ಮೋದಿ ಪ್ರಣೀತ ಮಾಧ್ಯಮ ಮಾಯಾಜಾಲ

Update: 2018-12-11 14:07 GMT

ಎನ್.ಎಸ್. ಶಂಕರ್

1979ರಿಂದ ಜನವಾಣಿ, ಪ್ರಜಾವಾಣಿ, ಲಂಕೇಶ್ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ದುಡಿದ ಇವರು, ಮುಂಗಾರು ಮತ್ತು ಸುದ್ದಿ ಸಂಗಾತಿ ಪತ್ರಿಕೆಗಳ ಸಂಸ್ಥಾಪಕರಲ್ಲೊಬ್ಬರು. ಲಂಕೇಶರ ಸಣ್ಣಕತೆ ಆಧಾರಿತ ಮುಟ್ಟಿಸಿಕೊಂಡವರು ಕಿರುಚಿತ್ರದ ಮೂಲಕ ದೃಶ್ಯ ಮಾಧ್ಯಮ ಪ್ರವೇಶಿಸಿದ ಇವರು, ನಾಲ್ಕು ಧಾರಾವಾಹಿಗಳನ್ನು, ಹಲವಾರು ಕಿರುಚಿತ್ರ, ಸಾಕ್ಷ್ಯಚಿತ್ರ, ಟೆಲಿಚಿತ್ರ, ಜಾಹೀರಾತು ಚಿತ್ರಗಳನ್ನು ನಿರ್ಮಿಸಿದ್ದಾರೆ. ಎರಡು ರಾಜ್ಯ ಪ್ರಶಸ್ತಿಗಳೂ ಸೇರಿದಂತೆ ಹಲವು ಪುರಸ್ಕಾರಗಳನ್ನು ಪಡೆದ ಉಲ್ಪಾ ಪಲ್ಟಾ ಚಿತ್ರದೊಂದಿಗೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಇವರು, ರಾಂಗ್ ನಂಬರ್, ಜೂಟಾಟ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ರಾಷ್ಟ್ರಪ್ರಶಸ್ತಿ ತೀರ್ಪುಗಾರರ ಮಂಡಳಿ ಸದಸ್ಯರಾಗಿ, ಕರ್ನಾಟಕ ರಾಜ್ಯ ಗುಣಮಟ್ಟದ ಚಿತ್ರಗಳ ಸಹಾಯಧನ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದವರು. ವ್ಯಂಗ್ಯಚಿತ್ರ ರಚನೆಗೆ ರಾಷ್ಟ್ರೀಯ ಮಟ್ಟದಲ್ಲಿ ಎರಡು ಬಾರಿ ಪ್ರಶಸ್ತಿ ಪಡೆದವರು. ಸಿನೆಮಾ, ರಾಜಕಾರಣ, ಸಾಹಿತ್ಯ ಕ್ಷೇತ್ರಗಳ ಆಳ ಅಧ್ಯಯನ, ಮೌಲ್ಯಯುತ ಬರವಣಿಗೆ, ಭಾಷಣಗಳ ಮೂಲಕ ಚಿಂತಕರೆಂದು ಗುರುತಿಸಿಕೊಂಡವರು.

ಹೆಸರು ಚಂದ್ರಮಣಿ ಕೌಶಿಕ್. ಛತ್ತೀಸ್‌ಗಡದ ಕಾಂಕೇರ್ ಜಿಲ್ಲೆಯ ಕನ್ಹರಿ ಗ್ರಾಮದ ಬಡ ರೈತ ಮಹಿಳೆ. ಕಳೆದ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸರಕಾರದ ವಿವಿಧ ಯೋಜನೆಗಳ ಬಗ್ಗೆ ದೇಶದ ರೈತ ಸಮೂಹದೊಂದಿಗೆ ಚರ್ಚಿಸಲು ವೀಡಿಯೊ ಕಾನ್ಫರೆನ್ಸ್ ಮಾಡಿದಾಗ ಟಿವಿ ಪರದೆಯಲ್ಲಿ ಕಣ್ಣೆದುರು ಕಂಡವರು ಈ ಚಂದ್ರಮಣಿ ಕೌಶಿಕ್. ಮೋದಿ ಆ ಹೆಂಗಸಿನ ಜೊತೆ ಮಾತಾಡುತ್ತ ಆಕೆಯ ಆದಾಯದ ಬಗ್ಗೆ ವಿಚಾರಿಸಿದರು; ಚಂದ್ರಮಣಿ ಕೂಡಲೇ ಮೋದಿ ಸರಕಾರದ ಯೋಜನೆಗಳಿಂದಾಗಿ ತನ್ನ ವರಮಾನ ದುಪ್ಪಟ್ಟಾಗಿದೆ ಎಂಬ ಉತ್ತರ ಕೊಟ್ಟಳು!

https:/www.youtube.com/watch?v=X6G_mN6JGYs)!

(ನೋಡಿ ವೀಡಿಯೊ: ಅಲ್ಲಿಗೆ ಮೋದಿ ಖುಷ್ ಹುವಾ...!! ಎಂಥ ಸಾಧನೆ! ಅಲ್ಲವೇ? ಹೇಗೂ 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡಬೇಕೆಂಬುದು ಮೋದಿ ಸರಕಾರದ ಅಧಿಕೃತ ಘೋಷಣೆ.

