‘ಹರಪ್ಪ: ಡಿಎನ್‌ಎ ನುಡಿದ ಸತ್ಯ’ ಮತ್ತಷ್ಟು ಓದಿಗೆ ಪ್ರಚೋದಿಸುವ ಕೃತಿ

Update: 2018-12-08 17:40 GMT

 ಬಸವರಾಜು ದೇಸಿ

ಸಡನ್ನಾಗಿ ಆರ್ಯರು ಭಾರತದ ಮೂಲನಿವಾಸಿಗಳು ಎನ್ನುವ ಮಾತು ಈಗ ಚಲಾವಣೆಗೆ ಬಂದಿದೆ. ಇದಕ್ಕೆ ಉತ್ತರವೇನೋ ಎಂಬಂತಿದೆ ಹೊಸ ಪುಸ್ತಕ ‘ಹರಪ್ಪ: ಡಿಎನ್‌ಎ ನುಡಿದ ಸತ್ಯ’. ಬಹುಶಃ ಈ ಪುಸ್ತಕ ತರಲು ಕಾರಣ ಹಿರಿಯ ಪುರಾತತ್ವ ತಜ್ಞರಾದ ಡಾ. ವಸಂತ ಶಿವರಾಮ ಶಿಂಧೆಯವರಿಗೆ ಹರಪ್ಪ ಸಂಸ್ಕೃತಿಯ ರಾಖಿಗ್ಹರಿ ಎಂಬ ಸ್ಥಳದಲ್ಲಿ ದೊರೆತ ಅಸ್ಥಿಪಂಜರದಿಂದ ಮೊತ್ತಮೊದಲ ಬಾರಿಗೆ ಡಿಎನ್‌ಎ ಸಿಕ್ಕ ಸಂತಸವಿರಬೇಕು. ಓದು- ವಿನಿಮಯ ಎಂಬ ವಾಟ್ಸ್‌ಆ್ಯಪ್ ಗುಂಪಿನ ಗೆಳೆಯರು ಈ ಹೊತ್ತಿಗೆಯನ್ನು ‘ಓದು ಪ್ರಕಾಶನ’ದ ಹೆಸರಿನಡಿ ತಂದಿದ್ದಾರೆ; ಜ್ಞಾನ ಪ್ರಸಾರಕ್ಕಾಗಿ. ಪ್ರಾಗೈತಿಹಾಸವಾಗಲಿ, ಇತಿಹಾಸವಾಗಲಿ ಯಾವುದನ್ನೂ ವಿಶೇಷವಾಗಿ ಓದಿಕೊಂಡಿರದೆ ಆದರೆ ಆರ್ಯ-ದ್ರಾವಿಡ ಎಂಬ ಮಾತುಗಳನ್ನು ಕೇಳಿದಾಗ ನನ್ನ ದ್ರಾವಿಡ ಕಿವಿ ಸಹಜವಾಗಿಯೇ ಚುರುಕಾಗುತ್ತವೆ. ಶಾಲೆಯಲ್ಲಿ ಕಲಿತಂತೆ, ದ್ರಾವಿಡರು ಈ ನೆಲದ ಮೂಲನಿವಾಸಿಗಳೆಂದೂ ಆರ್ಯರು ಮಧ್ಯ ಪ್ರಾಚ್ಯದಿಂದ ವಲಸೆ ಬಂದವರೆಂಬುದೂ ಸಾಮಾನ್ಯ ತಿಳಿವಳಿಕೆಯ ಇತಿಹಾಸ. ಈ ಹಿನ್ನೆಲೆಯಲ್ಲಿ ಸಹಜ ಕುತೂಹಲದಿಂದ ಪುಸ್ತಕವನ್ನು ಓದಿದೆ.

