ಷರತ್ತಿನೊಂದಿಗೆ ರಣಜಿ ಆಡಲು ಶಮಿಗೆ ಬಿಸಿಸಿಐ ಅನುಮತಿ

Update: 2018-11-17 09:11 GMT

ಕೋಲ್ಕತಾ, ನ.17: ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿಗೆ ಕೇರಳ ವಿರುದ್ಧ ಮಂಗಳವಾರ ಆರಂಭವಾಗಲಿರುವ ರಣಜಿ ಟ್ರೋಫಿ ಬಿ ಗುಂಪಿನ ಪಂದ್ಯದಲ್ಲಿ ಬಂಗಾಳದ ಪರ ಆಡಲು ಬಿಸಿಸಿಐ ಅನುಮತಿ ನೀಡಿದೆ. ಆದರೆ, ಅವರಿಗೆ ಪ್ರತಿ ಇನಿಂಗ್ಸ್‌ನಲ್ಲಿ 15 ಓವರ್ ಮಾತ್ರ ಬೌಲಿಂಗ್ ಮಾಡಬೇಕೆಂಬ ಷರತ್ತು ವಿಧಿಸಿದೆ.

ಮುಂದಿನ ತಿಂಗಳು ಆಸ್ಟ್ರೇಲಿಯದಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಶಮಿ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದಾರೆ.

ರಣಜಿ ಟ್ರೋಫಿಯ ಪ್ರತಿದಿನ ಪಂದ್ಯ ಕೊನೆಗೊಂಡಾಗ ಶಮಿ ಅವರ ಫಿಟ್‌ನೆಸ್ ಹಾಗೂ ಕಾರ್ಯಭಾರದ ಬಗ್ಗೆ ಬಂಗಾಳ ಟೀಮ್ ಮ್ಯಾನೇಜ್‌ಮೆಂಟ್ ತನ್ನ ಫಿಸಿಯೋಗೆ ವರದಿ ಸಲ್ಲಿಸಬೇಕು ಎಂದು ಬಿಸಿಸಿಐ ನಿರ್ಬಂಧ ವಿಧಿಸಿದೆ.

ಬಿಸಿಸಿಐ ವಿಧಿಸಿರುವ ಷರತ್ತುಗಳನ್ನು ಒಪ್ಪಿಕೊಂಡಿರುವ ಬಂಗಾಳ ತಂಡ ಬಲಗೈ ವೇಗದ ಬೌಲರ್ ಶಮಿ ಅವರನ್ನು ಶುಕ್ರವಾರ ಪ್ರಕಟಿಸಿರುವ 16 ಸದಸ್ಯರ ತಂಡದೊಂದಿಗೆ ಸೇರಿಸಿಕೊಂಡಿದೆ. ಆಯ್ಕೆ ಸಮಿತಿಯ ಸಭೆಯ ಬಳಿಕ ಬಂಗಾಳ ನಾಯಕ ಮನೋಜ್ ತಿವಾರಿ ಅವರು ಶಮಿ ಅವರನ್ನು ತಂಡಕ್ಕೆ ಸ್ವಾಗತಿಸಿದರು.

 ಆಸ್ಟ್ರೇಲಿಯ ವಿರುದ್ಧ 3 ಪಂದ್ಯಗಳ ಟ್ವೆಂಟಿ-20 ಸರಣಿ ನ.21 ರಿಂದ ಆರಂಭವಾಗಲಿದೆ. ಭಾರತ ಕ್ರಿಕೆಟ್ ತಂಡ ಈಗಾಗಲೇ ಆಸ್ಟ್ರೇಲಿಯಕ್ಕೆ ತೆರಳಿದೆ. ಉಭಯ ತಂಡಗಳ ನಡುವೆ ಟೆಸ್ಟ್ ಸರಣಿಯು ಡಿ.4ರಿಂದ ಅಡಿಲೇಡ್‌ನಲ್ಲಿ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News