ಹಾಲು ಕರೆಯುವ ಹಸುಗಳಿಗೆ ಮೈಕ್ರೋ ಚಿಪ್ ಅಳವಡಿಕೆ: ಸಚಿವ ವೆಂಕಟರಾವ್ ನಾಡಗೌಡ

Update: 2018-11-14 15:44 GMT

ಬೆಂಗಳೂರು, ನ.14: ಪಶುಭಾಗ್ಯ ಯೋಜನೆ ಅಡಿ ನೀಡಲಾಗುವ ಹಾಲು ಕರೆಯುವ ಹಸುಗಳ ಕಿವಿಗೆ ಮೈಕ್ರೋ ಚಿಪ್ ಅಳವಡಿಕೆ ಮಾಡಲಾಗುತ್ತಿದೆ ಎಂದು ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್‌ನಾಡಗೌಡ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೈಕ್ರೋ ಚಿಪ್ ಅಳವಡಿಕೆಯಿಂದ ಹಸುವಿನ ಮಾರಾಟವನ್ನು ತಡೆಯುವುದರ ಜೊತೆಗೆ ಹಸುವಿನ ಆರೋಗ್ಯ ಸೇರಿದಂತೆ ಸಂಪೂರ್ಣ ಮಾಹಿತಿ ಪಡೆಯಲು ಸಹಕಾರವಾಗುತ್ತದೆ ಎಂದರು.

ಒಂದು ಚಿಪ್ಪಿಗೆ 6.20 ರೂ.ಗಳು ಖರ್ಚಾಗುತ್ತದೆ. ರಾಜ್ಯದಲ್ಲಿ ಇದುವರೆಗೆ ಸುಮಾರು 1.80 ಲಕ್ಷ ಹಸುಗಳಿಗೆ ಚಿಪ್ ಅಳವಡಿಕೆ ಮಾಡಲಾಗಿದೆ. ಕಾಲುಬಾಯಿ ರೋಗ ಸಂಪೂರ್ಣ ನಿರ್ಮೂಲನೆ ಆಗಿಲ್ಲ. ಕೋಲಾರ ಹಾಗೂ ಧಾರವಾಡ ಸೇರಿದಂತೆ ನಾಲ್ಕಾರು ಜಿಲ್ಲೆಗಳಲ್ಲಿ ಮತ್ತೆ ಕಾಣಿಸಿಕೊಂಡಿದೆ ಎಂದು ಅವರು ಹೇಳಿದರು.

ಧಾರವಾಡದ ಕೃಷಿ ಮೇಳದಲ್ಲಿ ಪಕ್ಕದ ರಾಜ್ಯದ ಹಸುಗಳು ಬಂದಿರುವುದರಿಂದ ಈ ಕಾಯಿಲೆ ಬಂದಿರುವ ಸಾಧ್ಯತೆಯಿದೆ. ಈಗಾಗಲೇ ಕೇಂದ್ರದ ಅಧಿಕಾರಿಗಳ ತಂಡ ಆಗಮಿಸಿದ್ದು, ವರದಿ ಸಿದ್ಧ ಮಾಡುತ್ತಿದೆ. ಯಾವ ಹಿನ್ನೆಲೆಯಲ್ಲಿ ಕಾಲುಬಾಯಿ ರೋಗ ಬಂದಿದೆ ಅನ್ನುವ ತನಿಖೆ ನಡೆಯುತ್ತಿದೆ. ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರ ಫಾರಂನಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಹಾಲಿನ ದರ ಏರಿಕೆ ಮಾಡೋ ಆಲೋಚನೆ ರಾಜ್ಯ ಸರಕಾರದ ಮುಂದಿಲ್ಲ. ಪ್ರತಿ ಲೀಟರ್‌ಗೆ 5 ರೂಪಾಯಿ ಸಹಾಯ ಧನ ಸರಿಯಾದ ಸಮಯಕ್ಕೆ ರೈತರಿಗೆ ತಲುಪುತ್ತಿದೆ. ನಮ್ಮ ನಂದಿನಿ ಹಾಲು ಪರಿಶುದ್ದವಾಗಿದೆ. ಯಾವುದೇ ಕಲಬೆರಕೆ ನಮ್ಮ ಹಾಲಿನಲ್ಲಿ ಇಲ್ಲ. ಯಾವುದೇ ಪರೀಕ್ಷೆ ಮಾಡಲು ನಾವು ಸಿದ್ಧ ಎಂದು ಅವರು ತಿಳಿಸಿದರು.

ಕೆಎಂಎಫ್ ಅಭಿವೃದ್ಧಿ ಆಗುತ್ತಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೇವಣ್ಣ ನನ್ನ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಕೆಎಂಎಫ್ ಅಭಿವೃದ್ಧಿಗೆ ರೇವಣ್ಣ ಕೊಡುಗೆ ಅಪಾರ. ಅಭಿವೃದ್ಧಿಗೆ ಯಾರಾದರೂ ತೊಂದರೆ ಕೊಟ್ಟರೆ ಅವರು ಸಹಿಸಲ್ಲ. ಹೀಗಾಗಿ ಅವರು ಹಾಗೆ ಹೇಳಿರಬಹುದು. ಅದನ್ನೇ ತಪ್ಪಾಗಿ ಅರ್ಥೈಸುವುದು ಬೇಡ ಎಂದು ವೆಂಕಟರಾವ್ ನಾಡಗೌಡ ಹೇಳಿದರು.