ಆದರೆ ಈ ದುಪ್ಪಟ್ಟು ವ್ಯವಹಾರದ ಬಗ್ಗೆ ಮೊದಲು ಅನುಮಾನ ಬಂದಿದ್ದು ಕೋಲ್ಕತಾದ ಎಬಿಪಿ ನ್ಯೂಸ್ ವಾಹಿನಿಗೆ. ಈ ಎಬಿಪಿ ನ್ಯೂಸ್- ಆನಂದ್ ಬಜಾರ್ ಪತ್ರಿಕಾ ಬಳಗದ ಹಿಂದಿ ಸುದ್ದಿವಾಹಿನಿ. ದೇಶದ ಪ್ರಮುಖ ಹಿಂದಿ ಸುದ್ದಿ ಚಾನೆಲ್‌ಗಳಲ್ಲೊಂದು. ದಿ ಟೆಲಿಗ್ರಾಫ್ ದಿನಪತ್ರಿಕೆ ಕೂಡ ಅವರದೇ ಪ್ರಕಟನೆ. ಅವರ ಅನುಮಾನಕ್ಕೆ ಕಾರಣ ಇಷ್ಟೇ: ಛತ್ತೀಸ್‌ಗಡ, ದೇಶದ ಅತ್ಯಂತ ಹಿಂದುಳಿದ ರಾಜ್ಯಗಳಲ್ಲೊಂದು. ಅದರಲ್ಲೂ ಕಾಂಕೇರ್ ಜಿಲ್ಲೆ- ಅವರ ಅಧಿಕೃತ ವೆಬ್‌ಸೈಟ್ ಪ್ರಕಾರವೇ- ಭಾರತ ದೇಶದಲ್ಲಷ್ಟೇ ಅಲ್ಲ, ಇಡೀ ಭೂಲೋಕದಲ್ಲೇ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲೊಂದು! ಇಂಥ ಕಡೆ ರೈತ ಹೆಣ್ಣುಮಗಳ ವರಮಾನ ದುಪ್ಪಟ್ಟಾಗಿದೆ ಎಂದರೆ? ಸುದ್ದಿ ನಿಜವಾಗಿದ್ದರೇನೋ ಅದು ಅದ್ಭುತವೇ ಸರಿ. ಹಾಗಿರದೆ ಅದು ಸುಳ್ಳಾಗಿದ್ದರೆ...?

ಪತ್ತೆ ಮಾಡಲೆಂದೇ ಎಬಿಪಿ ನ್ಯೂಸ್ ತನ್ನ ವರದಿಗಾರರನ್ನು ಕಳಿಸಿತು. ಮತ್ತು ಆ ವರದಿಗಾರರು ತಂದ ವಸ್ತುಸ್ಥಿತಿ ವರದಿ ಹದಿನಾಲ್ಕು ದಿನಗಳ ನಂತರ ಜುಲೈ 6ರಂದು ವಾಹಿನಿಯಲ್ಲಿ ಬಿತ್ತರಗೊಂಡಿತು

(ವೀಡಿಯೊ ನೋಡಿ:-https://youtu.be/lboVJ6cxzdU) ವಾಹಿನಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲೊಂದಾದ- ರಾತ್ರಿ 9:00ಗಂಟೆಗೆ ಪ್ರಸಾರವಾಗುವ ಮಾಸ್ಟರ್ ಸ್ಟ್ರೋಕ್‌ನಲ್ಲಿ.

ಆ ವರದಿಯಲ್ಲಿ ಬಹಿರಂಗವಾದ ಸಂಗತಿಯೆಂದರೆ- ಮೋದಿಯವರ ಇಡೀ ಪ್ರಶ್ನೋತ್ತರ ಪ್ರಸಂಗವೇ ಒಂದು ದೊಡ್ಡ ಪ್ರಹಸನ! ಯಾಕೆಂದರೆ ವೀಡಿಯೊ ಸಂವಾದಕ್ಕೆ ಮುಂಚೆಯೇ ದಿಲ್ಲಿಯಿಂದ ಬಂದಿಳಿದಿದ್ದ ಅಧಿಕಾರಿಗಳು, ಚಂದ್ರಮಣಿ ಕೌಶಿಕ್ ಎಂಬ ಆ ಮಹಿಳೆಗೆ, ಪ್ರಧಾನಿಗಳ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಏನು ಹೇಳಬೇಕೆಂದು ಮೊದಲೇ ಬೋಧಿಸಿದ್ದರು. ಅದರಲ್ಲೂ ವರಮಾನ ದುಪ್ಪಟ್ಟು ಅಂಶವನ್ನು ಒತ್ತಿ ಒತ್ತಿ ಹೇಳಿಕೊಟ್ಟು ತರಬೇತಿಗೊಳಿಸಿದ್ದರು!... ಮಾಸ್ಟರ್ ಸ್ಟ್ರೋಕ್‌ನ ಈ ತನಿಖಾ ವರದಿ ಸಂಚಲನವನ್ನೇ ಸೃಷ್ಟಿಸಿತು.

ಜುಲೈ 6ರ ಮಾಸ್ಟರ್ ಸ್ಟ್ರೋಕ್‌ನಲ್ಲಿ ಹೀಗೆ ಚಂದ್ರಮಣಿ ಕೌಶಿಕ್ ಪ್ರಸಂಗವನ್ನು ಬಯಲಿಗೆಳೆದಿದ್ದೊಂದೇ ಆ ವಾಹಿನಿಯ ಸಾಧನೆಯಲ್ಲ. ಅದಕ್ಕೆ ಮುಂಚೆಯೂ, ನಂತರವೂ ಸರಕಾರದ ಸುಳ್ಳುಗಳನ್ನು ಆ ಚಾನೆಲ್ ಸತತವಾಗಿ ಸ್ಫೋಟಿಸುತ್ತಲೇ ಬಂದಿತ್ತು.

