ಬೆಂಗಳೂರು: ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ
Update: 2018-12-14 17:24 GMT
ಬೆಂಗಳೂರು,ಡಿ.14: ಕ್ಷುಲ್ಲಕ ವಿಚಾರವಾಗಿ ನಡೆದ ಜಗಳದಲ್ಲಿ ಸ್ನೇಹಿತನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ದೊಡ್ಡಬೆಲೆ ಎಂಬಲ್ಲಿ ನಡೆದಿದೆ.
ದೊಡ್ಡಬೆಲೆಯ ಚಂದ್ರಬಾಬು(25) ಎಂಬುವವರು ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಚಂದ್ರಬಾಬು ಹಾಗೂ ಆತನ ಸ್ನೇಹಿತ ರಂಜಿತ್ ಮಧ್ಯರಾತ್ರಿವರೆಗೂ ಮದ್ಯಪಾನ ಮಾಡಿದ್ದಾರೆ. ಅನಂತರ ಅಮಲಿನಲ್ಲಿ ಕ್ಷುಲ್ಲಕ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಗಲಾಟೆ ವಿಕೋಪಕ್ಕೆ ತಿರುಗಿ ರಂಜಿತ್ ತನ್ನ ಸ್ನೇಹಿತ ಚಂದ್ರಬಾಬುವಿಗೆ ಚಾಕುವಿನಿಂದ ಇರಿದಿದ್ದು ತೀವ್ರ ರಕ್ತಸ್ರಾವವಾಗಿ ಚಂದ್ರಬಾಬು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕುಂಬಳಗೂಡು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ರಂಜಿತ್ರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.