ಉ.ಪ್ರದೇಶ: ಪೊಲೀಸ್ ವಾಹನದಿಂದ ವ್ಯಕ್ತಿಯನ್ನು ಹೊರಗೆಳೆದು ಥಳಿಸಿ ಕೊಂದರು

Update: 2018-11-27 13:41 GMT

ಲಕ್ನೋ, ನ.27: ವ್ಯಕ್ತಿಯೊಬ್ಬನನ್ನು ಪೊಲೀಸ್ ವಾಹನದಿಂದ ಹೊರಗೆಳೆದು ಥಳಿಸಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಥಳದಲ್ಲಿದ್ದ ಪೊಲೀಸರು ಏನೂ ಮಾಡದೆ ನಿಂತಿರುವುದು ಕಂಡು ಬಂದಿದೆ.

ಮೃತ ವ್ಯಕ್ತಿಯನ್ನು ರಾಜೇಂದ್ರ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿ ಒಬ್ಬನನ್ನು ಬಂಧಿಸಲಾಗಿದ್ದು, ಉಳಿದ ಐವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮದ್ಯದ ಅಮಲಿನಲ್ಲಿ ರಾಜೇಂದ್ರ ತೊಂದರೆ ನೀಡುತ್ತಿದ್ದಾನೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಪೊಲೀಸರ ತಂಡವೊಂದು ಹತ್ಚೋಯ ಗ್ರಾಮಕ್ಕೆ ತೆರಳಿತ್ತು. ರಾಜೇಂದ್ರನನ್ನು ಕಸ್ಟಡಿಗೆ ಪಡೆಯಲಾಗಿತ್ತು ಎಂದು ಶಾಮ್ಲಿಯ ಪೊಲೀಸ್ ಅಧಿಕಾರಿ ಅಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.

ಪೊಲೀಸರ ಮುಂದೆಯೇ ಪೊಲೀಸ್ ವಾಹನದಲ್ಲಿ ವ್ಯಕ್ತಿಗೆ ಜನರು ಹಲ್ಲೆ ನಡೆಸುತ್ತಿರುವುದು ನಂತರ ಆತನನ್ನು ವಾಹನದಿಂದ ಹೊರಗೆಳೆಯುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಅಸ್ವಸ್ತನಾಗಿ ಬಿದ್ದಿದ್ದು, ನಂತರ ಮೃತಪಟ್ಟಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News