ಬಿಜೆಪಿ-ಮೋದಿ ಮುಕ್ತ ಭಾರತಕ್ಕೆ ನಾಂದಿ: ಟಿ.ಎಂ.ಶಾಹಿದ್ ತೆಕ್ಕಿಲ್

Update: 2018-12-11 17:43 GMT

ಬೆಂಗಳೂರು, ಡಿ.11: ಪಂಚರಾಜ್ಯ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪರ ಇದ್ದು, ಬಿಜೆಪಿ ಹಾಗೂ ಮೋದಿ ಮುಕ್ತ ಭಾರತಕ್ಕೆ ನಾಂದಿಯಾಗುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಟಿ.ಎಂ.ಶಾಹಿದ್ ತೆಕ್ಕಿಲ್ ತಿಳಿಸಿದ್ದಾರೆ.

ಪಂಚರಾಜ್ಯದಲ್ಲಿ ನಡೆದ ಚುನಾವಣೆ ಫಲಿತಾಂಶವು ಭಾರತದ ಪ್ರಧಾನ ಮಂತ್ರಿ ವಿದೇಶಗಳಲ್ಲಿ ಪ್ರವಾಸ ಮಾಡಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆಂದು ಭಾಷಣ ಮಾಡಿರುವುದಕ್ಕೆ ಮನಃ ನೊಂದು, ಭಾರತೀಯರು ಮೋದಿ ಮುಕ್ತ ಭಾರತವನ್ನು ಮಾಡುವ ಸೂಚನೆ ನೀಡುವ ಮೂಲಕ, ಐದು ರಾಜ್ಯದಲ್ಲೂ ಬಿಜೆಪಿಯನ್ನು ಸೋಲಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ದೇಶಕ್ಕೆ ಮೋದಿ ಹಾಗೂ ಬಿಜೆಪಿ ಮುಕ್ತ ಸರಕಾರ ನೀಡುವ ಸೂಚನೆ ಈ ಚುನಾವಣಾ ಫಲಿತಾಂಶದ ಮುನ್ನುಡಿಯಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಪೆಟ್ರೋಲ್ ಹಾಗೂ ಗ್ಯಾಸ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗಿದ್ದು, ಸಾಮಾನ್ಯ ಜನರು ಬದುಕುವುದು ಕಷ್ಟವಾಗಿದ್ದು, ಪಂಚರಾಜ್ಯಗಳ ಚುನಾವಣಾ ಸಂದರ್ಭದಲ್ಲಿ ಮಾತ್ರ ಗ್ಯಾಸ್ ಬೆಲೆ ಹಾಗೂ ಪೆಟ್ರೋಲ್ ಬೆಲೆಯನ್ನು ಕಡಿತಗೊಳಿಸಿ ಜನರನ್ನು ಮೋಸ ಮಾಡಲು ಹೊರಟ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ದೇಶದ ಜನತೆ ತಕ್ಕ ಪಾಠ ಕಲಿಸಿದ್ದಾರೆ.

ವಿದೇಶದಿಂದ ಕಪ್ಪು ಹಣ ತರುತ್ತೇನೆಂದು ಜನರಿಗೆ ಆಶ್ವಾಸನೆ ನೀಡಿದ ಪ್ರಧಾನ ಮಂತ್ರಿ ವಿಜಯಮಲ್ಯ, ಲಲಿತ್ ಮೋದಿ, ನೀರವ್ ಮೋದಿ ಮೊದಲಾದವರು ಭಾರತದ ಹಣವನ್ನು ವಿದೇಶಕ್ಕೆ ಕೊಂಡೊಯ್ದರೂ ಸುಮ್ಮನಿರುವುದೇ ಮೋದಿಯವರ ಮಹಾ ಸಾಧನೆ. ಅಲ್ಲದೆ, ಮುಂದಿನ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯವರು ಪರಾಭವ ಹೊಂದುವ ಮೂಲಕ, ರಫೇಲ್ ಯುದ್ಧ ವಿಮಾನ ಖರೀದಿಯ ಹಗರಣದಲ್ಲಿ ಜೈಲು ಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News