ಬಾಬರಿ ಮಸೀದಿ ಅಳಿದ ಮೇಲೆ

Update: 2018-12-18 06:32 GMT

ಜಿ. ರಾಜಶೇಖರ

ಸಾಹಿತ್ಯ ವಿಮರ್ಶಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಹಿರಿಯ ಚಿಂತಕ ಜಿ. ರಾಜಶೇಖರ್, ಹಿಂಸಾರಾಜಕಾರಣದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುವವರು. ಹಿಂಸೆಯ ವಿರುದ್ಧ ಬೀದಿಗಿಳಿದು ಹೋರಾಡುತ್ತಿರುವವರು. ಪ್ರಭುತ್ವ ಸೃಷ್ಟಿಸುತ್ತಿರುವ ರಾಜಕೀಯ ಹಿಂಸೆಯನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತಾ ಅದಕ್ಕೆ ಪ್ರತಿಕ್ರಿಯಿಸುತ್ತಿರುವವರು. ಪಿ. ಲಂಕೇಶ್ ಅವರ ಪತ್ರಿಕೆಯಲ್ಲಿ ಲಂಕೇಶರ ಮಹತ್ವದ ಬರಹಗಾರರಾಗಿ ಗುರುತಿಸಿಕೊಂಡಿದ್ದ ರಾಜಶೇಖರ್ ಅವರ ಬರಹಗಳ ಸಂಕಲನ ‘ಬಹುವಚನ ಭಾರತ’ ಇತ್ತೀಚಿನ ಮಹತ್ವದ ಕೃತಿಯಾಗಿದೆ.

ಶಿವರಾಮ ಕಾರಂತರನ್ನು ಕುರಿತ ಈ ಬರಹದ ಶೀರ್ಷಿಕೆ ನೋಡಿ ಓದುಗರು ಆಶ್ಚರ್ಯ ಪಡಬಹುದು. ಇತ್ತೀಚೆಗೆ ಯಾವ ವಿಷಯದ ಬಗ್ಗೆ ಮಾತು ಪ್ರಾರಂಭಿಸಿದರೂ ಬಾಬರಿ ಮಸೀದಿ ಧ್ವಂಸ, ಕೋಮುವಾದ ಇತ್ಯಾದಿಗಳನ್ನು ಎಳೆದುತರುವವರ ‘ಪಾಲಿಟಿಕಲಿ ಕರೆಕ್ಟ್ ಹಠ-ಒತ್ತಾಯ ಇದು’ ಎಂದು ಸಹ ಕೆಲವರು ಮೂಗು ಮುರಿಯಬಹುದು. 1960ರಲ್ಲಿ ಪ್ರಕಟವಾದ ‘ಅಳಿದ ಮೇಲೆ’ ಶಿವರಾಮ ಕಾರಂತರ ಮುಖ್ಯ ಕಾದಂಬರಿಗಳಲ್ಲಿ ಒಂದು. ಬಾಬರಿ ಮಸೀದಿ ಧ್ವಂಸಗೊಂಡದ್ದು 1992ರ ಡಿಸೆಂಬರ್ 6ರಂದು. ಒಂದು ಕಾದಂಬರಿ; ಇನ್ನೊಂದು ಚಾರಿತ್ರಿಕ ಘಟನೆ. ಕಾಲಮಾನದಲ್ಲಿ ಸಹ ಅವೆರಡರ ನಡುವೆ ಸಾಕಷ್ಟು ಅಂತರವಿದೆ. ಕಾರಂತರ ಕಾದಂಬರಿ ಮತ್ತು ಬಾಬರಿ ಮಸೀದಿ ಧ್ವಂಸಗಳನ್ನು ಒಟ್ಟಿಗೆ ತರುವುದು ನಾಟಕಕಾರ ಗಿರೀಶ್ ಕಾರ್ನಾಡರ ಅಪರೂಪದ ಒಂದು ಕತೆ. ಆ ಕತೆಯ ಶೀರ್ಷಿಕೆಯೂ ‘ಅಳಿದ ಮೇಲೆ’. ಕಾರಂತರ ಕಾದಂಬರಿಯಲ್ಲಿ ಸಂಭವಿಸುವ ಕೆಲವು ವಿದ್ಯಮಾನಗಳ ಹಿನ್ನೆಲೆಯಲ್ಲಿ ಬಾಬರಿ ಮಸೀದಿ ಧ್ವಂಸ ಮತ್ತು ಅದರಿಂದ ಒಂದು ಮುಸ್ಲಿಮ್ ಕುಟುಂಬ ಅನುಭವಿಸಿದ ದುಃಖ ದುಮ್ಮಾನಗಳನ್ನು ಗಿರೀಶರ ಕತೆ ನಿರೂಪಿಸುತ್ತದೆ. ‘ಕನ್ನಡ ಪ್ರಭ’ ಪತ್ರಿಕೆಯ 1998ರ ದೀಪಾವಳಿ ಸಂಚಿಕೆಯಲ್ಲಿ ಪ್ರಕಟವಾದ ಕತೆ, ನಂತರ ಗಿರೀಶರ ‘ಆಗೊಮ್ಮೆ ಈಗೊಮ್ಮೆ’ ಮನೋಹರ ಗ್ರಂಥಮಾಲಾ, ಧಾರವಾಡ, 2008 ಸಂಕಲನದಲ್ಲಿ ಮರುಮುದ್ರಣಗೊಂಡಿದೆ. ನಿಸ್ಸಂದೇಹವಾಗಿ ಈ ಕತೆ, ಶ್ರೇಷ್ಠ ಲೇಖಕನೊಬ್ಬ ತನಗಿಂತ ಹಿರಿಯರಾದ ಇನ್ನೊಬ್ಬ ಶ್ರೇಷ್ಠ ಲೇಖಕನಿಗೆ ಸಲ್ಲಿಸಿದ ಗೌರವವಾಗಿದೆ. ಕಾರಂತರು ತೀರಿಕೊಂಡದ್ದು 1997 ಡಿಸೆಂಬರ್ 9ರಂದು; ಅಂದರೆ ಗಿರೀಶರ ಕತೆ ಪ್ರಕಟವಾಗುವುದಕ್ಕೆ ಸರಿಸುಮಾರು ಒಂದು ವರ್ಷದ ಮೊದಲು. ಹಾಗಾಗಿ ಈ ಕತೆಯನ್ನು ಕಾರಂತರಿಗೆ ಗಿರೀಶರ ಶ್ರದ್ಧಾಂಜಲಿ ಎಂದೂ ನಾವು ಓದಬಹುದಾಗಿದೆ. ಈ ವಿಶಿಷ್ಟತೆಯ ಜೊತೆ ಕತೆಯಲ್ಲಿ ಉದ್ದೇಶ ಪೂರ್ವಕವಾಗಿಯೋ, ಹಾಗಲ್ಲದೆಯೋ ಒಂದು ವ್ಯಂಗ್ಯದ ಎಳೆ ಕೂಡ ಸೇರಿಕೊಂಡಿದೆ.