ಆ ದಿನಗಳಲ್ಲೇ ಮಾಸ್ಟರ್ ಸ್ಟ್ರೋಕ್, ಜಾರ್ಖಂಡ್ ರಾಜ್ಯದ ಗೊಡ್ಡಾದಲ್ಲಿ ಗೌತಮ್ ಅದಾನಿಗೆ ಸೇರಿದ ಉಷ್ಣಸ್ಥಾವರ ಸ್ಥಾಪನೆ ಸಂದರ್ಭದಲ್ಲಿ ಹೇಗೆ ಎಲ್ಲ ನೀತಿ ನಿಯಮಗಳನ್ನೂ ಗಾಳಿಗೆ ತೂರಲಾಗಿದೆ; ಆದರೆ ಅದಾನಿ ಪ್ರಧಾನಮಂತ್ರಿಗೆ ಪರಮಾಪ್ತರಾದ್ದರಿಂದ ಅವರ ವಿರುದ್ಧ ಏನೂ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎನ್ನುವ ವರದಿ ಬಿತ್ತರಿಸಿತ್ತು. ಅಷ್ಟೇ ಅಲ್ಲ, ಆ ವಿದ್ಯುತ್ ಸ್ಥಾವರ ಯೋಜನೆಗೆ ಭೂಮಿ ಬಿಟ್ಟುಕೊಡಲು ಒಪ್ಪದ ರೈತರಿಗೆ ಅದಾನಿ ಸಂಸ್ಥೆ ಕಡೆಯಿಂದ ಕೊಲೆ ಬೆದರಿಕೆ ಹಾಕಲಾಗಿತ್ತು; ಅಧಿಕಾರಿಗಳು ಅದನ್ನು ನೋಡಿಯೂ ಕೈ ಕಟ್ಟಿ ಕುಳಿತಿದ್ದ ಆಘಾತಕಾರಿ ಅಂಶವೂ ಆ ವರದಿಯಲ್ಲಿತ್ತು. ಭೂಮಿ ಬಿಟ್ಟು ಕೊಡದಿದ್ದರೆ ನಮ್ಮನ್ನು ಜೀವಂತ ಹುಗಿಯುತ್ತೇನೆ ಎಂದು ಕಂಪೆನಿ ಅಧಿಕಾರಿಯೊಬ್ಬ ನಮಗೆ ಧಮಕಿ ಹಾಕಿದ. ನಾವು ಹೆದರಿ ದೂರು ಕೊಡೋಣ ಅಂತ ಪೊಲೀಸರ ಹತ್ತಿರ ಹೋದರೆ ಅವರು ದೂರಿನಿಂದ ಏನೂ ಉಪಯೋಗ ಇಲ್ಲ, ಅವರು ಪ್ರಧಾನ ಮಂತ್ರಿಗಳಿಗೇ ಹತ್ತಿರದವರು; ನಮ್ಮ ಕೈಯಲ್ಲಿ ಏನೂ ಸಾಗೋಲ್ಲ ಅಂದುಬಿಟ್ಟರು- ಇದು ರೈತನೊಬ್ಬ ವಾಹಿನಿಯ ಕ್ಯಾಮರಾ ಮುಂದೆ ನೀಡಿದ ಹೇಳಿಕೆ. ಆತ ತನ್ನ ಸಂಕಟ ತೋಡಿಕೊಳ್ಳುವಾಗ ಆತನ ಹೆಂಡತಿಯೂ ಪಕ್ಕದಲ್ಲೇ ಮುಖದ ತುಂಬ ದಿಗಿಲು ಹೊತ್ತು ನಿಂತಿದ್ದಳು....

ಅಂತೂ ಪ್ರಸಕ್ತ ಆಳ್ವಿಕೆಯ ಸುಳ್ಳು, ತಟವಟಗಳನ್ನು ಹೀಗೆ ರಾಜಾರೋಷವಾಗಿ ಬಯಲಿಗೆಳೆಯುತ್ತ ಹೋದ ಎಬಿಪಿ ವಾಹಿನಿಯನ್ನು ತಮ್ಮ ಶತ್ರು ಎಂದು ಮೋದಿ ಸಾಮ್ರಾಜ್ಯ ಪರಿಗಣಿಸಿದ್ದು ಸಹಜವಾಗಿತ್ತು. ಪರಿಣಾಮವಾಗಿ ಆ ಚಾನೆಲ್ ಏನೇನು ಅನುಭವಿಸಬೇಕಾಗಿ ಬಂತು ಎಂಬುದು ಇಲ್ಲಿ ಪರಿಶೀಲನೆಗೆ ಯೋಗ್ಯವಾಗಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಧ್ಯಮಗಳ ನಂಟಿನ ಸ್ವರೂಪ ಅರಿಯಲೂ ಈ ಪ್ರಸಂಗ ಒಂದು ದಿಕ್ಸೂಚಿಯಾಗಿದೆ.

ಪ್ರಶ್ನೆ ಆ ಪಕ್ಷ, ಈ ಪಕ್ಷದ್ದಲ್ಲ; ಯಾವ ಪಕ್ಷದ ಸರಕಾರವೇ ಆದರೂ, ಒಟ್ಟು ಮಾಧ್ಯಮಗಳ ಬಾಲಬಡುಕತನವನ್ನು ಸಂಪಾದಿಸಲು ಏನೇನೆಲ್ಲ ಕಸರತ್ತು ಮಾಡುತ್ತವೆ ಎಂಬುದು ಭಾರತೀಯರಿಗೆ ಹೊಸದೇನಲ್ಲ. ಕಾಂಗ್ರೆಸಿಗಂತೂ ತುರ್ತುಪರಿಸ್ಥಿತಿಯಲ್ಲಿ ಬರ್ಬರವಾಗಿ ಜನತಂತ್ರದ ಕತ್ತು ಹಿಸುಕಿದ ಇತಿಹಾಸವೇ ಇದೆ. ಅಷ್ಟಿದ್ದರೂ, ಈ ವಿಷಯದಲ್ಲಿ ಮಾತ್ರ ಬಿಜೆಪಿಗೆ ಬಿಜೆಪಿಯೇ ಸಾಟಿ!... ಅಷ್ಟಕ್ಕೂ 2014ರಲ್ಲಿ ಮೋದಿಯವರನ್ನು ಪ್ರಧಾನಿ ಪಟ್ಟಕ್ಕೆ ತಂದು ಕೂರಿಸುವ ಸಲುವಾಗಿ ಆ ಪಕ್ಷ ಸಾಮಾಜಿಕ ಹಾಗೂ ಮತ್ತೆಲ್ಲ ಮಾಧ್ಯಮಗಳನ್ನು ಬಳಸಿಕೊಂಡ ಪರಿಯನ್ನು; ಹಾಗೆಯೇ 2014ರಿಂದೀಚೆಗೆ ಮೋದಿ ಹಾಗೂ ಹಿಂದುತ್ವದ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಸಾಮಾಜಿಕ ಮಾಧ್ಯಮಗಳ ದೊಡ್ಡ ಆಕ್ರಮಣಕಾರಿ ಸೈನ್ಯದ ಪರಾಕ್ರಮವನ್ನೂ, ದೇಶದ ಜನತೆ ಈಗಾಗಲೇ ಕಂಡು ದಂಗಾಗಿದ್ದಾರೆ.

