ತೆಲಂಗಾಣ: ಟಿಆರ್‌ಎಸ್ ಗೆಲುವಿನ ಮುಖ್ಯ ಕಾರಣಗಳು

Update: 2018-12-13 09:04 GMT

ಎಲ್ಲ ನಿರೀಕ್ಷೆಗಳನ್ನೂ ಮೀರಿ ಕೆ.ಚಂದ್ರಶೇಖರ್ ರಾವ್ ಅವರ ಟಿಆರ್‌ಎಸ್ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದೆ. ಚುನಾವಣೆ ನಡೆದ 119ಸ್ಥಾನಗಳ ಪೈಕಿ 88ಸ್ಥಾನಗಳನ್ನು ಗೆಲ್ಲುವ ಮೂಲಕ ವಿರೋಧಪಕ್ಷಗಳು ಧೂಳಿಪಟವಾಗುವಂತೆ ಮಾಡಿದೆ. ಟಿಆರ್‌ಎಸ್ ಗೆಲ್ಲಬಹುದೆಂದು ಭವಿಷ್ಯ ನುಡಿದಿದ್ದವರಿಗೂ ಅಚ್ಚರಿಯಾಗುವಂತೆ ಅದು ಜಯ ಗಳಿಸಿರುವುದರ ಹಿಂದೆ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರರಾವ್ ಅವರ ಚುನಾವಣಾ ತಂತ್ರಗಾರಿಕೆ ಕೆಲಸ ಮಾಡಿದೆ.

ಹಾಗೆ ನೋಡಿದರೆ ತೆಲಂಗಾಣ ವಿದಾನಸಭಾ ಚುನಾವಣೆಗಳು 2019ರ ಮೇ ತಿಂಗಳ ಲೋಕಸಭಾ ಚುನಾವಣೆಗಳ ಜೊತೆಗೆ ನಡೆಯಬೇಕಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಬೀಸಬಹುದಾದ ಪ್ರಧಾನಿ ನರೇಂದ್ರ ಮೋದಿಯವರ ಅಲೆಯಿಂದ ತಪ್ಪಿಸಿಕೊಳ್ಳಲೆಂಬಂತೆ ಕೆ.ಸಿ.ಆರ್. ಅವಧಿಗೆ ಮುನ್ನವೇ ವಿಧಾನಸಭೆ ವಿಸರ್ಜಿಸಿ ರಾಜ್ಯಕ್ಕೆ ಪ್ರತ್ಯೇಕವಾಗಿ ಚುನಾವಣೆ ನಡೆಯುವಂತೆ ನೋಡಿಕೊಂಡರು. ಅವರ ಈ ನಿರ್ಧಾರವನ್ನು ವಿರೋಧಪಕ್ಷಗಳು ಟೀಕಿಸಿ, ರಾಜಕೀಯ ಪಂಡಿತರು ಅವರ ಈ ಲೆಕ್ಕಾಚಾರ ಉಲ್ಟಾ ಹೊಡೆಯಲಿದೆಯೆಂದು ನಕ್ಕಿದ್ದರು. ಆದರೆ ಅಂತಿಮವಾಗಿ ಕೆ.ಸಿ.ರಾವ್ ಗೆಲುವಿನ ನಗೆ ಬೀರಿದ್ದಾರೆ. ಆದರೆ ಇಂತಹ ಅಭೂತಪೂರ್ವ ಗೆಲುವು ತಮ್ಮದಾಗಬಹುದೆಂದು ಸ್ವತ: ಅವರೇ ನಿರೀಕ್ಷಿಸಿದ್ದರೆಂದು ಹೇಳುವುದು ತಪ್ಪಾಗುತ್ತದೆ.