 ಶಿವರಾಮ ಕಾರಂತರು ದೇಶದ ದಿನನಿತ್ಯದ ರಾಜಕೀಯದಲ್ಲಿ ಎಂದೂ ಸಕ್ರಿಯವಾಗಿ ತೊಡಗಿ ಕೊಂಡವರಲ್ಲ. ಆದರೆ ಬಾಬರಿ ಮಸೀದಿ ಧ್ವಂಸಕ್ಕೆ ಮೊದಲಿನಿಂದ, ಯಾಕೆ ತುರ್ತುಪರಿಸ್ಥಿತಿಯ ಕಾಲದಿಂದಲೂ ಕಾರಂತರಿಗೆ ಬಿಜೆಪಿ ಧೋರಣೆಗಳ ಕುರಿತು ತುಸು ಒಲವಿತ್ತು. ‘ಬಾಬರಿ ಮಸೀದಿ ಕೂಡ ಒಂದು ಮಂದಿರವೇ ಆಗಿರುವುದರಿಂದ ಅದನ್ನು ಧ್ವಂಸ ಗೊಳಿಸಿದ್ದು ಒಂದು ಪಾಪಕೃತ್ಯ’ ಎಂಬುದು ಗಿರೀಶ್‌ರ ಕತೆಯ ಧೋರಣೆ. ಹಾಗೆ ನೋಡಿದರೆ ಕಾರಂತರ ವೈಯಕ್ತಿಕ ರಾಜಕೀಯ ನಂಬಿಕೆ ಏನೇ ಇರಲಿ, ಅವರ ಕಾದಂಬರಿ ‘ಅಳಿದ ಮೇಲೆ’ ಕೂಡ, ಅದೇ ಧೋರಣೆ ಯನ್ನು ಮೈಗೂಡಿಸಿಕೊಂಡಿರುವ ಕೃತಿ. ಬಾಬರಿ ಮಸೀದಿ ಧ್ವಂಸ ಒಂದು ಮುಖ್ಯ ಘಟನೆಯಾಗಿರುವ ತಮ್ಮ ಕತೆಗೆ ಗಿರೀಶರು ಕಾರಂತರ ಕಾದಂಬರಿಯನ್ನು ಹಿನ್ನೆಲೆಯಾಗಿಸಿಕೊಂಡದ್ದು ಸಹ ಆ ಕಾರಣದಿಂದಲೇ. ಕಾರಂತರ ಪ್ರತಿಭೆಯ ಬಗ್ಗೆ ಗೌರವ ಮತ್ತು ಬಾಬರಿ ಮಸೀದಿ ಧ್ವಂಸ ಕುರಿತು ವಿಷಾದ - ಇವೆರಡೂ ಒಟ್ಟಾಗಿ ಗಿರೀಶರ ಕತೆಯ ವ್ಯಂಗ್ಯಕ್ಕೆ ಕಾರಣವಾಗುತ್ತದೆ.

‘‘ಕರಸೇವಕರ ಈ ಸಂಘಟಿತ ದಾಳಿಗೆ ಸ್ಥಳದಲ್ಲಿದ್ದ ಹೆಚ್ಚಿನ ಪೊಲೀಸರು, ಅರೆಸೈನಿಕ ಪಡೆಗಳು ಮತ್ತು ಕೆಲವು ಸ್ಥಳೀಯ ಹಿಂದೂಗಳು ಮೊದಲ ಬಾರಿಗೆ ನೆರವು ಕೊಟ್ಟರು..... ಕರಸೇವಕರು 75 ವರ್ಷ ಪ್ರಾಯದ ಜಮೀನ್ದಾರ ತಾಹಿರ್ ಹುಸೇನ್ ಅವರ ಮನೆಗೆ ಬೆಂಕಿಕೊಟ್ಟರು. ಮನೆಯ ಯಜಮಾನನನ್ನು ಮನೆ ಹೆಬ್ಬಾಗಿಲಿನಲ್ಲೇ ಸುಟ್ಟುಕೊಂದರು. ತಾಹಿರ್ ಹುಸೇನ್ ಅವರ ಪೂರ್ವಜರು ಸುಮಾರು 300 ವರ್ಷಗಳಿಂದ ಅಯೋಧ್ಯೆಯಲ್ಲಿ ವಾಸಿಸಿಕೊಂಡಿದ್ದವರು. ಆದರೆ ಈಗ ತಾಹಿರ್ ಹುಸೇನ್‌ರದ್ದು ಎಂದು ಹೇಳಬಹುದಾದ ಕೆಲವು ಎಲುಬುಗಳು ಮಾತ್ರ ಉಳಿದಿದ್ದವು.

