ಮ. ಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ: ಬಿಜೆಪಿ ಕೂದಲೆಳೆ ಅಂತರದಲ್ಲಿ ಸೋತಿತೇ?

Update: 2018-12-13 16:46 GMT

ಹೊಸದಿಲ್ಲಿ, ಡಿ.13: ರಾಜಸ್ತಾನ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದರೂ ಬಹುಮತಕ್ಕೆ ಅಗತ್ಯವಿರುವ ‘ಮ್ಯಾಜಿಕ್ ಸಂಖ್ಯೆ’ಯನ್ನು ತಲುಪಿಲ್ಲ ಎಂದು ಬಿಜೆಪಿ ಸಮಾಧಾನ ಪಟ್ಟುಕೊಂಡಿರಬಹುದು. ಆದರೆ ವಾಸ್ತವಾಂಶವನ್ನು ಗಮನಿಸಿದರೆ ಬಿಜೆಪಿಗೆ ಆಗಿರುವ ನಷ್ಟ ಅಗಾಧ ಪ್ರಮಾಣದ್ದಾಗಿದೆ.

2014ರ ಲೋಕಸಭಾ ಚುನಾವಣೆಯ ಬಳಿಕ ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ 61 ಲಕ್ಷಕ್ಕೂ ಹೆಚ್ಚು ಮತಗಳನ್ನು ಕಳೆದುಕೊಂಡಿದೆ(61,59,246 ಮತಗಳು). ಮುಂಬರುವ ಲೋಕಸಭಾ ಚುನಾವಣೆಗೆ ಈ ಅಂಕಿಅಂಶ ಅತ್ಯಂತ ಮಹತ್ವದ್ದಾಗಿದೆ. ಇದೇ ಅವಧಿಯಲ್ಲಿ, ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ 1.24 ಕೋಟಿಗೂ ಅಧಿಕ ಮತಗಳ ಗಳಿಕೆಯಾಗಿದೆ.(1,24,01,295 ಮತ ಹೆಚ್ಚಳವಾಗಿದೆ).

ರಾಜಸ್ತಾನದಲ್ಲಿ ಈ ಬಾರಿ ಬಿಜೆಪಿ ಶೇ.38.80 ಮತ(73 ಸ್ಥಾನ)ಗಳಿಸಿದೆ. 2014ರಲ್ಲಿ ಮೋದಿ ಅಲೆಯ ಕಾರಣ ಬಿಜೆಪಿ ಶೇ.55.61 ಪ್ರಮಾಣದ ಮತ ಪಡೆದಿತ್ತು. ಅಂದರೆ ಕೇವಲ 4 ವರ್ಷಗಳಲ್ಲಿ ಶೇ.16.81ರಷ್ಟು ಮತಗಳನ್ನು ರಾಜಸ್ತಾನದಲ್ಲಿ ಬಿಜೆಪಿ ಕಳೆದುಕೊಂಡಿದೆ. ಇಲ್ಲಿ ಕಾಂಗ್ರೆಸ್ ಪಡೆದಿರುವ ಮತಗಳ ಪ್ರಮಾಣ 2014ರಲ್ಲಿ ಶೇ.30.73, ಈ ಬಾರಿ ಶೇ.39.30. ಮಧ್ಯಪ್ರದೇಶದಲ್ಲಿ ಬಿಜೆಪಿ 2014ರಲ್ಲಿ ಶೇ.54.76 ಮತಗಳನ್ನು ಪಡೆದಿದ್ದರೆ 2018ರಲ್ಲಿ ಶೇ.41ಕ್ಕೆ ಇಳಿದಿದೆ. ಶೇ.13.76 ನಕಾರಾತ್ಮಕ ‘ಸ್ವಿಂಗ್’ ಪಕ್ಷಕ್ಕೆ ಭಾರೀ ನಷ್ಟ ಉಂಟು ಮಾಡಿದೆ.(ಮಧ್ಯಪ್ರದೇಶದಲ್ಲಿ ಬಿಜೆಪಿ 109, ಕಾಂಗ್ರೆಸ್ 114 ಸ್ಥಾನ ಗಳಿಸಿದೆ). ಇಲ್ಲಿ ಕಾಂಗ್ರೆಸ್ ಪಡೆದಿರುವ ಮತಗಳ ಪ್ರಮಾಣ 2014ರಲ್ಲಿ ಶೇ.35.35 ಆಗಿದ್ದರೆ, ಈ ಬಾರಿ ಶೇ.40.90. ಛತ್ತೀಸ್‌ಗಢದಲ್ಲಿ ಬಿಜೆಪಿ ಪಾತಾಳಕ್ಕೆ ಕುಸಿದಿದೆ.