ಅವರ ಈ ಗೆಲುವಿಗೆ ಇರಬಹುದಾದ ಕಾರಣಗಳತ್ತ ಒಂದಿಷ್ಟು ಕಣ್ಣು ಹಾಯಿಸೋಣ:

1.ಜನಪರ ಕಾರ್ಯಕ್ರಮಗಳು.
ರಾವ್ ತಮ್ಮ ಅಧಿಕಾರದ ಪ್ರಾರಂಭದಿಂದಲೂ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಲೇ ಬಂದಿದ್ದರು. ಅವರು ಜಾರಿಗೊಳಿಸಿದ ರೈತಬಂಧು ಕಾರ್ಯಕ್ರಮ ತೆಲಂಗಾಣದ ಕೃಷಿವಲಯದಲ್ಲಿ ಜನಪ್ರಿಯವಾಗಿತ್ತು. ಅವರು ಪರಿಚಯಿಸಿದ ಸಾಮಾಜಿಕ ಭದ್ರತೆ ಒದಗಿಸುವ ಪಿಂಚಣಿ ವ್ಯವಸ್ಥೆ, ಕುಡಿಯುವ ನೀರಿನ ಯೋಜನೆಗಳು, 24X7ವಿದ್ಯುತ್ ಪೂರೈಕೆ, ಬಡವರಿಗಾಗಿ ಜಾರಿಗೊಳಿಸಿದ ವಸತಿ ಸಂಕೀರ್ಣಗಳು ಜನಸಮುದಾಯದಲ್ಲಿ ಭಾರೀ ಜನಪ್ರಿಯತೆ ತಂದುಕೊಟ್ಟವು. ಹೆಣ್ಣುಮಕ್ಕಳ ಮದುವೆಗಾಗಿ ಸರಕಾರ ಒಂದು ಲಕ್ಷ ರೂಪಾಯಿ ನೀಡುವ ಕಲ್ಯಾಣಲಕ್ಷ್ಮೀ/ಶಾದಿ ಮುಬಾರಕ್ ಯೋಜನೆಗಳಂತೂ ಮಹಿಳಾ ಮತದಾರರನ್ನು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದವು.

ಅದರಲ್ಲೂ ರಾವ್ ಕೃಷಿಗೆ ಬೇಕಾದ ಸಣ್ಣ ನೀರಾವರಿಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದು ರಾಜ್ಯದ ಸಣ್ಣ ರೈತರ ನಡುವೆ ಅವರ ಜನಪ್ರಿಯತೆ ಹೆಚ್ಚಾಗಲು ಕಾರಣವಾಯಿತು.

 ಇದರ ಜೊತೆಗೆ ವಿಧಾನಸಭೆ ವಿಸರ್ಜಿಸುವ ಕೆಲವೇ ದಿನಗಳ ಮೊದಲು ರಾಜ್ಯದ ಜನತೆಗೆ ಮತ್ತಷ್ಟು ಉಚಿತ ಕಾರ್ಯಕ್ರಮಗಳನ್ನು, ಜನಪ್ರಿಯ ಯೋಜನೆಗಳನ್ನು ಘೋಷಿಸಿದ್ದು ಜನತೆ ಟಿಆರ್‌ಎಸ್ ಪರ ನಿಲ್ಲುವಂತೆ ಮಾಡಿತು.