 ಕಾರಂತರ ‘ಅಳಿದ ಮೇಲೆ’ ಕಾದಂಬರಿಯ ಕಥಾನಕ ಮೈತಳೆಯುವುದು ಉತ್ತರ ಕನ್ನಡ ಜಿಲ್ಲೆಯ ಒಂದು ಹಳ್ಳಿ ಮತ್ತು ಮುಂಬೈ ಶಹರಗಳಲ್ಲಿ. ಕಾದಂಬರಿಯ ಪ್ರಧಾನ ಪಾತ್ರ ಯಶವಂತ ಹುಟ್ಟಿ ಬೆಳೆದು ದೊಡ್ಡವನಾದದ್ದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಒಂದು ಹಳ್ಳಿಯಲ್ಲಿ. ಅವನು ಮದುವೆಯಾಗಿ ಕೈ ಹಿಡಿದ ಹೆಣ್ಣು ಅದೇ ಜಿಲ್ಲೆಯವಳು. ಯಶವಂತ ತನ್ನ ವೃತ್ತಿ ಜೀವನ ಆರಂಭಿಸಿದ್ದು ಕೂಡ ಅಲ್ಲಿಯೇ. ಕೈಹಿಡಿದ ಪತ್ನಿಗೆ ಯಶವಂತನ ಜೊತೆ ಹೊಂದಾಣಿಕೆ ಆಗಲಿಲ್ಲ; ಪರಸ್ಪರ ಪ್ರೀತಿಯಂತೂ ದೂರವೇ ಉಳಿಯಿತು. ದುರಾಸೆಯ ಸ್ವಭಾವದ ಆ ಹೆಂಗಸಿಗೆ ಯಶವಂತನ ನಿರ್ಲಿಪ್ತತೆ ಅವ್ಯವಹಾರ ಎಂದೇ ತೋರುತ್ತದೆ. ಅದಕ್ಕೆ ಸರಿಯಾಗಿ ತನ್ನ ವ್ಯವಹಾರದಲ್ಲೂ ನಷ್ಟ ಅನುಭವಿಸಿ, ಯಶವಂತ ಪತ್ನಿ, ಊರು, ಮನೆಗಳನ್ನು ತೊರೆದು, ದೂರದ ಮುಂಬೈಯಲ್ಲಿ ಅಜ್ಞಾತವಾಸ ಆರಂಭಿಸುತ್ತಾನೆ. ಕಾದಂಬರಿ ಶುರುವಾಗುವುದು ಮುಂಬೈಯಲ್ಲಿ ಒಂಟಿ ಜೀವನ ನಡೆಸುತ್ತಿದ್ದ ಯಶವಂತನ ಸಾವಿನ ವೃತ್ತಾಂತದೊಡನೆ. ಯಶವಂತನನ್ನು ಮುಂಬೈಯಲ್ಲಿ ಆಕಸ್ಮಿಕವಾಗಿ ಭೇಟಿಯಾದ ಕಾದಂಬರಿಯ ನಿರೂಪಕನ ಜೊತೆ ಆತನಿಗೆ ಗಾಢ ಸ್ನೇಹ ಬೆಳೆಯುತ್ತದೆ. ಯಶವಂತ, ಮುಂಬೈಯ ಜನ ಅರಣ್ಯದಲ್ಲಿ ಒಂಟಿತನ ಬಯಸಿ ಅಲ್ಲಿಯೇ ನೆಲೆಸಿದವನು. ಕಾದಂಬರಿಯ ನಿರೂಪಕನನ್ನು ಹೊರತುಪಡಿಸಿ ಅವನಿಗೆ ಆ ಮಹಾನಗರದಲ್ಲಿ ಯಾರೂ ಆಪ್ತರಿಲ್ಲ. ತನ್ನ ಸಾವಿನ ನಿರೀಕ್ಷೆಯಲ್ಲಿ ಎಂಬಂತೆ, ಯಶವಂತ ತನ್ನ ನಂತರ ತನ್ನ ಆಸ್ತಿ, ತನ್ನ ಬ್ಯಾಂಕ್ ಅಕೌಂಟಿನಲ್ಲಿರುವ ಹಣ ಮತ್ತು ಕಾಗದ ಪತ್ರಗಳಿಗೆ ಆತನ ಗೆಳೆಯನಾಗಿರುವ ಕಾದಂಬರಿಯ ನಿರೂಪಕನೇ ವಾರಸುದಾರ ಎಂದು ಸೂಚಿಸಿ ಮರಣಪತ್ರ ಬರೆದಿದ್ದಾನೆ. ತನ್ನ ಕಾಲಾನಂತರ ತನ್ನ ಹಣ ಹೇಗೆ ವಿನಿಯೋಗವಾಗಬೇಕು ಎಂದು ಯಶವಂತ ಮರಣಪತ್ರದಲ್ಲಿ ದಾಖಲಿಸಿದ್ದಾನೆ. ತನಗೆ ಆಪ್ತರಾದ ಕೆಲವರಿಗೆ ಸಲ್ಲಬೇಕಾದ ಮೊಬಲಗಿನ ಜೊತೆ, ತನ್ನ ಹುಟ್ಟೂರಿನಲ್ಲಿ ಇಳಿ ವಯಸ್ಸಿನ ಓರ್ವ ಮಹಿಳೆಗೆ ಪ್ರತಿ ತಿಂಗಳೂ ಒಂದು ಮೊತ್ತದ ಹಣ ಸಂದಾಯವಾಗಬೇಕು ಎಂದು ಆತ ತನ್ನ ಮರಣ ಪತ್ರದಲ್ಲಿ ಕಾಣಿಸಿದ್ದಾನೆ. ಕಾದಂಬರಿಯ ನಿರೂಪಕ, ಈ ಮುದುಕಿಯನ್ನು ಅರಸಿಕೊಂಡು, ಯಶವಂತನ ಹುಟ್ಟೂರು, ಬೆನಕನ ಹಳ್ಳಿಗೆ ಪ್ರಯಾಣ ಬೆಳೆಸುತ್ತಾನೆ. ಆ ಹಳ್ಳಿಯಲ್ಲಿ ಯಶವಂತನ ಹಣ ಸಲ್ಲಬೇಕಾದದ್ದು ಪಾರ್ವತಮ್ಮ ಎಂಬ ಹಣ್ಣು ಹಣ್ಣು ಮುದುಕಿಗೆ. ಆಕೆ ಯಶವಂತನ ಸಾಕುತಾಯಿಯಾಗಿ ಅವನನ್ನು ಬೆಳೆಸಿದವಳು; ಸಾಕುತಾಯಿಯಾದರೂ ಯಶವಂತನನ್ನು ಹೆತ್ತ ತಾಯಿಗಿಂತ ಹೆಚ್ಚು ಮಮತೆಯಲ್ಲಿ ಸಾಕಿದವಳು. ಪಾರ್ವತಮ್ಮನ ಆ ಹಳ್ಳಿಯಲ್ಲಿ, ಹಳ್ಳಿಯ ಹೆಸರಿಗೆ ಕಾರಣ ಒದಗಿಸಿದ ಒಂದು ಬೆನಕನ ಗುಡಿ ಇದೆ. ಅದು ಪಾಳುಬಿದ್ದ ಗುಡಿಯಾದರೂ ಅಲ್ಲಿನ ದೈವಕ್ಕೆ ಪಾರ್ವತಮ್ಮ ಭಕ್ತಿಯಿಂದ ನಡೆದುಕೊಳ್ಳುತ್ತಾಳೆ. ಕಾದಂಬರಿಯಲ್ಲಿ ಸ್ವತಃ ನಿರೂಪಕನೇ ಪಾರ್ವತಮ್ಮ ಮತ್ತು ಬೆನಕನ ಗುಡಿ ಕುರಿತು ಹೇಳುವ ಮಾತು ಇದು, ‘‘ನನ್ನ ಮನಸ್ಸಿನಲ್ಲಿ ಎರಡೆರಡು ಜೀರ್ಣವಾದ ಗುಡಿಗಳು ಕಾಣಿಸಿದವು. ಬೆನಕಯ್ಯನ ಕಲ್ಲು ಮಣ್ಣಿನ ಗುಡಿಯೊಂದು; ಎಲುಬು ಮಾಂಸಗಳ ಗುಡಿ ಮತ್ತೊಂದು. ಆ ಮತ್ತೊಂದು ಗುಡಿಯ ದೇವತೆಯೇ ಪಾರ್ವತಮ್ಮ’’ ಕಾರಂತರು ತಮ್ಮ ಕಾದಂಬರಿಯಲ್ಲಿ ಪಾರ್ವತಮ್ಮ ಮತ್ತು ತನ್ನ ಹಳ್ಳಿಯ ಸಹಜೀವಿಗಳ ಜೊತೆ ಆಕೆ ಬಾಳಿದ ಬಗೆಯ ಚಿತ್ರಣ ಮುಖಾಂತರ ಸಜೀವಗೊಳಿಸುವ ಮಾತು ಇದು- ಪಾರ್ವತಮ್ಮ ಎಲುಬು ಮಾಂಸಗಳ ಗುಡಿ; ಅವಳ ದೇಹವೇ ದೇವಾಲಯ. ಕಾದಂಬರಿಯ ಮುಖ್ಯ ಪಾತ್ರ ಯಶವಂತ ನಿರೀಶ್ವರವಾದಿ; ಕಾರಂತರಂತೂ, ಅವರೇ ಒಂದೆಡೆ ತಮ್ಮ ಬಗ್ಗೆ ಹೇಳಿಕೊಂಡ ಹಾಗೆ ಆಸ್ತಿಕನೂ ಅಲ್ಲದ ನಾಸ್ತಿಕನೂ ಅಲ್ಲದ ಅಥವಾ ಎರಡೂ ಆಗಿರುವ ಅನಾಸ್ತಿಕ. ಆದರೆ ಪಾರ್ವತಮ್ಮ ದೇವರಲ್ಲಿ ಪರಮ ಶ್ರದ್ಧೆಯುಳ್ಳವಳು. ಯಶವಂತನಿಗೆ ಅವಳು ತಾಯಿ ದೇವತೆ; ನಿರೂಪಕನಿಗೆ ವೃದ್ಧಾಪ್ಯದಲ್ಲಿ ಸವೆದ ಅವಳ ದೇಹವೇ ಗುಡಿ; ಹಾಗಾಗಿ ಆತ, ಯಶವಂತನ ದುಡ್ಡಿನಲ್ಲಿ ಬೆನಕನ ಹಳ್ಳಿಯ ಪಾಳುಬಿದ್ದ ಗುಡಿಯ ಜೀರ್ಣೋದ್ಧಾರಕ್ಕೆ ಮುಂದಾಗುತ್ತಾನೆ. ಅದರಿಂದ ಪಾರ್ವತಮ್ಮನ ಹಂಬಲವನ್ನೂ ಈಡೇರಿಸಿದಂತಾಯಿತು; ಯಶವಂತನ ಇಂಗಿತವನ್ನು ನಡೆಸಿದಂತಾಯಿತು ಎಂಬುದು ನಿರೂಪಕನ ಯೋಚನೆ. ಕಾದಂಬರಿಯಲ್ಲಿ ಯಶವಂತ, ಪಾರ್ವತಮ್ಮ ಹಾಗೂ ನಿರೂಪಕ - ಎಲ್ಲರೂ ತಮ್ಮ ‘ಸ್ವ’ವನ್ನು ‘ತಮ್ಮತನ’ವನ್ನು ಉಳಿಸಿಕೊಂಡು ಇತರ ಜೀವಗಳ ‘ಸ್ವ’ವನ್ನು ‘ಸ್ವಾಯತ್ತತೆ’ಯನ್ನು ಮತ್ತು ಆ ಸ್ವಾಯತ್ತತೆಯಲ್ಲಿ ತಾವು ತಾವಾಗಿಯೇ ಬಾಳುವ ‘ಹಕ್ಕ’ನ್ನು ಗೌರವಿಸುವವರು. ನಾಸ್ತಿಕನಾದ ಯಶವಂತ, ತನ್ನ ಸಾಕುತಾಯಿ ಪಾರ್ವತಮ್ಮನ ದೈವಶ್ರದ್ಧೆಯನ್ನು ಗೌರವಿಸುವುದು, ‘ಅನ್ಯ’ದ ಜೊತೆ ಸಹಬಾಳ್ವೆ ಅಲ್ಲ; ನಾವು ಒಲ್ಲದ್ದರ ಕುರಿತು ಸಹನೆ ಅಲ್ಲ; ನಮಗೆ ಸರಿ ಕಾಣದ ಜೀವನ ವಿಧಾನಗಳ ಬಗೆಗಿನ ಸಹಿಷ್ಣುತೆಯೂ ಅಲ್ಲ. ಇದು ನಮ್ಮ ಸಹಜೀವಿಯ ಅಸ್ಮಿತೆ ಮತ್ತು ಸ್ವಾಯತ್ತತೆಗಳನ್ನು ಗುರುತಿಸಿ ಗೌರವಿಸುವ, ಅತ್ಯಂತ ಜೀವಪರ ನಿಲುವು. ಇಂತಹ ಜೀವನದೃಷ್ಟಿ ಒಬ್ಬ ಮುಸ್ಲಿಮನೋ, ಕ್ರೈಸ್ತನೋ ನಮ್ಮ ಜೊತೆ ಬಾಳಬೇಕೆಂದಾದರೆ, ಅವನು ತನ್ನ ಧರ್ಮದ ಆಚರಣೆ, ತನ್ನ ಸಮುದಾಯದ ಉಡುಗೆತೊಡುಗೆ ಹಾಗೂ ತನ್ನ ಆಹಾರ ಪದ್ಧತಿಗಳನ್ನು ಕೈಬಿಡಬೇಕು ಎಂದು ಒತ್ತಾಯಿಸುವುದಿಲ್ಲ. ಕಾರಂತರ ಕಾದಂಬರಿಯ ವಿನ್ಯಾಸದಲ್ಲೇ ಒಡಮೂಡುವ ಈ ಅರಿವು ಗಿರೀಶರ ಕತೆಯಲ್ಲೂ ಪ್ರತಿಧ್ವನಿ ಪಡೆದುಕೊಳ್ಳುತ್ತದೆ. ಗಿರೀಶರ ಕತೆ, ಕಾರಂತರ ಕಾದಂಬರಿಯ ಈ ಘಟ್ಟದ ಅಂದರೆ, ಯಶವಂತನ ಹುಟ್ಟೂರು ಬೆನಕನಹಳ್ಳಿಯ ಗುಡಿಯ ಜೀರ್ಣೋದ್ಧಾರ ಮಾಡಿಸುವ ನಿರೂಪಕನ ನಿರ್ಧಾರದವರೆಗಿನ ವಿವರಗಳನ್ನು ಬಳಸಿಕೊಳ್ಳುತ್ತದೆ. ಗಿರೀಶರ ಕತೆಯಲ್ಲಿ ರಿಝಿವಿ ಎಂಬ ಟೆಲಿಚಿತ್ರ ನಿರ್ಮಾಪಕ, ಕಾರಂತರ ‘ಅಳಿದ ಮೇಲೆ’ ಕೃತಿಗೆ ಎಷ್ಟು ಮನ ಸೋತಿದ್ದಾನೆ ಎಂದರೆ, ಅದನ್ನು ಆಧರಿಸಿ ಒಂದು ಚಿತ್ರ ಮಾಡಲು ಅವನು ನಿರ್ಧರಿಸುತ್ತಾನೆ; ಆ ಚಿತ್ರಕ್ಕೋಸ್ಕರ ಚಿತ್ರ ನಿರ್ಮಾಪಕರೊಡನೆ ಚೌಕಾಶಿ ಮಾಡಿ ಒಂದಿಷ್ಟು ಹಣವನ್ನು ಮುಂಗಡವಾಗಿ ಪಡೆದಿದ್ದೂ ಅಲ್ಲದೆ ಶಿವರಾಮ ಕಾರಂತರ ಅನುಮತಿಯನ್ನು ಸಹ ಪಡೆದುಕೊಂಡಿದ್ದಾನೆ. ಆನಂತರ ತನ್ನ ಚಿತ್ರದ ಕುರಿತು ಚರ್ಚಿಸಲು, ರಿಝಿವಿ, ಕಾರಂತರು ತನ್ನ ಕೊನೆಗಾಲದಲ್ಲಿ ನೆಲೆಸಿದ್ದ ಕರಾವಳಿಯ ಕೋಟದ ಸಮೀಪ ಸಾಲಿಗ್ರಾಮಕ್ಕೆ ಪ್ರಯಾಣಿಸುತ್ತಿದ್ದಾಗ ಹೆದ್ದಾರಿಯಲ್ಲಿ ಅಪಘಾತವಾಗಿ ತೀರಿಕೊಳ್ಳುತ್ತಾನೆ. ರಿಝಿವಿ ತನ್ನ ಆತ್ಮ ತೃಪ್ತಿಗಾಗಿ ಈ ಚಿತ್ರ ನಿರ್ಮಿಸುವುದರ ಜೊತೆಗೆ, ಅದರಲ್ಲಿ ಸ್ವಲ್ಪ ಹಣ ಉಳಿಸಿ, ತನ್ನ ಮಗಳ ಮದುವೆಯನ್ನು ಸಹ ಮಾಡುವ ಪ್ಲಾನ್ ಹಾಕಿಕೊಂಡಿದ್ದ. ಈಗ ಅವನೇ ತೀರಿಕೊಂಡಿದ್ದಾನೆ. ರಿಝಿವಿ ಕುಟುಂಬ ಕಂಗಾಲಾಗುತ್ತದೆ. ಈ ನಡುವೆ 1992 ಡಿಸೆಂಬರ್ 6ರಂದು ಉತ್ತರಪ್ರದೇಶದ ಫೈಝಾಬಾದ್ ನಗರದ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸವಾಗುತ್ತದೆ. ರಿಝಿವಿಯ ಮಗ ಯಾಕೂಬ್‌ನ ಹೆಗಲ ಮೇಲೆ ತನ್ನ ಸೋದರಿಯ ವಿವಾಹದ ಜವಾಬ್ದಾರಿ ಬಿದ್ದಿದೆ. ಯಾಕೂಬ್ ಕತೆಯ ನಿರೂಪಕನ ಬಳಿ ಧಾವಿಸಿ ಕಾರಂತರ ಕಾದಂಬರಿ ಆಧಾರಿತ ಚಿತ್ರವನ್ನು ಆತನೇ ನಿರ್ದೇಶಿಸಬೇಕು ಎಂದು ದುಂಬಾಲು ಬೀಳುತ್ತಾನೆ. ಆದರೆ ನಿರೂಪಕ ಯಾಕೂಬ್‌ನ ಮನವಿಯನ್ನು ಸುತಾರಾಂ ಒಪ್ಪಿಕೊಳ್ಳುವುದಿಲ್ಲ. ಅಯೋಧ್ಯೆಯ ದುರ್ಘಟನೆ ಅವನನ್ನು ಅಲ್ಲಾಡಿಸಿಬಿಟ್ಟಿದೆ. ಈಗ ತಾನು ಕಾರಂತರ ಕಾದಂಬರಿಯಲ್ಲಿ ವರ್ಣಿತವಾಗಿರುವಂತೆ ಚಿತ್ರದಲ್ಲಿಯೂ ಗುಡಿಯೊಂದನ್ನು ಪುನರ್‌ನಿರ್ಮಿಸಿದರೆ ಬಾಬರಿ ಮಸೀದಿ ಧ್ವಂಸ ಮಾಡಿದ್ದನ್ನು ಸಮರ್ಥಿಸಿದಂತೆ ಆಗುತ್ತದೆ. ಎಷ್ಟು ಮಾತ್ರಕ್ಕೂ ಅದು ತನ್ನಿಂದ ಸಾಧ್ಯವಿಲ್ಲ ಎಂದು ಅವನು ಕೈ ಚೆಲ್ಲಿ ಬಿಡುತ್ತಾನೆ. ಯಾವ ಕಾರಣಕ್ಕೆ ಕಾರಂತರ ಕಾದಂಬರಿ ಆಧಾರಿತ ಚಿತ್ರ ನಿರ್ಮಾಣದ ಬಗ್ಗೆ ರಿಝಿವಿ ಉತ್ಸಾಹ ತೋರಿಸಿದನೋ, ಅದೇ ಕಾರಣಕ್ಕೆ ಗಿರೀಶರ ಕತೆಯ ನಿರೂಪಕ ಚಿತ್ರ ನಿರ್ದೇಶನಕ್ಕೆ ಒಲ್ಲೆ ಎನ್ನುತ್ತಿದ್ದಾನೆ. ಈ ನಡುವೆ ರಿಝಿವಿಯ ಪತ್ನಿಗೆ ಬೆಳೆದು ನಿಂತ ಮಗಳ ಮದುವೆಯದ್ದೇ ಚಿಂತೆ. ಅಯೋಧ್ಯೆಯಲ್ಲಿ ಸಂಭವಿಸಿದ ಘಟನೆಯೊಂದು ದೂರದ ಮುಂಬೈಯ ಮುಸ್ಲಿಮ್ ಕುಟುಂಬವನ್ನು ಕಂಗೆಡಿಸಿದೆ! ಕಾರ್ನಾಡರ ಕತೆಯಲ್ಲಿ ಸೂಚ್ಯವಾಗಿ ಚಿತ್ರಿತವಾಗುವ ಬಾಬರಿ ಮಸೀದಿ ಧ್ವಂಸದ ಈ ದುರಂತವನ್ನು ಇನ್ನಷ್ಟು ಸಮಗ್ರವಾಗಿ ನಿರೂಪಿಸುವ ಕೃತಿ, ಲೋಕಖ್ಯಾತ ಚಿಂತಕ ಅಶೀಶ್‌ನಂದಿ, ಸಮಾಜ ಶಾಸ್ತ್ರಜ್ಞರಾದ ಶಿಖಾತ್ರಿವೇದಿ, ಶೈಲ್ ಮಯಾರಂ ಮತ್ತು ಅಚ್ಯುತ್‌ಯಾಜ್ಞಿಕ್‌ರ ಸಹಬಾಗಿತ್ವದೊಂದಿಗೆ ಪ್ರಕಟಿಸಿದ CREATING A NATIONALITY. THE RAM JANMABHUMI MOVEMENT AND FEAR OF THE SELF - O.U.P. DELHI 1995. ಈ ಪುಸ್ತಕ ನೀಡುವ ಮಾಹಿತಿ ಓದುಗರನ್ನು ಈಗಲೂ ಅಸ್ವಸ್ಥಗೊಳಿಸುವಷ್ಟು ದಾರುಣವಾಗಿದೆ. 1992 ಡಿಸೆಂಬರ್ 6ರ ಘಟನೆ ಹಠಾತ್ತನೆ ಸ್ಫೋಟಗೊಂಡದ್ದಲ್ಲ. ದೇಶಾದ್ಯಂತ ಅದಕ್ಕೆ ನಡೆದ ಪೂರ್ವ ತಯಾರಿ, ಅದರಲ್ಲಿ ಭಾಗವಹಿಸಿದ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಧರ್ಮ ಗುರುಗಳು ಹಾಗೂ ಅದರ ಉಸ್ತುವಾರಿಯನ್ನು ನಿರ್ವಹಿಸಿದ ಸಂಘಟನೆಗಳನ್ನು ವಿವರವಾಗಿ ಚಿತ್ರಿಸುವ ಈ ಕೃತಿ ಡಿಸೆಂಬರ್ 6 ಮತ್ತು ಆ ನಂತರ ಅಯೋಧ್ಯೆಯಲ್ಲಿ ನಡೆದದ್ದರ ಪ್ರತ್ಯಕ್ಷದರ್ಶಿ ವರದಿಯನ್ನು ಸಹ ಒಳಗೊಂಡಿದೆ. ‘ಕರಸೇವಕರು’ ಎಂಬ ಹಿಂದುತ್ವ ಸಿದ್ಧಾಂತದ ಕಾಲಾಳುಗಳು ಅತ್ಯಂತ ಶಿಸ್ತುಬದ್ಧವಾಗಿ ನೆರವೇರಿಸಿದ ಬಾಬರಿ ಮಸೀದಿ ಧ್ವಂಸದ ಕಾರ್ಯಾಚರಣೆಯ ನಂತರ ಅಯೋಧ್ಯೆಯಲ್ಲಿ ಏನು ನಡೆಯಿತು ಎಂಬುದನ್ನು ಪುಸ್ತಕದಲ್ಲಿ ವರ್ಣಿಸಲಾಗಿದೆ. ‘‘ಡಿಸೆಂಬರ್ 6ರ ರಾತ್ರಿ ಮತ್ತು ಅದರ ಮಾರನೆಯ ದಿನದ ಮಧ್ಯಾಹ್ನಗಳ ನಡುವೆ, ಉದ್ರಿಕ್ತಕರಸೇವಕರ ಗುಂಪು ಅಯೋಧ್ಯೆಯಲ್ಲಿ ಮಕ್ಕಳೂ ಸೇರಿದಂತೆ 13 ಮುಸ್ಲಿಮರನ್ನು ಜೀವಂತ ಸುಟ್ಟು ಕೊಂದಿತು. ಡಿಸೆಂಬರ್ 6ಕ್ಕಿಂತ ಮೊದಲೇ ಅಯೋಧ್ಯೆಯ ಹೆಚ್ಚಿನ ಮುಸ್ಲಿಮರು ಊರು ಮನೆ ಬಿಟ್ಟು ಹೆಚ್ಚು ಸುರಕ್ಷಿತವೆನ್ನಿಸಿದ ದೂರದ ಊರುಗಳಿಗೆ ಹೊರಟು ಹೋಗಿದ್ದರು; ಊರಿನಲ್ಲೇ ಉಳಿದುಕೊಂಡಿದ್ದ ಮುಸ್ಲಿಮರಲ್ಲಿಯೂ ಕೆಲವರು ಬಾಬರಿ ಮಸೀದಿ ಉರುಳಿದ ಸುದ್ದಿ ಕೇಳಿದ್ದೇ ತಮ್ಮ ಮನೆ ಮಾರು ಬಿಟ್ಟು ಓಡಿದರು. ಬೇರೆ ಎಲ್ಲೂ ತಮಗೆ ಆಶ್ರಯ ದೊರೆಯುವ ಸಾಧ್ಯತೆ ಇಲ್ಲದ ಕೆಲವು ಅಸಹಾಯಕ ಮುಸ್ಲಿಮರು ಮಾತ್ರ ಆ ದಿನ ಅಯೋಧ್ಯೆಯಲ್ಲಿ ಉಳಿದುಕೊಂಡಿದ್ದರು...’’

