ಪತ್ನಿ ಮೇಲಿನ ಸಿಟ್ಟಿಗೆ ಮೂವರು ಪುತ್ರಿಯರ ತಲೆ ಜಜ್ಜಿ ಕೊಂದ ಭೂಪ!

Update: 2018-11-14 03:36 GMT

ಲಕ್ನೋ, ನ.14: ಪತ್ನಿಯ ಮೇಲಿನ ಸಿಟ್ಟಿನಿಂದ ಮೂವರು ಪುತ್ರಿಯರ ತಲೆಗೆ ಸುತ್ತಿಗೆಯಿಂದ ಹೊಡೆದು ಬೆಂಕಿ ಹಚ್ಚಿ ಸುಟ್ಟು ಹೃದಯ ವಿದ್ರಾವಕ ಘಟನೆ ಲಲಿತ್‌ಪುರ ಜಿಲ್ಲೆಯ ವೀರ್ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಚೆಡಮಿಲಾಲ್ ಅಲಿಯಾಸ್ ಚಿದ್ದು ಕುಶ್ವಾಹ ಎಂಬಾತ ಪತ್ನಿ ತವರುಮನೆಯಲ್ಲಿದ್ದಾಳೆ ಎಂಬ ಸಿಟ್ಟಿನಿಂದ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಅಂಜಲಿ (11), ರಾಧಿಕಾ (7) ಮತ್ತು ವಿಶಾಖಾ (3) ಸಿಟ್ಟಿಗೆ ಬಲಿಯಾದ ಪುಟಾಣಿಗಳು.

ಕುಶ್ವಾಹ ತಪ್ಪೊಪ್ಪಿಕೊಂಡಿದ್ದಾನೆ. ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಜೈಲಿಗೆ ಕಳುಹಿಸಲಾಗಿದೆ ಎಂದು ಎಸ್ಪಿ ಓ.ಪಿ.ಸಿಂಗ್ ಹೇಳಿದ್ದಾರೆ.

ಕುಶ್ವಾಹ ಪತ್ನಿ, ಕುಡುಕ ಗಂಡ ಹೊಡೆದ ಎಂಬ ಕಾರಣಕ್ಕೆ ಮತ್ತಿಬ್ಬರು ಹೆಣ್ಣುಮಕ್ಕಳೊಂದಿಗೆ ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯ ಬಲಾರಿ ಗ್ರಾಮದ ತನ್ನ ತವರು ಮನೆಗೆ ದೀಪಾವಳಿಯ ಮುನ್ನಾ ದಿನ ತೆರಳಿದ್ದಳು. ಪತ್ನಿಯನ್ನು ವಾಪಸ್ ಕರೆತರುವ ಪ್ರಯತ್ನ ವಿಫಲವಾದಾಗ ಆರೋಪಿ, ಭಾವಂದಿರ ಜತೆ ಜಗಳ ತೆಗೆದಿದ್ದ. ಎರಡು ದಿನ ಹಿಂದೆ ಭಾವಂದಿರು ಈತನನ್ನು ಆತನ ಮನೆಗೆ ವಾಪಸ್ ಕಳುಹಿಸಿದ್ದರು. ಇದರಿಂದ ಅವಮಾನವಾಗಿದೆ ಎಂಬ ಸಿಟ್ಟಿನಿಂದ ಮೂವರು ಹೆಣ್ಣುಮಕ್ಕಳ ತಲೆಗೆ ಸುತ್ತಿಗೆಯಿಂದ ಹೊಡೆದು ಸಾಯಿಸಿ ಬೆಂಕಿ ಹಚ್ಚಿದ ಎಂದು ಹೇಳಿದ್ದಾರೆ.

ರಾತ್ರಿಯಿಡೀ ಕುಡಿಯುತ್ತಿದ್ದ ಕುಶ್ವಾಹ, ಮುಂಜಾನೆ 4ರ ಸುಮಾರಿಗೆ ತಾಯಿಯನ್ನು ಮನೆಯಿಂದ ಹೊರಗೆ ಕಳುಹಿಸಿ, ಕೊಠಡಿಯ ಬಾಗಿಲು ಮುಚ್ಚಿ ಈ ಕೃತ್ಯ ಎಸಗಿದ್ದಾನೆ. ಬಳಿಕ ಪಕ್ಕದ ಮನೆಗಳಿಗೂ ಬೆಂಕಿ ಹಚ್ಚಲು ಮುಂದಾದ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News