2.ಕಾಂಗ್ರೆಸ್ ಮತ್ತು ತೆಲುಗುದೇಶಂ ಮೈತ್ರಿ.
ಇಷ್ಟೆಲ್ಲದರ ನಡುವೆಯೂ ಇದ್ದಿರಬಹುದಾದ ಆಡಳಿತ ವಿರೋಧಿ ಅಲೆಯನ್ನು ಉಪಯೋಗಿಸಿಕೊಳ್ಳುವ ಸಾಧ್ಯತೆ ಇದ್ದ ಕಾಂಗ್ರೆಸ್ ಕೊನೆ ಕ್ಷಣದಲ್ಲಿ ತೆಲುಗುದೇಶಂ ಜೊತೆ ಮೈತ್ರಿ ಮಾಡಿಕೊಂಡಿದ್ದು ತೆಲಂಗಾಣ ಜನತೆಯ ಕೋಪಕ್ಕೆ ಕಾರಣವಾಯಿತು. ಮೊದಲಿನಿಂದಲೂ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ವಿರುದ್ಧವಿದ್ದ ತೆಲುಗುದೇಶಂ ಪಕ್ಷದ ಮೇಲಿದ್ದ ತೆಲಂಗಾಣ ಜನತೆಯ ಕೋಪ ಸಹಜವಾಗಿಯೇ ಕಾಂಗ್ರೆಸ್‌ಗೆ ನಷ್ಟವನ್ನುಂಟು ಮಾಡಿತು. ಆಂಧ್ರಪ್ರದೇಶದ ರಾಜಧಾನಿ ವಿಜಯವಾಡ ಮತ್ತು ದಿಲ್ಲಿಯ ಗುಲಾಮರ ಸರಕಾರ ನಮಗೆ ಬೇಕಾಗಿಲ್ಲವೆಂಬ ರಾವ್ ಅವರ ಹೇಳಿಕೆ ತೆಲಂಗಾಣ ಜನತೆ ಟಿಆರ್‌ಎಸ್ ಪರವಾಗಿ ಧ್ರುವೀಕರಣಗೊಳ್ಳುವಂತೆಮಾಡಿತು. ತೆಲಂಗಾಣ ಜನತೆಯ ದೃಷ್ಟಿಯಲ್ಲಿ ಇವತ್ತಿಗೂ ತೆಲುಗುದೇಶಂ ಖಳನಾಯಕನಾಗಿದ್ದು ಅದರ ಜೊತೆ ಸೇರಿದ ಕಾಂಗ್ರೆಸನ್ನು ಸಹ ಅವರು ಅದೇ ದೃಷ್ಟಿಯಲ್ಲಿ ನೋಡಿದ್ದು ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದ್ದು ರಾವ್ ಅವರಿಗೆ ವರದಾನವಾಯಿತು.

3.ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯೇ ಇಲ್ಲದೆ ಹೋದದ್ದು.
ಕಾಂಗ್ರೆಸ್ ಪಕ್ಷದೊಳಗೆ ಹತ್ತಾರು ಜನ ಮುಖ್ಯಮಂತ್ರಿಗಳ ಕುರ್ಚಿಯ ಆಕಾಂಕ್ಷಿಗಳಿದ್ದು ಅವರಲ್ಲಿ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿತ್ತು. ಹೀಗಾಗಿ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಉತ್ತಮ ಕುಮಾರ್ ರೆಡ್ಡಿಯವರಿಗೆ ಎಲ್ಲ ನಾಯಕರನ್ನ್ನೂ ಒಟ್ಟಿಗೆ ಕರೆದೊಯ್ಯಲು ಸಾಧ್ಯವೇ ಆಗಲಿಲ್ಲ. ಹಳೆಯ ಮುಖಗಳನ್ನೇ ನಂಬಿಕೊಂಡಿದ್ದ ಕಾಂಗ್ರೆಸ್‌ಗೆ ಯುವ ಜನತೆಯ ಬೆಂಬಲ ದೊರಕದೆ ಹೋಗಿದ್ದು ಸಹ ಟಿಆರ್‌ಎಸ್ ಗೆಲುವಿಗೆ ಕಾರಣವಾಯಿತು.

4.ನಕಾರಾತ್ಮಕ ಪ್ರಚಾರ.
ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಮತ್ತು ಭಾಜಪಗಳೆರಡೂ ತಮ್ಮ ಪ್ರಣಾಳಿಕೆಗಳ ಬಗ್ಗೆ ಹೆಚ್ಚು ಮಾತಾಡದೆ ರಾವ್ ಅವರ ಕುಟುಂಬದ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದು ಜನರ ಅಸಹನೆಗೆ ಕಾರಣವಾಯಿತು. ವಿರೋಧ ಪಕ್ಷಗಳ ಇಂತಹ ನಕಾರಾತ್ಮಕ ಪ್ರಚಾರ ಟಿಆರ್‌ಎಸ್‌ಗೆ ವರವಾಗುತ್ತ ಹೋಯಿತು.