ಬಾಬರಿ ಮಸೀದಿ ಧ್ವಂಸ ದೇಶದ ಸಮಸ್ತ ಹಿಂದೂಗಳ ಹೆಸರಿನಲ್ಲಿ, ಅವರ ಅನುಮತಿ ಪಡೆದುಕೊಳ್ಳದೆ, ಆರೆಸ್ಸೆಸ್ ಮತ್ತು ಅದರ ಸಂಘ ಪರಿವಾರದ ಕಾಲಾಳುಗಳು ನಡೆಸಿದ ಪೂರ್ವಯೋಜಿತ ಕಾರ್ಯಕ್ರಮ. ಕಾರಂತರ ‘ಅಳಿದ ಮೇಲೆ’ ಕಾದಂಬರಿ ಪ್ರಕಟವಾದದ್ದು 1992ರ ಘಟನೆಗಿಂತ ಮೂರು ದಶಕಗಳಿಗೂ ಮೊದಲು. ಆದರೆ ಕಾದಂಬರಿ ಎತ್ತಿಹಿಡಿಯುವ ನಂಬಿಕೆಯ ಸ್ವಾಯತ್ತತೆ ಮತ್ತು ನಂಬಿಕೆಯ ಸ್ವಾತಂತ್ರಗಳನ್ನು ರಾಮಜನ್ಮ ಚಳವಳಿ ಮೆಟ್ಟಿ ತುಳಿದು ಧ್ವಂಸಗೊಳಿಸಿರುವುದರ ಕಾರಣದಿಂದಾಗಿ, ಕಾದಂಬರಿ ಇಂದಿಗೂ ಪ್ರಸ್ತುತವಾಗಿದೆ; ರೋಗಗ್ರಸ್ತವಾದ ನಮ್ಮ ಸಮಾಜಕ್ಕೆ ಔಷಧಪ್ರಾಯವೂ ಆಗಿದೆ.

‘ಹಿಂದೂಗಳು ಎಂದೂ ಅನ್ಯಮತೀಯರ ಪೂಜಾಸ್ಥಳಗಳಿಗೆ ಹಾನಿ ಮಾಡುವುದಿಲ್ಲ; ಹಿಂದೂಗಳದ್ದು ಅತ್ಯಂತ ಸಹಿಷ್ಣುಧರ್ಮ’ ಎಂಬ ವಿಹಿಂಪದ ಹೆಗ್ಗಳಿಕೆಯನ್ನು ಅಳಿಸಿ ಹಾಕಲೋ ಎಂಬಂತೆ, ದಾಖಲೆಗಳ ಪ್ರಕಾರ ಪಟ್ಟಣದ 23 ಮಸೀದಿ, 11 ಮಝಾರ್, 3 ಈದ್ಗಾ ಮತ್ತು 2 ಮದ್ರಸಾಗಳನ್ನು ನಾಶಪಡಿಸಲಾಯಿತು...... ‘‘ಜೈ ಶ್ರೀರಾಮ್’’ ಎಂದು ಬೊಬ್ಬೆ ಹಾಕುತ್ತ ಕರಸೇವಕರು ಪಟ್ಟಣದಲ್ಲಿದ್ದ ಮುಸ್ಲಿಮರ ಮನೆಗಳನ್ನೂ ಅಂಗಡಿ ಮುಂಗಟ್ಟುಗಳನ್ನೂ ವ್ಯವಸ್ಥಿತವಾಗಿ ಲೂಟಿ ಮಾಡಿ, ನಂತರ ಆ ಕಟ್ಟಡಗಳಿಗೆ ಬೆಂಕಿಕೊಟ್ಟರು. ಊರಿನಲ್ಲಿ ಯಾರೂ ಅವರನ್ನು ತಡೆಯಲಿಲ್ಲ. ಅದು ಅಯೋಧ್ಯೆಯ ‘‘ಮೊತ್ತಮೊದಲ ಹಿಂದೂ-ಮುಸ್ಲಿಮ್ ಗಲಭೆ ಮತ್ತು ಅದು ಸಾಕಷ್ಟು ಪರಿಣಾಮಕಾರಿಯಾಗಿತ್ತು; ಒಟ್ಟು 134 ಮನೆಗಳು ಸುಟ್ಟು ಬೂದಿಯಾದವು....’’ ‘‘ಕರಸೇವಕರ ಈ ಸಂಘಟಿತ ದಾಳಿಗೆ ಸ್ಥಳದಲ್ಲಿದ್ದ ಹೆಚ್ಚಿನ ಪೊಲೀಸರು, ಅರೆಸೈನಿಕ ಪಡೆಗಳು ಮತ್ತು ಕೆಲವು ಸ್ಥಳೀಯ ಹಿಂದೂಗಳು ಮೊದಲ ಬಾರಿಗೆ ನೆರವು ಕೊಟ್ಟರು..... ಕರಸೇವಕರು 75 ವರ್ಷ ಪ್ರಾಯದ ಜಮೀನ್ದಾರ ತಾಹಿರ್ ಹುಸೇನ್ ಅವರ ಮನೆಗೆ ಬೆಂಕಿಕೊಟ್ಟರು. ಮನೆಯ ಯಜಮಾನನನ್ನು ಮನೆ ಹೆಬ್ಬಾಗಿಲಿನಲ್ಲೇ ಸುಟ್ಟುಕೊಂದರು. ತಾಹಿರ್ ಹುಸೇನ್ ಅವರ ಪೂರ್ವಜರು ಸುಮಾರು 300 ವರ್ಷಗಳಿಂದ ಅಯೋಧ್ಯೆಯಲ್ಲಿ ವಾಸಿಸಿಕೊಂಡಿದ್ದವರು. ಆದರೆ ಈಗ ತಾಹಿರ್ ಹುಸೇನ್‌ರದ್ದು ಎಂದು ಹೇಳಬಹುದಾದ ಕೆಲವು ಎಲುಬುಗಳು ಮಾತ್ರ ಉಳಿದಿದ್ದವು. ‘‘CREATING A NATIONALITY'' ಪುಟ 192-200.