ಇನ್ನು ನರೇಂದ್ರ ಮೋದಿಯವರು ಪ್ರಧಾನಿಯಾಗುವ ಮುಂಚಿನಿಂದಲೂ ಬಿಜೆಪಿ ಹಾಗೂ ಈಗಿನ ಸರಕಾರಗಳ ಏಕೈಕ ಶಕ್ತಿ ಕೇಂದ್ರ. ಸರಕಾರವೆಂಬ ಸೌರಮಂಡಲದಲ್ಲಿ ಮೋದಿ ಸೂರ್ಯನಾದರೆ, ಉಳಿದವರೆಲ್ಲ ಗ್ರಹಗಳು ಹಾಗೂ ಕ್ಷುದ್ರ ಗ್ರಹಗಳು ಮಾತ್ರ! ಹಿಂದೊಮ್ಮೆ ಹೇಗೆ 'ಇಂದಿರಾ ಈಸ್ ಇಂಡಿಯಾ' ಎಂಬ ಭಟ್ಟಂಗಿ ಸೊಲ್ಲು ಹೊರಟಿತ್ತೋ, ಅದೇ ಮಾದರಿಯಲ್ಲಿ ಈಗ ಮೋದಿ ಎಂದರೆ ಭಾರತ ಎಂಬ ಭಜನೆ ಚಾಲ್ತಿಯಲ್ಲಿದೆ. ವ್ಯತ್ಯಾಸವೆಂದರೆ, ಇಂದಿರಾ ಸರ್ವಾಧಿಕಾರಿಯಾದ ಕೂಡಲೇ ಇಡೀ ದೇಶ ಅವರ ವಿರುದ್ಧ ತಿರುಗಿ ಬಿತ್ತು. ಆದರೆ ಆ ವಿಷಯದಲ್ಲಿ ಮೋದಿ ಪುಣ್ಯವಂತ! ಜನಕ್ಕೆ ಅವರ ಏಕಚಕ್ರಾಧಿಪತ್ಯವೂ ಆಪ್ಯಾಯಮಾನವಾಗಿ ಕಾಣುತ್ತಿದೆ! ಈ ಸಾರ್ವತ್ರಿಕ ಭಜನೆಯಲ್ಲಿ, ಮಾಧ್ಯಮಗಳೂ ಸೇರಿಕೊಂಡು ತಾಳ ಹಾಕುತ್ತ ಕೂತಿದ್ದರಲ್ಲಿ ಅತಿಶಯವೇನೂ ಇಲ್ಲ. ಮೋದಿ ಹೆಸರು ಪ್ರಧಾನಿ ಹುದ್ದೆಗೆ ನಿಯುಕ್ತವಾದ ಗಳಿಗೆಯೇ ದೇಶದ ಬಹುತೇಕ ಮಾಧ್ಯಮಗಳಿಗೆ- ವಿಶೇಷವಾಗಿ ಟಿವಿ ಚಾನೆಲ್‌ಗಳಿಗೆ ಮೋದಿ ಕೀರ್ತನೆಯೇ ಪೂರ್ಣಾವಧಿ ಕಸುಬಾಯಿತು; ಮತ್ತು ಆ ಕೀರ್ತನೆ ಇನ್ನೂ ನಿಂತೂ ಇಲ್ಲ, ಮತ್ತು ಅದೇ ಅವರಿಗೆಲ್ಲ ಲಾಭದಾಯಕವೂ ಆಗಿ ಪರಿಣಮಿಸಿರುವುದರಿಂದ ಆ ಕೀರ್ತನೆ ಸದ್ಯಕ್ಕೆ ನಿಲ್ಲುವುದೂ ಇಲ್ಲ. ಮೋದಿ ಎಲ್ಲಿಯವರೆಗೆ ಜನರ ಕಣ್ಮಣಿಯಾಗಿರುವರೋ, ಅದುವರೆಗೆ ಮೋದಿ ಭಜನೆಯೇ ಚಾನೆಲ್‌ಗಳಿಗೆ ಜನಪ್ರಿಯತೆ- ಅಂದರೆ ಟಿಆರ್‌ಪಿ ಗಳಿಸುವ ರಹದಾರಿಯೂ ಆಗಿದೆ. ಇದು ಮಾಧ್ಯಮಗಳ ಸ್ವಯಂ ಶರಣಾಗತಿಯ ಅಥವಾ ಸ್ವಯಂ ದಾಸ್ಯದ ಮಗ್ಗಲು. ಆದರೆ ಇದಿಷ್ಟೇ ಅಲ್ಲ, ಮೋದಿ ಹಾಗೂ ಮಾಧ್ಯಮಗಳ ಸಂಬಂಧಕ್ಕೆ ಇನ್ನೂ ಹಲವು ಮಗ್ಗಲುಗಳಿವೆ. ಈ ಅಚ್ಛೇ ದಿನ್ ಭಜನೆಗೆ ಒಂದು ಶಿಸ್ತುಬದ್ಧ ಸ್ವರೂಪ ನೀಡಲು ಬಿಜೆಪಿಯಲ್ಲಿ, ಅತ್ಯುನ್ನತ ಮಟ್ಟದಲ್ಲಿ 200 ಜನರ ಮಾಧ್ಯಮ ನಿಯಂತ್ರಣಾ ಸಮಿತಿ ಅಥವಾ ಮಾಧ್ಯಮ ಕಾವಲು ಸಮಿತಿಯೊಂದು ಅಸ್ತಿತ್ವದಲ್ಲಿದೆ. ನೇರವಾಗಿ ವಾರ್ತಾ ಮಂತ್ರಿಗೆ ವರದಿ ಮಾಡುವ ಈ ಸಮಿತಿಯಲ್ಲಿ ಮೂರು ಹಂತದ ಕಾರ್ಯಕರ್ತರಿದ್ದಾರೆ. ಆ ಸಮಿತಿಯಲ್ಲಿ ಕೆಳ ಹಂತದ 150 ಮಂದಿಗೆ ಮಾಧ್ಯಮಗಳಲ್ಲಿ ಏನೇನು ಬರುತ್ತಿದೆ ನೋಡಿ ಗುರುತು ಮಾಡುವುದಷ್ಟೇ ಕೆಲಸ. ಇವರ ಮೇಲಿನ ಹಂತದ 25 ಮಂದಿ, ಈ ವರದಿಯನ್ನು ಸರಕಾರದ ಅವಗಾಹನೆಗೆ ತಕ್ಕಂತೆ ಪರಿಷ್ಕರಿಸುವರು. ಮಿಕ್ಕ 25 ಮಂದಿ- ಸಮಿತಿಯ ಅತ್ಯುನ್ನತ ದರ್ಜೆ ಸದಸ್ಯರು. ಇವರು ಮಾಧ್ಯಮಗಳ ಕಾರ್ಯವೈಖರಿಯನ್ನು ಟೀಕೆ ಟಿಪ್ಪಣಿ ಸಮೇತ ಪ್ರಸ್ತುತಪಡಿಸಬೇಕು. ಅವರ ಟಿಪ್ಪಣಿ ಅನುಸರಿಸಿ ಉಪ ನಿರ್ದೇಶಕರ ಹಂತದ ಮೂವರು ಅಧಿಕಾರಿಗಳು ವಾರ್ತಾ ಸಚಿವರಿಗೆ ವರದಿ ನೀಡುವರು. ಸಚಿವರು ಇದನ್ನು ಪ್ರಧಾನ ಮಂತ್ರಿ ಕಾರ್ಯಾಲಯದ ಗಮನಕ್ಕೆ ತರುವರು. ನಂತರ ಪ್ರಧಾನಿ ಕಾರ್ಯಾಲಯದಿಂದ ಸಂಬಂಧಪಟ್ಟ ಚಾನೆಲ್/ ಪತ್ರಿಕೆ ಸಂಪಾದಕರಿಗೆ ಅಗತ್ಯ ಹುಕುಂ ರವಾನೆಯಾಗುವುದು: ಪ್ರಸಾರದಲ್ಲಿ ಏನೇನು ಮಾರ್ಪಾಡು ಮಾಡಬೇಕು, ಏನು ತೋರಿಸಬೇಕು, ತೋರಿಸಬಾರದು ಇತ್ಯಾದಿ. ಮತ್ತೂ ಮುಂದಕ್ಕೆ ಸಂಪಾದಕರನ್ನು ದಾಟಿ ನೇರ ಮಾಲಕರಿಗೇ ನಿರ್ದೇಶನ. ಇದು ಆ ಸಮಿತಿಯ ಕಾರ್ಯಸ್ವರೂಪ.