5.ತಿಂಗಳುಗಳ ಪೂರ್ವ ಸಿದ್ಧತೆ.
ವಿಧಾನಸಭೆಯನ್ನು ವಿಸರ್ಜಿಸಿದ ಕೂಡಲೇ ಟಿಆರ್‌ಎಸ್ ತನ್ನ ಚುನಾವಣಾ ಸಿದ್ಧತೆಯನ್ನು ಆಂಭಿಸಿತ್ತು. ಸೆಪ್ಟಂಬರ್ ಮೊದಲ ವಾರದ ಹೊತ್ತಿಗೆ ಅದು ಶೇ. ತೊಂಬತ್ತರಷ್ಟು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಯಾಗಿತ್ತು. ಹಾಗಾಗಿ ಅದರ ಅಭ್ಯರ್ಥಿಗಳು ಮೊದಲೇ ತಮ್ಮ ಪ್ರಚಾರವನ್ನು ಆರಂಭಿಸಿಯಾಗಿತ್ತು. ಕೊನೆಗಳಿಗೆಯವರೆಗೂ ಸೀಟು ಹಂಚಿಕೆಯ ಕಸರತ್ತಿನಲ್ಲಿ ಮುಳುಗಿದ್ದ ವಿರೋಧ ಪಕ್ಷಗಳು ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ.

6.ಟಿಆರ್‌ಎಸ್ ಪರ ನಿಂತ ಅಲ್ಪಸಂಖ್ಯಾತರು.
 ಉವೈಸಿಯಂತಹವರ ಅಸ್ತಿತ್ವದ ನಡುವೆಯೂ ಮುಸ್ಲಿಮರು ರಾವ್ ಪರ ಮತ ಚಲಾಯಿಸಿದ್ದು ಟಿಆರ್‌ಎಸ್ ಭರ್ಜರಿ ಗೆಲುವಿಗೆ ಕಾರಣವಾಯಿತು.
   ಒಟ್ಟಿನಲ್ಲಿ ರಾವ್ ತಮ್ಮ ಪಕ್ಷವನ್ನು ಭಾರೀ ಜಯಗಳಿಸುವಂತೆ ನೋಡಿಕೊಂಡಿದ್ದು, ಇದೀಗ ಅವರ ಕಣ್ಣು ದಿಲ್ಲಿಯತ್ತ ನೆಟ್ಟಿರುವಂತೆ ಕಾಣುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಭಾಜಪ ಹೊರತಾದ ವಿರೋಧಪಕ್ಷಗಳ ಮೂರನೇ ರಂಗವೊಂದರ ಸ್ಥಾಪನೆಯ ಕನಸನ್ನು ಕೆ.ಸಿ.ಆರ್. ಹೊಂದಿದ್ದು ಅದೆಷ್ಟರ ಮಟ್ಟಿಗೆ ಸಾಧ್ಯವಾಗುತ್ತದೆ ಎಂಬ ಪ್ರಶ್ನೆ ಇದೆ. ಹದಿನೇಳು ಲೋಕಸಭಾ ಸ್ಥಾನಗಳನ್ನು ಹೊಂದಿರುವ ತೆಲಂಗಾಣದ ಮುಖ್ಯಮಂತ್ರಿ ರಾಷ್ಟ್ರ ರಾಜಕಾರಣದಲ್ಲಿ ವಹಿಸಬಹುದಾದ ಪಾತ್ರದ ಬಗ್ಗೆ ಸ್ಪಷ್ಟ ಚಿತ್ರಣವಿನ್ನೂ ಸಿಕ್ಕಿಲ್ಲ 

Writer - ಕು.ಸ.ಮಧುಸೂದನ, ರಂಗೇನಹಳ್ಳಿ

contributor

Editor - ಕು.ಸ.ಮಧುಸೂದನ, ರಂಗೇನಹಳ್ಳಿ

contributor

Similar News