2014ರಲ್ಲಿ ಶೇ.49.66ರಷ್ಟಿದ್ದ ಮತಗಳ ಪ್ರಮಾಣ, 2018ರಲ್ಲಿ ಶೇ.33ಕ್ಕೆ ಕುಸಿದಿದೆ, ಅಂದರೆ ಶೇ.16.66ರಷ್ಟು ಇಳಿಕೆ. ಇಲ್ಲಿ ಕಾಂಗ್ರೆಸ್ ಪಡೆದಿರುವ ಮತಗಳ ಪ್ರಮಾಣ ಶೇ. 30.09ರಿಂದ ಶೇ.43ಕ್ಕೆ ಹೆಚ್ಚಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಡೆದಿರುವ ಮತಗಳ ಪ್ರಮಾಣಕ್ಕಿಂತ ಸ್ವಲ್ಪ ಹೆಚ್ಚು ಪಡೆದಿರುವ ಬಗ್ಗೆ ಬಿಜೆಪಿ ಸಮಾಧಾನ ಪಟ್ಟುಕೊಳ್ಳಬಹುದು. ಆದರೆ 2014ರಿಂದ ಬಿಜೆಪಿ ಈ ರಾಜ್ಯದಲ್ಲಿ 3.72 ಲಕ್ಷ ಮತಗಳನ್ನು ಕಳೆದುಕೊಂಡಿದೆ. ರಾಜಸ್ತಾನದಲ್ಲಿ 11.37 ಲಕ್ಷ ಮತಗಳು ನಷ್ಟವಾಗಿದೆ. ಈ ಸೋಲಿಗೆ ಆಡಳಿತ ವಿರೋಧಿ ಅಲೆ ಅಥವಾ ಕೇಂದ್ರ ಸರಕಾರದ ಬಗ್ಗೆ ರೈತರ ಅಸಮಾಧಾನ ಹೀಗೆ ಕಾರಣ ಕೊಡಬಹುದು. ಆದರೆ ಒಂದಂತು ಸ್ಪಷ್ಟವಾಗಿದೆ. ಜನತೆಯ ಭಾವನೆಯಲ್ಲಿ ಗಮನಾರ್ಹ ಬದಲಾವಣೆಯಾಗಿರುವುದು ನಿಚ್ಚಳವಾಗಿದೆ.

ಈ ಚುನಾವಣೆಗಳಲ್ಲಿ ಸ್ಥಳೀಯರಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾವಿಸಲಾಗಿದೆ. ಆದರೆ ಕಾಂಗ್ರೆಸ್ ಪಕ್ಷದ ಪ್ರಚಾರದಲ್ಲಿ ಕೇಂದ್ರ ಸರಕಾರದ ವೈಫಲ್ಯವನ್ನು ಜನತೆಯ ಎದುರು ಬಿಚ್ಚಿಡುವುದಕ್ಕೆ ಹೆಚ್ಚು ಆದ್ಯತೆ ನೀಡಲಾಗಿತ್ತು. ಉದ್ಯೋಗ ಸೃಷ್ಟಿಸಲು ವಿಫಲವಾಗಿರುವುದು, ರೈತರ ಸಮಸ್ಯೆ, ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ವೈಫಲ್ಯ ಹೀಗೆ ಕೇಂದ್ರ ಸರಕಾರದ ವೈಫಲ್ಯಗಳನ್ನು ಕಾಂಗ್ರೆಸ್ ಎಳೆಎಳೆಯಾಗಿ ಜನತೆಯ ಮುಂದೆ ಬಿಚ್ಚಿಟ್ಟಿತು. 2014ರ ಚುನಾವಣಾ ಪ್ರಚಾರ ಕಾರ್ಯದ ಸಂದರ್ಭ ಮೋದಿಯ ಜನಪ್ರಿಯ ಭರವಸೆ- ಅಚ್ಛೇ ದಿನ್’ ಬಗ್ಗೆ ಪದೇ ಪದೇ ಲೇವಡಿ ಮಾಡಲಾಯಿತು. ಈ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಾಲಿಗಂತೂ ಟಾನಿಕ್‌ನಂತೆ ಒದಗಿಬಂದಿದೆ. ಮುಖಂಡರಾಗಿ ರಾಹುಲ್‌ಗಾಂಧಿಯವರ ಸ್ವೀಕಾರಾರ್ಹತೆ ಮತದಾರರಲ್ಲಿ ವೃದ್ಧಿಸಿರುವುದರ ಸಂಕೇತವಿದು ಎಂದು ಪಕ್ಷದ ನಾಯಕರು ಹೇಳುತ್ತಿದ್ದಾರೆ.