ಈಗ ಯಾವುದಾದರೂ ಚಾನೆಲ್ ಸರಕಾರದ ಹುಕುಂ ಪಾಲಿಸಲಿಲ್ಲ ಅಂದುಕೊಳ್ಳಿ, ಆಗ ಮೊದಲ ಹಂತದಲ್ಲಿ ಬಿಜೆಪಿ, ಆರೆಸ್ಸೆಸ್ ಹೀಗೆ ಇಡೀ ಸಂಘ ಪರಿವಾರದ ವಕ್ತಾರರು ಸಾರಾಸಗಟಾಗಿ ಆ ಚಾನೆಲ್ ಬಹಿಷ್ಕರಿಸುವರು. ಅಂದರೆ ವಾಹಿನಿಯ ಚರ್ಚಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಿರುವುದು, ಬೇರೆ ಯಾವುದೇ ಕಾರ್ಯಕ್ರಮಗಳಿಗೆ ಹೋಗದಿರುವುದು... ಹೀಗೆ. ಕರ್ನಾಟಕದಲ್ಲಿ ಸುದ್ದಿ ಟಿವಿಯನ್ನೇ ಸ್ಥಳೀಯ ಬಿಜೆಪಿ ನಾಯಕರು ತಿಂಗಳುಗಟ್ಟಳೆ ಬಹಿಷ್ಕರಿಸಿದ ಉದಾಹರಣೆ ಕಣ್ಣ ಮುಂದೆಯೇ ಇದೆ.

ಅಷ್ಟಾಯಿತು. ಆಗಲೂ ಚಾನೆಲ್ ಬಗ್ಗಲಿಲ್ಲ.ಮುಂದೇನು?

ಮುಂದೇನು ಎಂಬುದಕ್ಕೆ ಎಬಿಪಿ ಚಾನೆಲ್ ಅನುಭವವೇ ಸಮರ್ಥ ಉದಾಹರಣೆ.

ಆಗಲೇ ಉಲ್ಲೇಖಿಸಿದ ಎಬಿಪಿ ಚಾನೆಲ್ಲಿನ ಮಾಸ್ಟರ್ ಸ್ಟ್ರೋಕ್ ಕಾರ್ಯಕ್ರಮದ ರೂವಾರಿ ಪುಣ್ಯ ಪ್ರಸೂನ್ ಬಾಜಪೈ ಎಂಬ ಹಿರಿಯ ಪತ್ರಕರ್ತ. ಈಗ ಚಾನೆಲ್‌ನ ಮಾಲಕರೂ, ಪ್ರಧಾನ ಸಂಪಾದಕರೂ ಆದ ಅವೀಕ್ ಸರ್ಕಾರ್, ಪುಣ್ಯ ಪ್ರಸೂನ್ ಬಾಜಪೈಯವರನ್ನು ಕರೆದು ಕೇಳಿದರು:

ಪ್ರಧಾನಿ ಮೋದಿ ಅವರ ಹೆಸರು ಉಲ್ಲೇಖಿಸದೆ ನೀವು ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲವೇ?

ಅದು ಹೇಗೆ? ಸರಕಾರದ ಪ್ರತಿಯೊಂದು ಯೋಜನೆ ಯನ್ನೂ ಸ್ವತಃ ಪ್ರಧಾನಿಯೇ ಪ್ರಕಟಿಸುತ್ತಾರೆ. ಪ್ರತಿ ಇಲಾಖೆಯ ಕೆಲಸದಲ್ಲಿ ಮಧ್ಯಪ್ರವೇಶಿಸುತ್ತಾರೆ. ಇನ್ನು ಯಾವುದೇ ಯೋಜನೆ ಅಥವಾ ನೀತಿಯ ಬಗ್ಗೆ ಮಾತಾಡಿದಾಗಲೆಲ್ಲ ಪ್ರತಿಯೊಬ್ಬ ಮಂತ್ರಿಯೂ ಪ್ರಧಾನಿ ಯವರ ಹೆಸರನ್ನೇ ಹೇಳುತ್ತಾರೆ. ಅಂದ ಮೇಲೆ ಪ್ರಧಾನಿ ಮೋದಿಯವರ ಹೆಸರೆತ್ತದಿರಲು ಹೇಗೆ ಸಾಧ್ಯ?

