೆ.

ಪ್ರಕರಣ ಸಂಬಂಧ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News