 

ಲಕ್ಷ್ಮೀಪತಿ ಕೋಲಾರ

ಈ ಪುಸ್ತಕದ ಮುಖ್ಯ ತಿರುಳು ಹರ್ಯಾಣದ ಹಿಸ್ಸಾರ್ ಜಿಲ್ಲೆಯಲ್ಲಿರುವ ರಾಖಿಗ್ಹರಿ ಪ್ರಾಕ್ತನ ನೆಲೆಯಲ್ಲಿ ಸಿಕ್ಕಿರುವ ಅಸ್ಥಿಪಂಜರದ ಡಿಎನ್‌ಎ ವಿಶ್ಲೇಷಣೆ ಜಗತ್ತಿನ ಗಮನ ಸೆಳೆದಿರುವುದು. ಇದರ ಡಿಎನ್‌ಎಯ ಅಧ್ಯಯನದಲ್ಲಿ ಅದನ್ನು ಈಗಿನ ಭಾರತದ ಸಮುದಾಯಗಳಿಗೆ ಸಮೀಕರಿಸಿದಾಗ ದಕ್ಷಿಣ ಭಾರತದ ಬುಡಕಟ್ಟು ಜನಾಂಗದೊಂದಿಗೆ ನಿಕಟ ಸಂಬಂಧವಿರುವುದನ್ನು ಸೂಚಿಸುತ್ತದೆ. ಅದರಲ್ಲೂ ತಮಿಳುನಾಡಿನ ನೀಲಗಿರಿಯ ದ್ರಾವಿಡ ಭಾಷಿಕರಾದ ಇರುಳರೊಂದಿಗೆ ಹೋಲಿಕೆಯಾಗಿದೆಯೆ ಹೊರತು ಆರ್ಯರೊಂದಿಗಲ್ಲ! ಡಿಎನ್‌ಎಯ ಫಲಿತಾಂಶ 2017ರಲ್ಲಿಯೇ ಪ್ರಕಟವಾಗಬೇಕಿದ್ದರೂ ರಾಜಕೀಯವಾಗಿ ಸೂಕ್ಷ್ಮ ವಿಚಾರವಾದ ಕಾರಣ ತಡೆಹಿಡಿಯಲಾಗಿದೆಯಂತೆ. ಈ ಸಂಶೋಧನಾ ವರದಿಯ ಭವಿಷ್ಯ ಏನೇ ಇರಲಿ, ಇಡೀ ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ಪ್ರತಿ ವಿಷಯವೂ ಪುರಾವೆ ಸಹಿತವಾಗಿದೆ. ಲೇಖಕರದು ದ್ರಾವಿಡಪರವಾದ ಮನೋಗತವೆಂದು ಸ್ಪಷ್ಟವಾದರೂ ಚರ್ಚಿಸಿರುವ ವಿಷಯಗಳೆಲ್ಲ ಪೂರ್ವ ಸಂಶೋಧನಾಧಾರಿತ.

  

