ಕೇಂದ್ರ ಸರಕಾರದಿಂದ ಅಂಬೇಡ್ಕರ್ ಆಶಯ ನುಚ್ಚುನೂರು: ಆರ್.ಪಿ.ಐ ರಾಜ್ಯಾಧ್ಯಕ್ಷ ಮೋಹನ್‌ ರಾಜ್

Update: 2018-12-06 18:09 GMT

ಬೆಂಗಳೂರು, ಡಿ.6: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನವಿರೋಧಿ ನೀತಿಗಳಿಂದಾಗಿ ಡಾ.ಬಿ.ಆರ್. ಅಂಬೇಡ್ಕರ್‌ರವರ ಸಂವಿಧಾನದ ಆಶಯಗಳು ನುಚ್ಚು ನೂರಾಗುತ್ತಿದೆ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಆರ್.ಮೋಹನ್‌ರಾಜ್ ಆತಂಕ ವ್ಯಕ್ತಪಡಿಸಿದರು.

ಗುರುವಾರ ಆರ್‌ಪಿಐ ನಗರದ ಯುವಿಸಿಇ ಅಲುಮ್ನಿ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ಆರ್.ಅಂಬೇಡ್ಕರ್ ಅವರ 62ನೆ ಪರಿನಿಬ್ಬಾಣ ದಿನದ ಅಂಗವಾಗಿ ಆಯೋಜಿಸಿದ್ದ ಬಹುಸಂಖ್ಯಾತರ ಏಕತೆಗಾಗಿ ಒಂದು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ಬಡತನ ಇಲ್ಲವಾಗಬೇಕು. ಜಾತಿ, ಮತಗಳ ಭೇದವಿಲ್ಲದ ಎಲ್ಲರಿಗೂ ಸಾಮಾಜಿಕವಾಗಿ, ಆರ್ಥಿಕವಾಗಿ ಸಮಾನತೆ ಇರಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಕನಸು ಕಂಡಿದ್ದರು. ಆ ಸದುದ್ದೇಶದಿಂದಲೆ ಅಪಾರ ಪರಿಶ್ರಮ ವಹಿಸಿ ಜಗತ್ತಿನಲ್ಲಿಯೆ ಅತ್ಯುತ್ತಮವಾದ ಸಂವಿಧಾನವನ್ನು ರೂಪಿಸಿದರು. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸಂವಿಧಾನ ಆಶಯದ ವಿರುದ್ಧವಾಗಿ ಆಡಳಿತ ನಡೆಸುತ್ತಿದೆ ಅವರು ಕಿಡಿಕಾರಿದರು.

ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಿರುವುದೆ, ಡಾ.ಬಿ.ಆರ್.ಅಂಬೇಡ್ಕರ್ ರೂಪಿಸಿರುವ ಸಂವಿಧಾನವನ್ನು ನಾಶ ಮಾಡುವುದಕ್ಕಾಗಿಯೆಂದು ಕೇಂದ್ರದ ಬಿಜೆಪಿ ನಾಯಕರು ಸಾರ್ವಜನಿಕ ಸಭೆಗಳಲ್ಲಿ ಹೇಳುತ್ತಾರೆ. ಆದರೂ ಈ ದೇಶದ ಬಹುಜನರು ಬಿಜೆಪಿ ನಾಯಕರನ್ನು ಪ್ರಶ್ನಿಸುತ್ತಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಶೋಷಿತರ ಪರವಾಗಿರುವ ಒಂದೊಂದೆ ಕಾನೂನನ್ನು ನಾಶ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ನೋಟು ನಿಷೇಧ, ಜಿಎಸ್‌ಟಿ ಜಾರಿ, ಗ್ಯಾಸ್ ಹಾಗೂ ಪೆಟ್ರೋಲ್ ದರದಲ್ಲಿ ಹೆಚ್ಚಳ ಇವೆಲ್ಲವನ್ನು ಗಮನಿಸಿದರೆ, ಕೇಂದ್ರ ಸರಕಾರ ಯಾರ ಪರವಾಗಿ ಆಡಳಿತ ನಡೆಸುತ್ತಿದೆ ಎಂದು ಜನಸಾಮಾನ್ಯರಿಗೂ ಅರ್ಥವಾಗಲಿದೆ. ಆದರೂ ಬಿಜೆಪಿ ಚುನಾವಣಾ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಕೋಮು ಭಾವನೆ ಬಿತ್ತುವ ಮೂಲಕ ಮತಗಳನ್ನು ಪಡೆಯುಲು ಯಶಸ್ವಿಯಾಗುತ್ತಿದೆ. ಬಿಜೆಪಿಯ ಈ ಜನವಿರೋಧಿ ನೀತಿಯ ವಿರುದ್ಧ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಆರೆಸ್ಸೆಸ್ ಹಾಗೂ ಬಿಜೆಪಿಯ ನಾಯಕರಿಗೆ ಈ ದೇಶದ ಬಗ್ಗೆ ಯಾವುದೆ ಪ್ರೀತಿಯಿಲ್ಲ. ದೇಶದ ಸಂಪತ್ತನ್ನು ಬಂಡವಾಳಶಾಹಿಗಳಿಗೆ ಹಂಚಲು ತುದಿಗಾಲಲ್ಲಿ ನಿಂತಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶದ ಉಳಿವಿಗಾಗಿ ದಲಿತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳು ಒಂದಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ದಲಿತ ನಾಯಕ ಮನೋಹರ ಚಂದ್ರಪ್ರಸಾದ್ ಮಾತನಾಡಿ, ದೇಶದ ಮೂಲ ಸಂಸ್ಕೃತಿ ಬೌದ್ಧ ಆಚರಣೆಯಾಗಿದೆ. ಆದರೆ, ವೈದಿಕರು ಈ ದೇಶಕ್ಕೆ ಅಕ್ರಮವಾಗಿ ನುಸುಳಿ ಅಸ್ಪಶ್ಯತೆ, ಅಸಮಾನತೆ, ಮೇಲು ಕೀಳು ಎಂಬ ಭಾವನೆಯನ್ನು ಬಿತ್ತಲು ಯಶಸ್ವಿಯಾಗಿದ್ದಾರೆ. ಇದರ ಪರಿಣಾಮವಾಗಿ ಭಾರತವು ಸಾವಿರಾರು ವರ್ಷಗಳಿಂದಲೂ ಗುಲಾಮ ವ್ಯವಸ್ಥೆಯಲ್ಲಿಯೆ ಮುಂದುವರೆಯಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದಲಿತ ನಾಯಕರಾದ ಬಸವರಾಜ್ ಕೌತಾಳ್, ಎಂ.ಸಿ.ನಾಗರಾಜು, ಕೆ.ಭೈರಪ್ಪ, ಜೆ.ಸಿದ್ಧರಾಜು, ಸಿ.ಮುನಿಕೃಷ್ಣ, ಎ.ನಾರಾಯಣಸ್ವಾಮಿ, ಕೋಕಿಲಾಬಾಯಿ, ಟಿ.ಎಂ.ವೆಂಕಟೇಶ್, ಮುನಿಯಲ್ಲಪ್ಪ, ರವೀಂದ್ರ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News