ತನಗಾಗಿ ಜೀವಿಸದೆ ಸಮಾಜದ ಉದ್ಧಾರಕ್ಕಾಗಿ ಬದುಕಿ: ಪಿ.ಜಿ.ಆರ್.ಸಿಂಧ್ಯಾ

Update: 2018-12-11 17:37 GMT

ಬೆಂಗಳೂರು, ಡಿ.11: ಮನುಷ್ಯ ಹುಟ್ಟಿದ ಮೇಲೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ, ತನಗಾಗಿ ಜೀವಿಸದೆ ಸಮಾಜದ ಉದ್ಧಾರಕ್ಕಾಗಿ ಬದುಕಬೇಕು. ಈ ಸಾಲಿನಲ್ಲಿ ಕೊಂಡಜ್ಜಿ ಬಸಪ್ಪ ಸೇರುತ್ತಾರೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದ ಲಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್ ಆಯೋಜಿಸಿದ್ದ, ಕೊಂಡಜ್ಜಿ ಬಸಪ್ಪ ಅವರ 103ನೇ ಜನ್ಮ ಶತಮಾನೋತ್ಸವದ ಅಂಗವಾಗಿ ಇಗ್ನೇಟಿಂಗ್ ಯಂಗ್ ಮೈಂಡ್ಸ್ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಮನುಷ್ಯ ಹುಟ್ಟುತ್ತಾನೆ, ಅದರ ಮಧ್ಯೆ ಸಾಧಿಸುವ ಸಾಧನೆ ಶಾಶ್ವತ ಎಂದು ಸಿಂಧ್ಯಾ ತಿಳಿಸಿದರು.

ಕೊಂಡಜ್ಜಿ ಬಸಪ್ಪನವರು ನಮ್ಮನ್ನಗಲಿ 40 ವರ್ಷವಾದರೂ ಅವರನ್ನು ನೆನೆಯುತ್ತೇವೆ. ಕಾರಣ ಅವರ ಸಾಧನೆ. ಉತ್ತಮವಾಗಿ ಮೈಗೂಡಿಸಿಕೊಂಡಿದ್ದ ಶಿಸ್ತು. ಯುವ ಜನರ ಆಂದೋಲನಕ್ಕೆ ಅವರ ಜೀವನವನ್ನೆ ಸಮರ್ಪಿಸಿದರು. ಹೀಗಾಗಿ, ಅವರ ಶತಮಾನೋತ್ಸವ ಜನ್ಮ ದಿನಾಚರಣೆಯಲ್ಲಿ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಹೇಳಿದರು.

ಎನ್‌ಎಸ್‌ಎಸ್, ಎಸ್‌ಸಿಸಿ ಮತ್ತು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಘಟನೆಗಳೊಂದಿಗೆ ಏಪ್ರಿಲ್ ನಲ್ಲಿ ಸಮಿತಿ ರಚಿಸಲಾಗುತ್ತದೆ. ಮಕ್ಕಳಿಗೆ ಉಪಯೋಗವಾಗುವ ಯೋಜನೆಗಳನ್ನು ರೂಪಿಸಲಾಗುತ್ತದೆ. ಪ್ರಸ್ತುತ 5 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಅದನ್ನು 10ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಸಾಮಾಜಿಕ ಜಾಲತಾಣಗಳ ಬಳಕೆ ಮಾಡಿಕೊಳ್ಳದೆ ಇತರೆ ವಿಧಾನಗಳಲ್ಲಿ ಹೆಚ್ಚಿಸಲು ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು.

ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ ಮಾತನಾಡಿ, ಮಕ್ಕಳಿಗೆ ಆರೋಗ್ಯ, ಜೀವನ ಮಾರ್ಗದರ್ಶನ, ಶಿಕ್ಷಣ, ಶಿಷ್ಟಾಚಾರ, ಶುಚಿತ್ವ ಹಾಗೂ ಸಂಸ್ಕಾರವನ್ನು ಬೆಳೆಸಿದಾಗ ಮುತ್ತು ರತ್ನಗಳಂತೆ ಸಮಾಜದಲ್ಲಿ ರಾರಾಜಿಸುತ್ತಾರೆ. ಇತ್ತೀಚೆಗೆ ಮೊಬೈಲ್, ಗೂಗಲ್ ನಲ್ಲಿ ಪಾಠಗಳನ್ನು ಕಲಿಯುತ್ತಾರೆ. ಇದರಿಂದ ಹೊರಜಗತ್ತನ್ನು ಜನ ಮರೆತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಖಾಸಗಿ ಶಾಲೆಗಳ ಹಾವಳಿಯಿಂದ ಶಿಕ್ಷಣದಲ್ಲಿ ಬಡವ, ಶ್ರೀಮಂತ ಎಂಬ ತಾರತಮ್ಯ ಹೆಚ್ಚಾಗಿದೆ. ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಯೋಗ, ಪುಸ್ತಕಗಳ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಲಹೆ ನೀಡಿದರು. ಜಂಕ್ ಫುಡ್‌ಗಳಿಂದಾಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸಿದರು.

ವಿಜ್ಞಾನ, ತಂತ್ರಜ್ಞಾನ ಮತ್ತು ವಿಟಮಿನ್ಸ್‌ಗಳ ಕುರಿತು ಮಕ್ಕಳಲ್ಲಿನ ಜಾಗೃತಿ ಮೂಡಿಸಿದರು. ಆರೋಗ್ಯ ಉತ್ತಮವಾಗಿಟ್ಟುಕೊಳ್ಳಲು ತರಕಾರಿ, ಹಣ್ಣುಗಳ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಲು ಸಲಹೆ ನೀಡಿದರು. ಅಲ್ಲದೆ, ಶಾಲೆಗಳಲ್ಲಿ ಮಕ್ಕಳಿಗೆ ಕೊಡುವ ಪೌಷ್ಟಿಕ ಆಹಾರ ಕೊಡದೆ ಅದರಲ್ಲೂ ಲೂಟಿ ಮಾಡುವ ಲಂಚ ಬಾಕರಿದ್ದಾರೆ. ಇದರಿಂದ ಅವರಿಂದ ಅಪೌಷ್ಟಿಕತೆ ತೀವ್ರ ಕಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News