ಸುರೇಶ್ ಭಟ್ ಬಾಕ್ರಬೈಲು

ರಾಖಗ್ಹರಿ ಡಿಎನ್‌ಎ ವರದಿ ಮತ್ತೊಂದು ಸ್ಫೋಟಕ ಸತ್ಯ ಹೊರಬರುವ ಸಾಧ್ಯತೆಯನ್ನು ಸೂಚಿಸಿದೆ. ಶ್ರೀಕೃಷ್ಣನ ದ್ವಾರಕೆಯು ಸಮುದ್ರದಾಳದಲ್ಲಿ ಮುಳುಗಡೆಯಾಗಿರುವುದನ್ನು ಕೇಳಿದ್ದವಷ್ಟೆ. ಅದು 9,500 ವರ್ಷಗಳ ಪುರಾತನವೆಂದು ಕಾರ್ಬನ್ ಡೇಟಿಂಗ್ ಮೂಲಕ ಈಗಾಗಲೇ ನಿರ್ಧರಿಸಲಾಗಿದೆ. ರಾಖಿಗ್ಹರಿಯ ನೆಲೆಯು ಹರಪ್ಪ ಸಂಸ್ಕೃತಿಯಲ್ಲೇ ಅತ್ಯಂತ ದೊಡ್ಡ ನಗರ ಸಂಸ್ಕೃತಿಯಾಗಿದ್ದು, ಸುಮಾರು 550 ಹೆಕ್ಟೇರ್ ವಿಶಾಲವಾದುದಾಗಿದೆ ಮತ್ತು ಇದು 7500 ವರ್ಷಗಳ ಹಿಂದಿನದು. ಅಂದರೆ 10,000 ವರ್ಷಗಳಷ್ಟು ಹಿಂದೆಯೇ ಭಾರತದ ವಾಯವ್ಯ ಪ್ರದೇಶದಲ್ಲಿ ನಗರ ಸಂಸ್ಕೃತಿಯಿತ್ತು ಎಂದು ಊಹಿಸಲಾಗಿದೆ ಮತ್ತು ಸಮುದ್ರದಲ್ಲಿ ಮುಳುಗಿರುವ ನಗರವು ಶ್ರೀಕೃಷ್ಣನ ದ್ವಾರಕೆಯೆಂದು ಬಂದಿರುವ ತೀರ್ಮಾನಕ್ಕೆ ಪ್ರಶ್ನೆಯಾಗುವುದನ್ನು ಕೂಡ ಹೇಳಲಾಗಿದೆ. 

ವಿಷಯ ಮಂಡನೆಗೆ ಸೂಚ್ಯವಾಗಿ ಹಲವಾರು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ, ಇಂತಹ ಕೆಲವುಗಳೆಂದರೆ: 1. ಭರತನಿಂದ ಭಾರತವೆಂಬ ಹೆಸರಾಯಿತಾದರೆ, ಭಾರತ ಪಿತೃಭೂಮಿಯಾಗದೆ ಮಾತೃಭೂಮಿಯಾಗಿದ್ದು ಹೇಗೆ? 2. ಸೋಮರಸವಿಲ್ಲದೆ ಋಗ್ವೇದವನ್ನು ಊಹಿಸಿಕೊಳ್ಳಲಾಗದೆಂದು ಹೇಳುತ್ತ ವೈದಿಕರಿಗಿದ್ದ ಪಾನಪ್ರಿಯತೆ. 3. ತಿರುಪತಿಯ ಆದಿದೈವ ತಮಿಳಿನ ತಿರುಪತ್ತೈನಲ್ಲಿ ಸಂಸ್ಕೃತದ ‘ಪತಿ’ ಸೇರಿದ್ದರ ಸಾಂಸ್ಕೃತಿಕ ರಾಜಕಾರಣ. 4. ನಿರ್ಗುಣ ಉಪಾಸನೆ, ದಶಾವತಾರದ ಪರಿಕಲ್ಪನೆ, ಕ್ಷೀರಮಥನದ ಪುರಾಣ ಮುಂಡಾ ಜನಾಂಗದ ಕೊಡುಗೆ! ಋಗ್ವೇದದಲ್ಲಿ ಕನಿಷ್ಠ ನೂರು ಪದಗಳಾದರೂ ಮುಂಡಾ ಭಾಷೆಯ ಮೂಲದ್ದಾಗಿದೆ. 5. ಯಹೋವನನ್ನು ಋಗ್ವೇದದಲ್ಲಿ ಯಹ್ವನೆಂದು 41 ಬಾರಿ ಸ್ಮರಿಸಿರುವುದು. 5. ಕಕೇಷಿಯನ್ ಮೂಲದ ಅಗಸ್ತ್ಯನನ್ನು ತಮಿಳರು ತಮ್ಮ ಮೂಲ ಪುರುಷನೆಂದು ನೆಚ್ಚಿರುವ ಭಾವ. 6. ದ್ರಾವಿಡರೂ ಸೇರಿದಂತೆ ಭಾರತಕ್ಕೆ ವಲಸೆ ಬಂದವರ ಹಾದಿ.

ಹೀಗೆ ಹಲವಾರು ಪೂರಕ ಸಂವಾದಗಳು ಓದುಗನ ನೋಟವನ್ನು ವಿಸ್ತರಿಸುವುದಲ್ಲದೆ, ಮತ್ತಷ್ಟು ಅಧ್ಯಯನಕ್ಕೂ ಹಚ್ಚುವಂತೆ ಮಾಡುತ್ತದೆ. ಪುಸ್ತಕದ ಕೊನೆಯ ಭಾಗದಲ್ಲಿ ಓಶೋ ಹೇಳಿರುವ ಹಿಂದೂ ಅನ್ನೋದೂ ಒಂದು ಅಲ್ಪಸಂಖ್ಯಾತ ಧರ್ಮ. ಯಾಕೆಂದರೆ ಇದರಲ್ಲಿ ಶೇ. 80ರಷ್ಟು ಶೂದ್ರರಿದ್ದಾರೆ. ಒಂದು ವೇಳೆ ಈ ಶೂದ್ರರಿಗೆ ಅವರ ಪುರಾತನ ಇತಿಹಾಸ ತಿಳಿದುಬಿಟ್ಟರೆ ಅವರು ಬೌದ್ಧರಾಗುತ್ತಾರೆ, ಇಲ್ಲವೇ ಸಿಖ್ಖರಾಗುತ್ತಾರೆ. ಎಂಬ ಮಾತನ್ನು ಉಲ್ಲೇಖಿಸಲಾಗಿದೆ. ಇದು ಪುಸ್ತಕದ ಧ್ಯೇಯ ಧ್ಯಾನವನ್ನು ಒಂದು ಮಟ್ಟಿಗೆ ಸಾರುತ್ತದೆ ಕೂಡ.

‘ಹರಪ್ಪ: ಡಿಎನ್‌ಎ ನುಡಿದ ಸತ್ಯ’ ಪುಸ್ತಕವನ್ನು ಕರ್ನಾಟಕದ ಓದುಗರ ಕೈಗಿಟ್ಟಿರುವ ಲಕ್ಷ್ಮೀಪತಿ ಕೋಲಾರ ಮತ್ತು ಸುರೇಶ್ ಭಟ್ ಬಾಕ್ರಬೈಲು ಇವರಿಬ್ಬರೂ ಸಹ ವೈಚಾರಿಕತೆ, ಸಾಮಾಜಿಕ ಹಾಗೂ ರಾಜಕೀಯ ವಸ್ತುವಿಷಯಗಳನ್ನು ಉತ್ತಮವಾಗಿ ನಿರ್ವಹಿಸಬಲ್ಲ ನುರಿತ ಬರಹಗಾರರಾಗಿದ್ದಾರೆ. ಇವರ ಈ ಮಾನವೀಕಶಾಸ್ತ್ರದ ಕುತೂಹಲಕಾರಿ ವಿಷಯಗಳುಳ್ಳ ಕಿರುಪುಸ್ತಕವು ಓದುಗರನ್ನು ಮತ್ತಷ್ಟು ಹೊಸ ಓದಿಗೆ ಪ್ರಚೋದನೆ ನೀಡುವಂತೆ, ಹುಡುಕಾಟಕ್ಕೆ ಆಹ್ವಾನಿಸುವಷ್ಟು ಪರಿಣಾಮಕಾರಿಯಾಗಿದೆ. ಅವರ ಈ ಪುಸ್ತಕಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚರ್ಚೆಗಳಾಗುತ್ತಿವೆ. ಇದೊಂದು ಗಮನಾರ್ಹ ಬೆಳವಣಿಗೆಯಾಗಿದೆ.

Writer - ಬಸವರಾಜು ದೇಸಿ

contributor

Editor - ಬಸವರಾಜು ದೇಸಿ

contributor

Similar News