ಅಧಿಕಾರಕ್ಕೇರಿದ ಈ ನಾಲ್ಕು ವರ್ಷಗಳಲ್ಲಿ ಈ ಸರಕಾರ ಒಟ್ಟು 106 ಯೋಜನೆಗಳನ್ನು ಪ್ರಕಟಿಸಿದೆ. ಮತ್ತು ಈ 106 ಯೋಜನೆಗಳ ಪ್ರಕಟನೆ ಮಾಡಿದ್ದು ಖುದ್ದು ಮೋದೀಜಿ. ಯೋಜನೆಗಳ ಬಗ್ಗೆ ಪ್ರಚಾರ ಮಾಡುವವರು ಆಯಾ ಇಲಾಖೆಗಳ ಮಂತ್ರಿ- ಅಧಿಕಾರಿಗಳೇ ಆದರೂ, ಆ ಪ್ರಚಾರದ ಹೃದಯವೇ ಮೋದೀಜಿ. ಅಂದರೆ ಯೋಜನೆಗಳ ಪ್ರಚಾರ ಎನ್ನುವುದಕ್ಕಿಂತ ಹೆಚ್ಚಾಗಿ ಮೋದಿ ಎಂಬ ದಂಡನಾಯಕನ ಪರ ಪ್ರಚಾರವದು. ಹಾಗಾಗಿ ಸರಕಾರ ಎಂಬ ಶಬ್ದ ಉಚ್ಚರಿಸಿದ ಕೂಡಲೇ ಅದೇ ಸೊಲ್ಲಿನಲ್ಲಿ ಮೋದಿ ಹೆಸರೂ ಹೊರಡಲೇಬೇಕು. ಇನ್ನು ಮೋದಿ ಎಂದು ಉಚ್ಚರಿಸದೆ, ಸರಕಾರದ ಸುದ್ದಿ ಹೇಳುವುದು ಹೇಗೆ? ಸ್ವತಃ ಚಾನೆಲ್‌ನ ವರದಿಗಾರರು ಹಲ್ಲು ಕಚ್ಚಿಕೊಂಡು ಸುಮ್ಮನಿದ್ದರು ಎಂದೇ ಭಾವಿಸೋಣ. ಆದರೆ ಮೋದಿ ಯೋಜನೆಗಳ ಸೋಲು ಗೆಲುವಿನ ಫಲಾನುಭವಿಗಳಂತೂ, ರೈತನೋ, ಬಸುರಿಯೋ, ನಿರುದ್ಯೋಗಿಯೋ, ವ್ಯಾಪಾರಿಯೋ, ಯಾರೇ ಆದರೂ ಮೋದಿ ಹೆಸರು ತೆಗೆಯದೆ ಮಾತನಾಡಿಯಾರೇ?... ಇದೇ ಧಾಟಿಯಲ್ಲಿ ಸುದೀರ್ಘ ಚರ್ಚೆ ನಡೆದು ಕಡೆಗೆ, ಎಷ್ಟೇ ಕಷ್ಟವಾದರೂ, ಮೋದಿ ಹೆಸರು ಉಲ್ಲೇಖಿಸದೆಯೇ ಮಾಸ್ಟರ್ ಸ್ಟ್ರೋಕ್ ನಿರ್ವಹಿಸಬೇಕೆಂದು ತೀರ್ಮಾನವಾಯಿತು. ಆಯಿತಾ? ಅದು ಇಲ್ಲಿಗೂ ನಿಲ್ಲಲಿಲ್ಲ. ಇನ್ನು ನಾಲ್ಕೇ ದಿನಗಳಲ್ಲಿ ಮೋದಿಯವರ ಹೆಸರಿರಲಿ, ಅವರ ಫೋಟೊ/ ವೀಡಿಯೊ ಕೂಡ ತೋರಿಸುವಂತಿಲ್ಲ ಎಂಬ ನಿರ್ದೇಶನ ಬಂತು!

