ಕುಡಿಯುವ ನೀರಿನ ಯೋಜನೆಗಳಿಗೆ ಡಿ.31ರೊಳಗೆ ಕಾರ್ಯಾದೇಶ ನೀಡಲು ಸಚಿವ ಕೃಷ್ಣಭೈರೇಗೌಡ ಸೂಚನೆ
ಬೆಂಗಳೂರು, ನ. 28: ಗ್ರಾಮೀಣ ಪ್ರದೇಶದ ಎಲ್ಲ ಕುಡಿಯುವ ನೀರಿನ ಯೋಜನೆಗಳಿಗೆ ಡಿ.31ರೊಳಗೆ ಕಾರ್ಯಾದೇಶ ನೀಡಿ, ಎಲ್ಲ ಕಾಮಗಾರಿಗಳನ್ನು ಮಾರ್ಚ್ 31ರೊಳಗೆ ಪೂರ್ಣಗೊಳಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ನಿರ್ದೇಶನ ನೀಡಿದ್ದಾರೆ.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿ.ಪಂ. ಸಿಇಓಗಳ ಸಭೆಯಲ್ಲಿ ಇಲಾಖೆ ಪ್ರಗತಿ ಪರಿಶೀಲನೆ ಬಳಿಕ ಮಾತನಾಡಿದ ಅವರು, 1700 ಕೋಟಿ ರೂ.ವೆಚ್ಚದಲ್ಲಿ ಕೈಗೊಂಡಿರುವ ಪ್ರಗತಿಯಲ್ಲಿರುವ 27 ಸಾವಿರ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಬರ ಪರಿಹಾರ: ಈಗಾಗಲೇ 100 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದು, ಶಾಸಕರ ಅಧ್ಯಕ್ಷತೆಯಲ್ಲಿನ ಕಾರ್ಯಪಡೆಗೆ 50ಲಕ್ಷ ರೂ.ಬಿಡುಗಡೆ ಮಾಡಿದ್ದು, ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ ಈ ಹಣವನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದರು.
10 ಕೋಟಿ ಮಾನವ ದಿನ ಸೃಜನೆ: ಖಾತ್ರಿ ಯೋಜನೆಯಡಿ 8.5 ಕೋಟಿ ಮಾನವ ದಿನ ಸೃಜನೆ ಗುರಿ ಹೊಂದಿದ್ದು, ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಅದನ್ನು 10 ಕೋಟಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಆ ಮೂಲಕ ಶಾಲಾ ಕಾಂಪೌಂಡ್, ಶೌಚಾಲಯ, ದನದ ಕೊಟ್ಟಿಗೆ, ಕೃಷಿ ಹೊಂಡ ಸೇರಿದಂತೆ ಆಸ್ತಿ ಸೃಷ್ಟಿಸಲಾಗುವುದು ಎಂದು ಅವರು ತಿಳಿಸಿದರು.
ಕಸ ನಿರ್ವಹಣೆ: ಗ್ರಾಮೀಣ ಪ್ರದೇಶದಲ್ಲಿನ ಒಣ ಕಸ ಸಂಗ್ರಹಿಸಲು ಈಗಾಗಲೇ ಉಡುಪಿ ಜಿಲ್ಲೆಯ 12 ಗ್ರಾ.ಪಂ.ಗಳನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದು, ಮಾರ್ಚ್ 31ರೊಳಗೆ ಇದನ್ನು 500ಗ್ರಾ.ಪಂ.ಗಳಿಗೆ ವಿಸ್ತರಿಸಲಾಗುವುದು. ಹಳ್ಳಿಗಳಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ಕಸ ಸುಸ್ಥಿರ ವಿಲೇಗೆ ಕ್ರಮ ವಹಿಸಲಾಗುವುದು ಎಂದರು.
ಇಲಾಖೆಯಲ್ಲಿ 5ಲಕ್ಷ ರೂ.ವರೆಗಿನ ಕಾಮಗಾರಿಗಳನ್ನು ತುಂಡು ಗುತ್ತಿಗೆ ನೀಡಲು ಅವಕಾಶ ಕಲ್ಪಿಸಿದ್ದು, 5ಲಕ್ಷ ರೂ.ಗಳಿಗೂ ಮೇಲ್ಪಟ್ಟ ಕಾಮಗಾರಿಗಳನ್ನು ಟೆಂಡರ್ ಕರೆಯಬೇಕೆಂದು ನಿರ್ದೇಶನ ನೀಡಲಾಗಿದೆ. ಈ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸ್ಸನ್ನು ಆಧರಿಸಿ ಹಣಕಾಸು ಇಲಾಖೆ ತುಂಡು ಗುತ್ತಿಗೆ 1ಲಕ್ಷ ರೂ.ಗೆ ಮಿತಿಗೊಳಿಸಿ ಆದೇಶ ಹೊರಡಿಸಿತ್ತು ಎಂದು ಸ್ಪಷ್ಟಣೆ ನೀಡಿದರು.
ಸುದ್ಧಿಗೋಷ್ಠಿಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಆಯುಕ್ತ ವಿಶಾಲ್ ಸೇರಿ ಹಿರಿಯ ಅಧಿಕಾರಿಗಳು ಹಾಜರಿದ್ದರು.
‘ಉದ್ಯೋಗ ಖಾತರಿ ಯೋಜನೆಯಡಿ ಹಿಂದಿನ ವರ್ಷದ ಬರ ಪರಿಸ್ಥಿತಿ ವೇಳೆ ನಡೆದಿದ್ದ ಕಾಮಗಾರಿಗೆ ಕೇಂದ್ರದ ಪರವಾಗಿ ರಾಜ್ಯ ಸರಕಾರ 1500 ಕೋಟಿ ರೂ. ನೀಡಿತ್ತು. ಆಪೈಕಿ 550 ಕೋಟಿ ರೂ.ನೀಡಿದ್ದು, ಉಳಿದ 950 ಕೋಟಿ ರೂ. ಕೇಂದ್ರದಿಂದ ಬಾಕಿ ಬರಬೇಕಿದೆ. ಜತೆಗೆ ಈ ವರ್ಷದ್ದು 250 ಕೋಟಿ ರೂ. ಬಾಕಿ ಇದೆ. ಹೀಗಾಗಿ ಕೂಡಲೇ ಬಾಕಿ ಹಣ ಬಿಡುಗಡೆಗೆ ಕೋರಿ ಪ್ರಧಾನಿ ಮೋದಿಯವರಿಗೆ ಸಿಎಂ ಕುಮಾರಸ್ವಾಮಿ ಶೀಘ್ರವೇ ಪತ್ರ ಬರೆಯಲಿದ್ದಾರೆ’
-ಕೃಷ್ಣಭೈರೇಗೌಡ ಗ್ರಾಮೀಣಾಭಿವೃದ್ಧಿ ಸಚಿವ