ಎರಡು ಲಕ್ಷ ಟನ್ ಮೆಕ್ಕೆ ಜೋಳ ರೈತರಿಂದ ನೇರವಾಗಿ ಖರೀದಿಸಲು ಮುಂದಾಗಿದ್ದೇವೆ. ಪ್ರತೀ ಕ್ವಿಂಟಾಲ್ ಗೆ 1450 ರೂ.ನೀಡಿ ಖರೀದಿಸಲು ಮುಖ್ಯಮಂತ್ರಿಗೆ ಇವತ್ತು ಪ್ರಸ್ತಾವನೆ ಕಳುಹಿಸಲಾಗಿದೆ. ಮಾರುಕಟ್ಟೆಗಿಂತ 150 ರೂಪಾಯಿ ಹೆಚ್ಚಾಗಿ ರೈತರಿಗೆ ನೀಡಲಿದ್ದೇವೆ ಎಂದು ವೆಂಕಟರಾವ್ ನಾಡಗೌಡ ತಿಳಿಸಿದರು.

ಕರ್ನಾಟಕದ ಮೀನಿಗೆ ಗೋವಾದಲ್ಲಿ ನಿಷೇಧ ಹೇರಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯದ ಮೀನಿನಲ್ಲಿ ಯಾವುದೇ ವಿಷಕಾರಿ ಅಂಶವಿಲ್ಲ. ಇದರ ಬಗ್ಗೆ ತಪ್ಪುಮಾಹಿತಿ ಪ್ರಚಾರ ಆಗುತ್ತಿದೆ. ಈಗಾಗಲೇ ಈ ಬಗ್ಗೆ ನಾವು ಪರಿಶೀಲನೆ ಮಾಡಿದ್ದೇವೆ. ಶೀಘ್ರವೇ ಗೋವಾ ಮುಖ್ಯಮಂತ್ರಿ ಜೊತೆ ನಮ್ಮ ಮುಖ್ಯಮಂತ್ರಿ ಮಾತುಕತೆ ಮಾಡಿ, ಪುನಃ ಮೀನಿನ ರಫ್ತು ಮಾಡಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಮೇವಿಗೆ ಕೊರತೆ ಇಲ್ಲ. 15 ಕೋಟಿ ರೂ.ಗಳನ್ನು ಮೇವಿಗಾಗಿ ಇರಿಸಲಾಗಿದೆ. ಆಂಧ್ರ ಮತ್ತು ತೆಲಂಗಾಣಕ್ಕೆ ನಮ್ಮ ರಾಜ್ಯದಿಂದ ಮೇವು ಸರಬರಾಜು ಆಗುತ್ತಿತ್ತು. ಹೊರ ರಾಜ್ಯಕ್ಕೆ ನಮ್ಮ ಮೇವು ಸರಬರಾಜು ಮಾಡಲು ನಿಷೇಧ ಮಾಡಲಾಗಿದೆ ಎಂದು ವೆಂಕಟರಾವ್ ನಾಡಗೌಡ ತಿಳಿಸಿದರು.

ರಾಜ್ಯದಲ್ಲಿ ದೊರೆಯುವ ಮೇವನ್ನು ವೈಜ್ಞಾನಿಕವಾಗಿ ಸಂರಕ್ಷಣೆ ಮಾಡಲಾಗುವುದು. ಈ ಮೂಲಕ ಬೇಸಿಗೆ ವೇಳೆ ಮೇವಿನ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ನಾಟಿ ತಳಿ ಹಸುಗಳ ಸಂವರ್ಧನೆಗೆ ಸರಕಾರದಿಂದ ಒತ್ತು ನೀಡಲಾಗಿದೆ. ನಾಟಿ ಹಸುಗಳ ಹಾಲು ಪ್ರತ್ಯೇಕವಾಗಿ ಸಂಗ್ರಹಿಸಿ ಕೆಎಂಎಫ್ ಮೂಲಕ ಮಾರಾಟಕ್ಕೆ ಮಾತುಕತೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಗೊಂದು ವಧಾಗಾರ

ಕುರಿ, ಮೇಕೆ ಮಾಂಸ ಮಾರಾಟ ಉತ್ತೇಜನಕ್ಕೆ ಸರಕಾರ ಕ್ರಮ ಕೈಗೊಂಡಿದೆ. ಆಧುನಿಕ ಪ್ರಾಣಿ ವಧಾಗಾರಗಳನ್ನು ನಿರ್ಮಿಸಲು ಕ್ರಮ ವಹಿಸಲಾಗಿದೆ. ಪ್ರಾಯೋಗಿಕವಾಗಿ ತುಮಕೂರು ಜಿಲ್ಲೆಯ ಶಿರಾದಲ್ಲಿ ಇದನ್ನು ಜಾರಿಗೆ ತರಲಾಗುತ್ತಿದೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲೂ ಆಧುನಿಕ ಪ್ರಾಣಿ ವಧಾಗಾರಗಳನ್ನು ಆರಂಭಿಸಲಾಗುವುದು.

-ವೆಂಕಟರಾವ್‌ ನಾಡಗೌಡ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News