ಅದಂತೂ ಶತಾಯ ಗತಾಯ ಸಾಧ್ಯವೇ ಇಲ್ಲ! ಹೇಳಿ ಕೇಳಿ ಇದು ಪತ್ರಿಕೆಯೂ ಅಲ್ಲ, ದೃಶ್ಯ ವಾಹಿನಿ. ಸರಕಾರದ ಯಾವ ಸುದ್ದಿ ಬಿತ್ತರವಾದರೂ ಮೋದಿಯವರ ಫೋಟೊ/ ವೀಡಿಯೊ ಬರಲೇಬೇಕಲ್ಲ?... ಒಂದೇ ಸಾಧ್ಯತೆಯೆಂದರೆ, ಸರಕಾರದ ಸುದ್ದಿಯನ್ನೇ ತೋರಿಸಬಾರದು; ಆಗ ಮಾತ್ರ ಮೋದಿಯವರ ಪ್ರಸ್ತಾಪವಿಲ್ಲದೆಯೇ ಕಾರ್ಯಕ್ರಮ ಮುಗಿಸಬಹುದು. ಅಂದರೆ ಆಳುವವರ ಉದ್ದೇಶ ಇದೇನಾ? ಬಂದರೆ ಭಜನೆ ಬರಲಿ, ಇಲ್ಲವಾದರೆ ಏನೂ ಬೇಡ?.... ಹೇಗಿದ್ದರೂ ದೇಶದ ಬಹುತೇಕ ಮಾಧ್ಯಮಗಳು ಮೋದಿ ಭಜನಾ ಮಂಡಳಿಗಳಾಗಿಯೇ ಮಾರ್ಪಾಡಾಗಿವೆ. ಹೀಗಿರುವಾಗ ಎಬಿಪಿಯಂಥ ಚಾನೆಲ್ ಸರಕಾರದ, ಅಂದರೆ ಮೋದಿ ವಿರುದ್ಧ ತಿರುಗಿ ಬೀಳುವುದೇ? ತಿರುಗಿ ಬೀಳುವುದು ಹೋಗಲಿ, ಮೋದಿ ಸುಳ್ಳುಗಳನ್ನು ಬಯಲಿಗೆಳೆಯುವ ಕಾರ್ಯಕ್ರಮಗಳಿಗೇ ಹೆಚ್ಚು ಹೆಚ್ಚು ಟಿಆರ್‌ಪಿ ಬರತೊಡಗಿದರೆ?... ಉದಾಹರಣೆಗೆ ಜಾರ್ಖಂಡ್‌ನಲ್ಲಿ ರೈತರಿಗೆ ಅದಾನಿ ಸಂಸ್ಥೆ ಧಮಕಿ ಹಾಕಿದ ವರದಿಯಂತೂ, ಟಿಆರ್‌ಪಿ ಲೆಕ್ಕದಲ್ಲಿ ಒಮ್ಮಿಂದೊಮ್ಮೆಲೇ ಮೇಲೇರಿತ್ತು. ಅಂದರೆ ಮಾಸ್ಟರ್ ಸ್ಟ್ರೋಕ್ ಕಾರ್ಯಕ್ರಮಕ್ಕೆ ಸಾಧಾರಣವಾಗಿ 12ರಷ್ಟಿದ್ದ ಟಿಆರ್‌ಪಿ, ಆ ವರದಿ ಬಿತ್ತರವಾದಾಗ 17ಕ್ಕೇರಿತ್ತು! ಇದರರ್ಥ ಸ್ಪಷ್ಟವಾಗಿತ್ತು. ಸಂದೇಶ ಅಪಾಯಕಾರಿಯಾಗಿತ್ತು. ಮೊದಲೆಲ್ಲ ಮೋದಿ ಭಜನೆಗೆ ಸಿಕ್ಕುತ್ತಿದ್ದ ಟಿಆರ್‌ಪಿ, ಈಗ ಮೋದಿ ಭಂಜನೆಗೆ ಸಿಗುತ್ತಿದೆ ಎಂದಾಯಿತು. ಜೊತೆಗೆ ಟಿಆರ್‌ಪಿಯೇ ಜಾಹೀರಾತು ವರಮಾನದ ಅಡಿಗಲ್ಲಾದ್ದರಿಂದ, ಮೋದಿಯವರನ್ನು ಬಯಲು ಮಾಡಿದವರಿಗೆ ವೀಕ್ಷಕರೂ ಹೆಚ್ಚು, ಆದಾಯವೂ ಹೆಚ್ಚು ಎಂದಂತಾಯಿತು. ಇದೇ ಪ್ರವೃತ್ತಿ ಮುಂದಿನ ಚುನಾವಣೆಗಳಲ್ಲೂ ಸಾರ್ವತ್ರಿಕವಾದರೆ ಗತಿಯೇನು?!... ಸರಕಾರ ಒಮ್ಮಿಂದೊಮ್ಮೆಲೇ ಕ್ಷಿಪ್ರ ಕಾರ್ಯಾಚರಣೆಗೆ ಮುಂದಾಯಿತು.

ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಸರಕಾರದ ಮುಖಂಡರು ಪತ್ರಕರ್ತರ ಮುಂದೆ ಎಬಿಪಿ ವಾಹಿನಿಯನ್ನು ಸುಮ್ಮನೆ ಬಿಡುವುದಿಲ್ಲ, ಪಾಠ ಕಲಿಸುತ್ತೇವೆ ಎಂದು ಗುಡುಗಿದರು. ಸ್ವತಃ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಿಜೆಪಿಯ ರಾಂಚಿ, ಜೈಪುರ ಮತ್ತು ಪಾಟ್ನಾ ಐಟಿ ವಿಭಾಗದವರಿಗೆ ಪುಣ್ಯ ಪ್ರಸೂನ್‌ನನ್ನು ಸುಮ್ಮನೆ ಬಿಡಬೇಡಿ ಎಂಬ ಆದೇಶ ಕೊಟ್ಟರು. ಅಂದರೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸೂನ್ ವಿರುದ್ಧ ಸತತ ದಾಳಿಗೆ ನೇರ ಆದೇಶ.

ವಿರೋಧಿ ನಾಯಕ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿ ಮಾಧ್ಯಮಗಳನ್ನು ನಿಯಂತ್ರಿಸಬಯಸುವ ಕೇಂದ್ರದ ಹುನ್ನಾರದ ವಿರುದ್ಧ ದನಿಯೆತ್ತಿದಾಗ, ಸರಕಾರದ ವಕ್ತಾರರು ಮಾಸ್ಟರ್ ಸ್ಟ್ರೋಕ್‌ಗೆ ಟಿಆರ್‌ಪಿ ಇಲ್ಲವಾದ್ದರಿಂದ ವಾಹಿನಿಯವರೇ ಆ ಕಾರ್ಯಕ್ರಮ ನಿಲ್ಲಿಸುವ ಯೋಚನೆಯಲ್ಲಿದ್ದಾರೆ ಎಂಬ ಹಸಿ ಸುಳ್ಳು ಹೇಳಿದರು. ಎಬಿಪಿ ವಾಹಿನಿಯ ವರದಿಗಳು ಉದ್ದೇಶಪೂರ್ವಕ ಸುಳ್ಳಿನ ಕಂತೆ ಎಂದು ಪದೇ ಪದೇ ಸಾರುತ್ತ ಬಂದರು. ವಾರ್ತಾ ಸಚಿವರೂ ಸೇರಿದಂತೆ ಮೂವರು ಮಂತ್ರಿಗಳು ವಾಹಿನಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಟ್ವೀಟ್ ಮಾಡಿದರು.... ಇಷ್ಟೆಲ್ಲ ನಡೆಯುವಾಗ, ವಸ್ತುಸ್ಥಿತಿ ಅಧ್ಯಯನಕ್ಕೆಂದು ಚಾನೆಲ್ ಆ ಹಳ್ಳಿಗೆ ಮತ್ತೊಮ್ಮೆ ತನ್ನ ವರದಿಗಾರ ಗ್ಯಾನೇಂದ್ರ ತಿವಾರಿಯನ್ನು ಕಳಿಸಿದರೆ, ಅಲ್ಲಿನ ಸನ್ನಿವೇಶವೇ ಬದಲಾಗಿಹೋಗಿತ್ತು. ಹಳ್ಳಿಯ ತುಂಬ ಪೊಲೀಸರು ಮತ್ತಿತರ ಅಧಿಕಾರಿಗಳು ತುಂಬಿಹೋಗಿದ್ದರು. ಹೇಗಾದರೂ ಸರಿ, ರೈತ ಮಹಿಳೆ ಚಂದ್ರಮಣಿ ಕೌಶಿಕ್ ಎಬಿಪಿ ವರದಿಗಾರನ ಕೈಗೆ ಸಿಗದಂತೆ ನೋಡಿಕೊಳ್ಳುವುದೇ ಅವರ ಧ್ಯೇಯ. ಆದರೆ ಆ ಅಧಿಕಾರಿಗಳೆಲ್ಲ ಇಡೀ ದಿನ ಕಾವಲು ಕಾಯದೆ ಹಗಲು ಹೊತ್ತಿನಲ್ಲೇ ಜಾಗ ಖಾಲಿ ಮಾಡಿಕೊಂಡು ಹೋಗಿಬಿಟ್ಟಿದ್ದರಿಂದ ಆ ಮಹಿಳೆಯ ಜೊತೆಗೆ ಸ್ತ್ರೀಶಕ್ತಿ ಸಂಘಟನೆಯ 12 ಮಂದಿ ಸಹಚರರೂ ವರದಿಗಾರನ ಕೈಗೆ ಸಿಕ್ಕಿಬಿಟ್ಟರು, ತಮ್ಮ ನೈಜ ಬವಣೆಯನ್ನೂ ಬಿಚ್ಚಿಟ್ಟರು. ವರಮಾನ ದುಪ್ಪಟ್ಟಾಗುವುದಿರಲಿ, ಬರಬರುತ್ತ ಹೇಗೆ ತಮ್ಮ ಸ್ಥಿತಿ ಇನ್ನಷ್ಟು ಮತ್ತಷ್ಟು ದುರ್ಭರವಾಗುತ್ತ ಹೋಗಿದೆ ಎಂಬುದನ್ನು ವಿವರವಾಗಿ ಬಿಡಿಸಿಟ್ಟರು.