ರಾಮಜನ್ಮ ಭೂಮಿ ಚಳವಳಿ ಮತ್ತು ಬಾಬರಿ ಮಸೀದಿ ಧ್ವಂಸ ಗುರಿಮಾಡಿಕೊಂಡದ್ದು ಕೇವಲ ಮುಸ್ಲಿಮ್ ಸಮುದಾಯವನ್ನು ಮಾತ್ರವಲ್ಲ. ಹಿಂದುತ್ವ ಸಿದ್ಧಾಂತದ ವತಿಯಿಂದ ನಡೆದ ಆ ಕಾರ್ಯ ಹಿಂದೂಗಳ ಸ್ವಾಯತ್ತತೆಯನ್ನು ಕೂಡ ಧ್ವಂಸಗೊಳಿಸಿತು. ದೇಶದ ಸಮಸ್ತ ಹಿಂದೂಗಳ ಹೆಸರಿನಲ್ಲಿ, ಅವರ ಅನುಮತಿ ಪಡೆದುಕೊಳ್ಳದೆ, ಆರೆಸ್ಸೆಸ್ ಮತ್ತು ಅದರ ಸಂಘ ಪರಿವಾರದ ಕಾಲಾಳುಗಳು ನಡೆಸಿದ ಪೂರ್ವಯೋಜಿತ ಕಾರ್ಯಕ್ರಮ ಅದು. ಕಾರಂತರ ‘ಅಳಿದ ಮೇಲೆ’ ಕಾದಂಬರಿ ಪ್ರಕಟವಾದದ್ದು 1992ರ ಘಟನೆಗಿಂತ ಮೂರು ದಶಕಗಳಿಗೂ ಮೊದಲು. ಆದರೆ ಕಾದಂಬರಿ ಎತ್ತಿಹಿಡಿಯುವ ನಂಬಿಕೆಯ ಸ್ವಾಯತ್ತತೆ ಮತ್ತು ನಂಬಿಕೆಯ ಸ್ವಾತಂತ್ರಗಳನ್ನು ರಾಮಜನ್ಮ ಚಳವಳಿ ಮೆಟ್ಟಿ ತುಳಿದು ಧ್ವಂಸಗೊಳಿಸಿರುವುದರ ಕಾರಣದಿಂದಾಗಿ, ಕಾದಂಬರಿ ಇಂದಿಗೂ ಪ್ರಸ್ತುತವಾಗಿದೆ; ರೋಗಗ್ರಸ್ತವಾದ ನಮ್ಮ ಸಮಾಜಕ್ಕೆ ಔಷಧಪ್ರಾಯವೂ ಆಗಿದೆ. ಗಿರೀಶರ ಕತೆ ಕಾರಂತರ ಕಾದಂಬರಿಯನ್ನು ಆಧರಿಸಿರುವುದಾದರೂ ಅದೇ ಕಾರಣಕ್ಕೆ.

1992-93ರ ಮುಂಬೈ ಗಲಭೆ ಹತ್ತಿರ ಹತ್ತಿರ 1,000 ಜನರನ್ನು ಬಲಿತೆಗೆದುಕೊಂಡಿತು. ಅವರಲ್ಲಿ ಹೆಚ್ಚಿನವರು ಮುಸ್ಲಿಮರು ಎಂದು ಆಲಾಯದ ಹೇಳಬೇಕಾಗಿಲ್ಲ. ಆಗ ಮಹಾರಾಷ್ಟ್ರದ ಎರಡು ಪ್ರಮುಖ ವಿರೋಧಪಕ್ಷಗಳಾಗಿದ್ದ, ಬಿಜೆಪಿ ಹಾಗೂ ಶಿವಸೇನಾ ಈ ಗಲಭೆಗಳ ನೇತೃತ್ವವಹಿಸಿದ್ದವು. ಆಳುವ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷದ ರಾಜಕಾರಣಿಗಳು ಒಂದೋ ಆ ಗಲಭೆಗಳಿಗೆ ಮೂಕ ಪ್ರೇಕ್ಷಕರಾಗಿದ್ದರು ಅಥವಾ ಸ್ವತಃ ಅವರೇ ಗಲಭೆಗಳಲ್ಲಿ ಶಾಮೀಲಾಗಿದ್ದರು; ಕೆಲವೊಮ್ಮೆ ಭಾಗಿಗಳೂ ಆಗಿದ್ದಿದೆ. ಮುಂಬೈಯ ಪೊಲೀಸ್ ಸಿಬ್ಬಂದಿಯಲ್ಲಿ ಹೆಚ್ಚಿನವರು ದೊಂಬಿಕೋರರ ಜೊತೆ ಸೇರಿಕೊಂಡು ಲೂಟಿ, ಮುಸ್ಲಿಮರ ಆಸ್ತಿಪಾಸ್ತಿಗೆ ಬೆಂಕಿಕೊಡುವುದು, ಮಾರಾಮಾರಿ ಮುಂತಾದವುಗಳಲ್ಲಿ ಪಾಲುಗೊಂಡರು.

ಬಾಬರಿ ಮಸೀದಿ ಧ್ವಂಸಗೊಂಡ ನಂತರವೂ ಅದು ಕಾರಂತರ ‘ಅಳಿದ ಮೇಲೆ’ ಕಾದಂಬರಿ ಎತ್ತಿ ಹಿಡಿಯುವ ನಂಬಿಕೆಯ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯಗಳನ್ನು ನಾಶಪಡಿಸುವಂತಹದ್ದಾದರೂ, ಕಾರಂತರಿಗೆ ಹಿಂದುತ್ವದ ಜೊತೆ ಸಹಮತವಿತ್ತು. ಇದು ಗಿರೀಶರ ಕತೆ ಓದುವವರನ್ನು ಚುಚ್ಚದೆ �

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಗಾಂಧೀಜಿ