×
Ad

ಇಂದಿನ ಮಕ್ಕಳು ವಾಸ್ತವ ಬದುಕಿನಿಂದ ದೂರ: ಪ್ರೊ.ಅರವಿಂದ ಮಾಲಗತ್ತಿ

Update: 2018-11-28 23:09 IST

ಬೆಂಗಳೂರು, ನ.28: ಇಂದಿನ ಮಕ್ಕಳು ತಂತ್ರಜ್ಞಾನದ ಕಾಲಘಟ್ಟದಲ್ಲಿ ಕಾಲ್ಪನಿಕ ಜಗತ್ತಿನೊಳಗೆ ನುಸುಳಿ ವಾಸ್ತವದ ಬದುಕಿನಿಂದ ದೂರವಾಗುತ್ತಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ವಾಭಿಮಾನಿ ಕರ್ನಾಟಕ ವೇದಿಕೆ ವತಿಯಿಂದ ಆಯೋಜಿಸಿದ್ದ ದ್ವಾರನಕುಂಟೆ ಪಾತಣ್ಣ ಅವರ ‘ರಣಕಹಳೆ’(ಮಕ್ಕಳ ಕಾದಂಬರಿ) ಹಾಗೂ ಮೂರು ಸುತ್ತಿನ ಕೋಟೆ(ಹಾಯ್ಕುಗಳು) ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದಿನ ಮಕ್ಕಳಿಗೆ ಕಾಲ್ಪನಿಕ ಕಥೆಗಳನ್ನು ಹೇಳುವ ಮೂಲಕ ವರ್ತಮಾನದ ಇರುವಿಕೆಯನ್ನು ಇಷ್ಟ ಪಡುವ ಬದಲಿಗೆ ಕಳೆದುಹೋಗುತ್ತಿರುವ ಕಡೆಗೆ ಗಮನ ಸೆಳೆಯುತ್ತಿದ್ದೇವೆ. ಈ ಸಂದರ್ಭದಲ್ಲಿ ನಮ್ಮದಲ್ಲದ ಬೌದ್ಧಿಕತೆಯ ಸಂಸ್ಕೃತಿಯ ಪುಸ್ತಕಗಳಿಂದ ಸಂಭ್ರಮಿಸಬಹುದೇ ಹೊರತು, ಏನನ್ನೂ ಕಲಿಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಬದುಕನ್ನು ಕಂಡುಕೊಳ್ಳುವ ಮಕ್ಕಳ ಪುಸ್ತಕಗಳು ಹೆಚ್ಚಾಗಬೇಕು ಎಂದು ಅವರು ಹೇಳಿದರು.

ತಂತ್ರಜ್ಞಾನದ ಪರಿಭಾಷೆಯಲ್ಲಿ ಕಾದಂಬರಿಗಳೇ ದೊಡ್ಡವಸ್ತುವಾಗಿ ಬಳಕೆ ಆಗಿದ್ದು, ಕಾರ್ಟೂನ್ ಮಾಧ್ಯಮ ಹೆಚ್ಚು ಪ್ರಾಮುಖ್ಯತೆ ಪಡೆಯುವುದರಿಂದ ಸಣ್ಣ ಕಥೆಗಳಿಗಿಂತ ಕಾದಂಬರಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪಾತಣ್ಣ ಅವರ ಕೃತಿಗಳಲ್ಲಿನ ಪುಟ ಪುಟಗಳಲ್ಲಿ ಸೂಕ್ಷ್ಮ ಸಂವೇದನೆ ಕಾಣುತ್ತಿದೆ. ಅಲ್ಲದೆ, ಅವರ ಕೃತಿಯಲ್ಲಿ ಬದ್ಧತೆ ಹಾಗೂ ಸಾಮಾಜಿಕ ವೌಲ್ಯಗಳನ್ನು ಪ್ರತಿಪಾದಿಸಿದ್ದಾರೆ ಎಂದು ತಿಳಿಸಿದರು.

ಹಾಯ್ಕುಗಳು ಕನ್ನಡಕ್ಕೆ ಹೊಸತು. ಹಾಯ್ಕು ಜಪಾನ್‌ನಿಂದ ಬಂದಿದ್ದು, ಅದರ ಮೂಲ ಚೀನಾದಲ್ಲಿದೆ. ಮೂರು ಸಾಲಿನಲ್ಲಿ ಹಾಯ್ಕು ಕಟ್ಟಿಕೊಡ್ತಾರೆ. ಆದರೆ ಮೂಲ ಹಾಯ್ಕು 5 ಸಾಲಿನಿಂದ ಕೂಡಿರತಿತ್ತು. ಹಾಯ್ಕುವಿನ ಮೂಲ ರೂಪ ಹಾಯ್ಕಾಯ್ ಆಗಿದೆ. 10-15 ಜನ ಸೇರಿ ಸರಣಿ ಮುಂದವರಿಸುವ ಪರಿಪಾಠವು ಹಾಯ್ಕುವಿನಲ್ಲಿದೆ. ಕನ್ನಡದಲ್ಲಿ ಇದನ್ನು ಬಳಕೆಗೆ ತರಬೇಕು ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಇಂದಿನ ಮಕ್ಕಳನ್ನು ಬದುಕಿಗೆ ಹತ್ತಿರವಾದ ರೀತಿಯಲ್ಲಿ ಬೆಳಸಬೇಕಿದೆ. ಆದರೆ ನಾವು ಆ ರೀತಿಯಲ್ಲಿ ಬೆಳೆಸುತ್ತಿಲ್ಲ. ಮಕ್ಕಳಿಗೆ ಮನಸ್ಸು ತುಂಬಿದ ಅನುಭವ ಆಗ್ತಿಲ್ಲ. ಮತ್ತೆ, ಮತ್ತೆ ಮೆಲಕಾಕುವ ರಾಗಗಳಾಗದೇ, ಕಂಠಪಾಠ ಮಾಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

600 ವರ್ಷದ ಇತಿಹಾಸವುಳ್ಳ ಆಂಗ್ಲ ಭಾಷೆ ಜಗತ್ತನ್ನು ಇಂದು ಆಳುತ್ತಿದೆ. ಅವರಿಗೆ ನಮ್ಮ ಭಾಷೆ ಎಂಬ ಇಚ್ಛಾಶಕ್ತಿಯಿತ್ತು. ಆದರೆ, ಇಂಗ್ಲಿಷ್ ಕಾವ್ಯ ಕಣ್ಣು ಬಿಡುವ ಮೊದಲೇ ಕನ್ನಡ ಎರಡು ಮಹಾಕಾವ್ಯಗಳು ರಚನೆಯಾಗಿದ್ದವು. ಅಲ್ಲದೆ, ಕನ್ನಡದ ವರ್ಣಮಾಲೆ ಎಲ್ಲ ಭಾಷೆಗಳ ಪದ, ವಾಕ್ಯವನ್ನು ತನ್ನ ಲಿಫಿಯ ಮೂಲಕ ಕಿಂಚಿತ್ತೂ ತಪ್ಪಿಲ್ಲದೇ ಬಳಸುವ ಸಾಮರ್ಥ್ಯವಿದೆ ಎಂದು ಹೇಳಿದರು.

ಮಾತೃಭಾಷೆ ಹೆಸರಿನಲ್ಲಿ ನ್ಯಾಯಾಲಯಗಳು ರಾಜ್ಯ ಭಾಷೆಗಳನ್ನು ಸೋಲಿಸುತ್ತಿವೆ. ಕನ್ನಡಕ್ಕೆ ಹತ್ತು ಜ್ಞಾನಪೀಠ ಪ್ರಶಸ್ತಿಗಳು ಬಂದರೂ ಕನ್ನಡದ ಸ್ಥಿತಿ ಸುಧಾರಣೆಯಾಗುವುದಿಲ್ಲ. ಕನ್ನಡದ ವಾರಸುದಾರರು ಎಚ್ಚರದಿಂದ ಇಲ್ಲದಿದ್ದರೆ ನಮ್ಮ ರೋದನೆ ಅರಣ್ಯರೋದನೆಯಾಗಿರುತ್ತದೆ

- ಎಸ್.ಜಿ.ಸಿದ್ದರಾಮಯ್ಯ, ಅಧ್ಯಕ್ಷ, ಕನ್ನಡ ಅಬಿವೃದ್ಧಿ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News