ಈ ನೂತನ ವರದಿ ಜುಲೈ 9ರಂದು ಪ್ರಸಾರವಾದಾಗ ಸರಕಾರದ ಕಡೆಯಿಂದ ಶುದ್ಧಾಂಗ ಮೌನ! ಆಗಲೇ ಬಾಜಪೈಯವರಿಗೆ ಏನೋ ಗಂಭೀರವಾದದ್ದು ಕಾದಿದೆ ಎಂಬ ಅನುಮಾನ ಹೊಗೆಯಾಡತೊಡಗಿತು. ಅದಕ್ಕೆ ತಕ್ಕಂತೆ ಮಾಧ್ಯಮ ಕಾವಲು ಸಮಿತಿಯ ಸದಸ್ಯರೇ ಒಬ್ಬರು ಇವರಿಗೆ ಫೋನ್ ಮಾಡಿ ಏನು ಬೇಕಾದರೂ ಆಗಬಹುದು, ಜಾಗ್ರತೆಯಾಗಿರಿ ಅನ್ನುವ ಎಚ್ಚರಿಕೆ ಮಾತು ಹೇಳಿದರು.

ಆಗ ಚಾನೆಲ್‌ಗೆ ಮೊದಲು ಎದುರಾದ ತೊಂದರೆ, ತಾಂತ್ರಿಕ ಸಮಸ್ಯೆ ಸ್ವರೂಪದ್ದು. ಮಾರನೇ ದಿನವೇ ಮಾಸ್ಟರ್ ಸ್ಟ್ರೋಕ್ ಪ್ರಸಾರದ ಅವಧಿಯಲ್ಲಿ ಉಪಗ್ರಹ ಸಂಪರ್ಕ ಕಡಿದು ಕಾಡಿಸತೊಡಗಿತು. ಒಂದು ಗಂಟೆ ಅವಧಿಯುದ್ದಕ್ಕೂ ಒಂದೆರಡು ಬಾರಿಯಲ್ಲ, ಮೂವತ್ತರಿಂದ ನಲವತ್ತು ಬಾರಿ ಅಡಚಣೆ ಎದುರಾಯಿತು. ಮತ್ತು ಆ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಆ ತೊಂದರೆಯೂ ಮಾಯವಾಯಿತು! ಸಮಸ್ಯೆ ಪತ್ತೆ ಹಚ್ಚಿ ಸರಿಪಡಿಸಲು ಚಾನೆಲ್ ತಂತ್ರಜ್ಞರು ಎಷ್ಟು ಯತ್ನಿಸಿದರೂ ಉಪಯೋಗವಾಗಲಿಲ್ಲ. ಕಡೆಗೆ ಚಾನೆಲ್ ಮುಖ್ಯಸ್ಥರು, ಟ್ವಿಟರ್ ಮುಖಾಂತರ ವೀಕ್ಷಕರಿಗೆ ಈ ಉಪಗ್ರಹ ತೊಂದರೆಯ ಬಗ್ಗೆ ವಿವರಣೆ ಕೊಟ್ಟರು. ಮುಂದಕ್ಕೆ ಪ್ರತಿ ದಿನ ಇದೇ ತೊಂದರೆ ಮರುಕಳಿಸತೊಡಗಿದಂತೆ ಮೂರನೇ ದಿನ ಈ ಸಮಸ್ಯೆಯನ್ನು ನೇರ ವೀಕ್ಷಕರ ಗಮನಕ್ಕೇ ತರಬೇಕೆಂದು ತೀರ್ಮಾನವಾಯಿತು. ಅದರಂತೆ ಜುಲೈ 19ರ ಬೆಳಗ್ಗೆಯಿಂದಲೇ ಚಾನೆಲ್ ಸಂದೇಶ ಬಿತ್ತರಿಸತೊಡಗಿತು: ಕಳೆದ ಕೆಲವು ದಿನಗಳಿಂದ ನಮ್ಮ ಮಾಸ್ಟರ್ ಸ್ಟ್ರೋಕ್ ಕಾರ್ಯಕ್ರಮದ ಸಮಯದಲ್ಲಿ ಉಪಗ್ರಹ ಪ್ರಸಾರದಲ್ಲಿ ಪದೇ ಪದೇ ತಾಂತ್ರಿಕ ಅಡಚಣೆ ಎದುರಾಗುತ್ತಿದೆ. ನಾವು ಶೀಘ್ರದಲ್ಲೇ ಆ ಸಮಸ್�

Writer - ಎನ್.ಎಸ್. ಶಂಕರ್

contributor

Editor - ಎನ್.ಎಸ್. ಶಂಕರ್

contributor

Similar News

ಗಾಂಧೀಜಿ