ರಾಜಸ್ತಾನದಲ್ಲಿ 2014ರಲ್ಲಿ ಕೇವಲ 21 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 99 ಸ್ಥಾನ ಪಡೆದಿದೆ. ಮಧ್ಯಪ್ರದೇಶದಲ್ಲಿ 58 ಸ್ಥಾನದಿಂದ 114ಕ್ಕೆ, ಛತ್ತೀಸ್‌ಗಢದಲ್ಲಿ 38 ಸ್ಥಾನದಿಂದ 68ಕ್ಕೆ ಹೈಜಂಪ್ ಮಾಡಿದೆ. ವಿಪಕ್ಷಗಳ ಮತಗಳು ಕೆಲವು ಪ್ರಾದೇಶಿಕ ಪಕ್ಷಗಳಲ್ಲಿ ಹಂಚಿ ಹೋಗಿರದಿದ್ದರೆ ಕಾಂಗ್ರೆಸ್ ಇನ್ನಷ್ಟು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿತ್ತು. 

 ಬಿಜೆಪಿಗೆ ‘ನೋಟ’ ಕಂಟಕ

ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಬಿಜೆಪಿ ಸೋಲಿನಲ್ಲಿ ‘ನೋಟ’ ಮತಗಳೂ ಪ್ರಮುಖ ಪಾತ್ರ ವಹಿಸಿವೆ. ಮೀಸಲಾತಿ ವಿರೋಧಿ ಸಂಘಟನೆ (ಎಸ್‌ಪಿಎಕೆಎಸ್)ಯ ಪ್ರಭಾವದಿಂದ ಮೇಲ್ವರ್ಗದ ಬಹಳಷ್ಟು ಯುವಜನತೆ, ಬಿಜೆಪಿಗೆ ಪಾಠ ಕಲಿಸಬೇಕೆಂದು ‘ನೋಟ’(ನನ್ ಆಫ್ ದಿ ಎಬವ್- ಈ ಮೇಲಿನವರಲ್ಲಿ ಯಾರೂ ಅಲ್ಲ) ಬಟನ್ ಒತ್ತಿದ್ದಾರೆ. ಮಧ್ಯಪ್ರದೇಶದಲ್ಲಿ 5,42,295 ‘ನೋಟ’ ಮತ , ರಾಜಸ್ತಾನದಲ್ಲಿ 4,67,781 ನೋಟ ಮತ ಚಲಾವಣೆಯಾಗಿದೆ. ಮಧ್ಯಪ್ರದೇಶದಲ್ಲಿ ‘ನೋಟ’ ಮತಗಳ ಪ್ರಮಾಣ ಸಮಾಜವಾದಿ ಪಕ್ಷ ಹಾಗೂ ಆಮ್ ಆದ್ಮಿ ಪಕ್ಷ ಪಡೆದ ಮತಗಳಿಗಿಂತ ಅಧಿಕ ಎಂಬುದು ಗಮನಾರ್ಹವಾಗಿದೆ.

ಕೃಪೆ: telegraphindia.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News