ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಹೇಳಿಕೆ ಅಪಹಾಸ್ಯದಿಂದ ಕೂಡಿದೆ: ಪಿಎಫ್‌ಐ

Update: 2018-11-15 14:59 GMT
ಇ. ಅಬೂಬಕರ್

ಬೆಂಗಳೂರು, ನ.15: ದೇಶದಲ್ಲಿ ಮುಸ್ಲಿಮರು ಶಾಂತಿಯುತವಾಗಿ ಮತ್ತು ಗೌರವಾನ್ವಿತವಾಗಿ ಜೀವಿಸಲು ಅಯೋಧ್ಯೆಯಲ್ಲಿಯೇ ರಾಮ ಮಂದಿರವನ್ನು ನಿರ್ಮಿಸಬೇಕು ಎಂಬ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಗಯೋರುಲ್ ಹಸನ್ ರಿಝ್ವಿ ಹೇಳಿಕೆಯು ಅಪಹಾಸ್ಯದಿಂದ ಕೂಡಿದೆ ಎಂದು ಪಿಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಇ. ಅಬೂಬಕರ್ ಪ್ರತಿಕ್ರಿಯಿಸಿದ್ದಾರೆ. 

ಬಾಬರಿ ಮಸೀದಿ ಧ್ವಂಸವು ಮಹಾತ್ಮಾ ಗಾಂಧೀಜಿಯವರ ಹತ್ಯೆಯ ನಂತರ ಸ್ವತಂತ್ರ ಭಾರತದಲ್ಲಿ ನಡೆದ ಅತ್ಯಂತ ಘೋರ ಸಂಘಟಿತ ಅಪರಾಧವಾಗಿದೆ. ಬಾಬರಿ ಮಸೀದಿ ಪುನರ್ ನಿರ್ಮಾಣವಾಗುವವರೆಗೆ ಮುಸ್ಲಿಮರಿಗೆ ಅದೇ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಸಿಗಬೇಕು ಹಾಗೂ ಧ್ವಂಸ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಇಲ್ಲದಿದ್ದಲ್ಲಿ ಈ ವಿಚಾರವು ಒಣಗದ ಗಾಯದಂತೆ ಹಾಗೆಯೇ ಉಳಿದುಬಿಡುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಅತಿ ಅಗತ್ಯದ ಸಂದರ್ಭದಲ್ಲಿ ಗಮನ ಹರಿಸಬೇಕಾದ ಮತ್ತು ಸೇವೆ ಸಲ್ಲಿಸಬೇಕಾದ ಸಮಯದಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಪತ್ತೆಯೇ ಇರಲಿಲ್ಲ. ಬಾಬರಿ ಮಸೀದಿ ನ್ಯಾಯಕ್ಕಾಗಿ ಇದುವರೆಗೆ ಅವರು ತುಟಿಬಿಚ್ಚಿದ್ದು ಕಾಣಸಿಗಲಿಲ್ಲ. ಹೀಗಾಗಿ ಆಯೋಗದ ಅಧ್ಯಕ್ಷರು ಆರೆಸ್ಸೆಸ್ ಅಥವಾ ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ಮುಖಂಡರ ಪಾತ್ರವನ್ನು ನಿಭಾಯಿಸುತ್ತಿರುವಂತೆ ಭಾಸವಾಗುತ್ತಿದೆ. ಅವರು ಸಂಘಪರಿವಾರದ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಹೊರತು ಅಲ್ಪಸಂಖ್ಯಾತ ಸಮುದಾಯಕ್ಕಾಗಿ ಅಲ್ಲವೆಂದು ಅವರ ಹೇಳಿಕೆಯಿಂದ ವ್ಯಕ್ತವಾಗುತ್ತಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಹಿಂದುತ್ವ ಬಲಪಂಥೀಯ ಶಕ್ತಿಗಳು ಭಾರತದಲ್ಲಿ ಮುಸ್ಲಿಮರ ಪರಂಪರೆಯ ಐತಿಹಾಸಿಕ ಸಂಕೇತಗಳನ್ನು ಅಳಿಸಿ ಹಾಕುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ, ಮುಸ್ಲಿಮರು ಬಾಬರಿ ಮಸೀದ್ ತ್ಯಜಿಸಿದರೆ ಸಮುದಾಯದ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಅವರು ಹೇಳಿಕೆ ನೀಡಿರುತ್ತಾರೆ. ನೈಸರ್ಗಿಕ ನ್ಯಾಯದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದರಿಂದ ಅಥವಾ ಬಹುಸಂಖ್ಯಾತ ಶಕ್ತಿಗಳ ಮುಂದೆ ತಮ್ಮ ಹಕ್ಕುಗಳನ್ನು ಬಿಟ್ಟುಕೊಡುವುದರಿಂದ ಸಮುದಾಯದ ಮಧ್ಯೆ ಶಾಂತಿ ಮತ್ತು ಗೌರವದ ವಾತಾವರಣವನ್ನು ಸೃಷ್ಟಿಸಬಹುದು ಎಂದು ಭಾವಿಸುವುದು ನಿರರ್ಥಕವಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News