ಮೆಟ್ರೋ ಮಾರ್ಗ ಸಂಪೂರ್ಣ ಪರಿಶೀಲಿಸಲು ಡಿಸಿಎಂ ಪರಮೇಶ್ವರ್ ಸೂಚನೆ

Update: 2018-12-15 16:17 GMT

ಬೆಂಗಳೂರು, ಡಿ.15: ಟ್ರಿನಿಟಿ ನಿಲ್ದಾಣದ ಬಳಿ ಪಿಲ್ಲರ್ ಬಿರುಕು ಬಿಟ್ಟಿರುವುದನ್ನು ಪರಿಶೀಲಿಸಲು ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಹಲಸೂರು ಮೆಟ್ರೋ ನಿಲ್ದಾಣದವರೆಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್, ಮೆಟ್ರೋ ರೈಲಿನಲ್ಲಿ ಸಂಚರಿಸಿದರು.

ಬಳಿಕ ಟ್ರಿನಿಟಿ ಸರ್ಕಲ್‌ಗೆ ಆಗಮಿಸಿದ ಪರಮೇಶ್ವರ್, ಬಿರುಕು ಬಿಟ್ಟಿರುವ ಪಿಲ್ಲರ್ ಅನ್ನು ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಿಲ್ಲರ್ ಬಿರುಕು ಬಿಟ್ಟಿರುವುದನ್ನು ಈಗಾಗಲೇ ದಿಲ್ಲಿಯಿಂದ ಆಗಮಿಸಿರುವ ತಜ್ಞರು ಹಾಗೂ ನಮ್ಮ ತಾಂತ್ರಿಕ ತಂಡ ಪರಿಶೀಲಿಸಿ, ದುರಸ್ತಿ ಮಾಡುವ ಕೆಲಸ ಪ್ರಾರಂಭಿಸಿದೆ ಎಂದರು. ಪಿಲ್ಲರ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಪಿಲ್ಲರ್ ಮೇಲೆ ಕೂರಿಸುವಾಗ ಸ್ಪೇರಿಂಗ್ ಹಾಕಿ ಕೂರಿಸಲಾಗುತ್ತದೆ. ಆ ಸ್ಪೇರಿಂಗ್ ಸ್ವಲ್ಪ ಪ್ರಮಾಣದಲ್ಲಿ ಜಾರಿದೆ. ಯಾವುದೇ ತೊಂದರೆ ಇಲ್ಲ. ಇದರಿಂದ ಜನಸಾಮಾನ್ಯರು ಆತಂಕಕ್ಕೆ ಒಳಗಾಗಬೇಕಿಲ್ಲ. ಈ ದೃಷ್ಟಿಯಿಂದಲೇ ನಾನು ಜನರೊಂದಿಗೆ ಮೆಟ್ರೋ ರೈಲಿನಲ್ಲಿ ಸಂಚರಿಸಿದೆ ಎಂದು ಅವರು ಹೇಳಿದರು.

ಈ ಪಿಲ್ಲರ್‌ನಲ್ಲಿ ಬಿರುಕು ಮೂಡಿರುವುದರಿಂದ ಜನಸಾಮಾನ್ಯರಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ಇಡೀ ಮೆಟ್ರೋ ಮಾರ್ಗವನ್ನು ಸಂಪೂರ್ಣವಾಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು. ಈ ಸಂದರ್ಭದಲ್ಲಿ ಸಂಚಾರ ವಿಭಾಗದ ಪೊಲೀಸ್ ಆಯುಕ್ತ ಹರಿಶೇಖರನ್, ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್, ಮಾಜಿ ಮೇಯರ್ ಸಂಪತ್‌ರಾಜ್, ಬಿಬಿಎಂಪಿ ಸದಸ್ಯ ಎ.ಆರ್.ಝಾಕಿರ್, ಮೆಟ್ರೋ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News