ಹೈಕೋರ್ಟ್ಗೆ ಇ-ಮೇಲ್ ಸಂದೇಶ ವಿಚಾರ: ಅನಾಮಧೇಯನಿಂದ ಹೈಕೋರ್ಟ್ಗೆ ಕ್ಷಮಾಪಣೆ ಪತ್ರ
ಬೆಂಗಳೂರು, ಡಿ.6: ನಗರದಲ್ಲಿ ಅನಧಿಕೃತ ಫ್ಲೆಕ್ಸ್ ಸಮಸ್ಯೆ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್ಗೆ ಇ-ಮೇಲ್ ಕಳುಹಿಸಿದ್ದ ಅನಾಮಧೇಯ ವ್ಯಕ್ತಿಯು ಗುರುವಾರ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದ ಮುಂದೆ ಹಾಜರಾಗಿದ್ದನು.
ನ್ಯಾಯಪೀಠವು ಈ ರೀತಿಯಾಗಿ ಇ-ಮೇಲ್ ಕಳುಹಿಸಬಾರದು ಎಂದು ಸೂಚಿಸಿತು. ಅಲ್ಲದೆ, ಆ ವ್ಯಕ್ತಿಯಿಂದ ಕ್ಷಮಾಪಣೆ ಪತ್ರವನ್ನು ಬರೆಯಿಸಿಕೊಂಡು ಕಳುಹಿಸಿದರು.
ನಗರದಲ್ಲಿ ಫ್ಲೆಕ್ಸ್ಗಳ ಹಾವಳಿ ಹೆಚ್ಚಾಗಿದೆ ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಸುಜಾತ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಕೇಶವ ಎಂಬುವವರು ಫ್ಲೆಕ್ಸ್ ಸಮಸ್ಯೆಗೆ ತನ್ನ ಬಳಿ ಐಡಿಯಾಗಳು ಇವೆ ಎಂಬ ಇ-ಮೇಲ್ ಸಂದೇಶವನ್ನು ಹೈಕೋರ್ಟ್ ರಿಜಿಸ್ಟ್ರಾರ್ಗೆ ಕಳುಹಿಸಿದ್ದರು. ಆದರೆ, ಈ ಸಂದೇಶವನ್ನು ಯಾರು ಕಳುಹಿಸಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಹೀಗಾಗಿ, ಪೊಲೀಸರು ಕೇಶವನನ್ನು ಪತ್ತೆ ಹಚ್ಚಿ ಗುರುವಾರ ವಿಭಾಗೀಯ ನ್ಯಾಯಪೀಠಕ್ಕೆ ಹಾಜರುಪಡಿಸಿದರು. ನ್ಯಾಯಪೀಠವು ಕೇಶವನಿಂದ ಕ್ಷಮಾಪಣಾ ಪತ್ರವನ್ನು ಬರೆಯಿಸಿಕೊಂಡು, ಮತ್ತೊಂದು ಬಾರಿ ಈ ರೀತಿಯ ತಪ್ಪುಗಳನ್ನು ವಾಡಬಾರದೆಂದು ಸೂಚಿಸಿ ಕಳುಹಿಸಿತು.