ಕನ್ನಡಿಗರ ಕುರಿತು ಅಧಿಕಾರಿಗಳ ವ್ಯಾಖ್ಯಾನ ಸರಿಯಲ್ಲ: ಮುಖ್ಯಮಂತ್ರಿ ಚಂದ್ರು
ಬೆಂಗಳೂರು, ನ.15: ಕನ್ನಡಿಗರು ಎಂದರೆ ಯಾರು ಎಂಬ ಅಧಿಕಾರಿಗಳ ಅವೈಜ್ಞಾನಿಕ ಚಿಂತನೆಗಳನ್ನು ಪರಿಗಣಿಸಿ ಕನ್ನಡ ವಿರೋಧಿ ನೀತಿಗಳನ್ನು ಅನುಸರಿಸುವುದು ಸರಿಯಲ್ಲವೆಂದು ಕನ್ನಡ ನುಡಿ-ಕನ್ನಡ ಗಡಿ ಜಾಗೃತಿ ಸಮಿತಿಯ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದ್ದಾರೆ.
ಸರಕಾರದ ಮುಖ್ಯ ಕಾರ್ಯದರ್ಶಿಗಳು, ಕಾರ್ಮಿಕ ಇಲಾಖೆ ರಾಜ್ಯದಲ್ಲಿ ಏಳು ವರ್ಷದಿಂದ ವಾಸಿಸುತ್ತಿರುವವರು ಕನ್ನಡಿಗರು ಎಂಬ ತಿದ್ದುಪಡಿ ಮಾಡಿ ಮಸೂದೆಯಲ್ಲಿ ಸೇರಿಸಲಾಗಿದೆ ಎಂಬ ಮಾಹಿತಿ ಆಘಾತಕಾರಿಯಾಗಿದೆ. ಇದು ಕನ್ನಡ ನಾಡಿಗೆ ಮಾಡುತ್ತಿರುವ ಮೋಸವಾಗಿದೆ ಎಂದು ಅವರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.
ಕನ್ನಡಿಗರು ಯಾರು ಎಂಬುದಕ್ಕೆ ಡಾ.ಸರೋಜಿನಿ ಮಹಿಷಿ ವರದಿಯಲ್ಲಿ ವೈಜ್ಞಾನಿಕವಾಗಿ ದಾಖಲಿಸಲಾಗಿದೆ. ಆದರೆ, ಅಧಿಕಾರಿಗಳು ಈ ವರದಿಯನ್ನು ನಿರ್ಲಕ್ಷಿಸಿ ತಮಗೆ ಹೇಗೆ ಬೇಕೊ ಹಾಗೆ ಮಾಡಲು ಹೊರಟಿದ್ದಾರೆ. ಹೀಗಾಗಿ ರಾಜ್ಯ ಸರಕಾರ ಮತ್ತೊಮ್ಮೆ ಸರೋಜಿನಿ ಮಹಿಷಿ ಸಮಿತಿಯ ಪರಿಷ್ಕೃತ ವರದಿಯನ್ನು ಕೂಲಂಕಷವಾಗಿ ಅವಲೋಕಿಸಿ, ಕನ್ನಡಿಗ ಎಂಬ ಪದದ ವ್ಯಾಖ್ಯಾನವನ್ನು ಅರಿತು ಅಳವಡಿಸಿಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.