ಎದೆಗೆ ಚೂರಿಯಿಂದ ಇರಿದು ಅಂಗಡಿ ಮಾಲಕನ ಕೊಲೆ

Update: 2018-12-16 13:55 GMT

ಬೆಂಗಳೂರು, ಡಿ.16: ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬ ಕ್ಷುಲ್ಲಕ ಕಾರಣಕ್ಕೆ ಅಂಗಡಿ ಮಾಲಕನ ಎದೆಗೆ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.

ಜೆಸಿ ನಗರದ ಪೈಪ್‌ಲೈನ್ ನಿವಾಸಿ ಮಂಜುನಾಥ್(42) ಎಂಬುವರು ಕೊಲೆಯಾದ ಅಂಗಡಿ ಮಾಲಕರಾಗಿದ್ದು, ರಾಜಾಜಿನಗರದ ಆಕಾಶ್ ಎಂಬಾತ ಕೃತ್ಯವೆಸಗಿರುವ ಆರೋಪಿ ಎಂದು ತಿಳಿದುಬಂದಿದೆ.

ಘಟನೆ ವಿವರ: ಮಾರತ್‌ಹಳ್ಳಿಯ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಆಕಾಶ್ ಶನಿವಾರ ರಾತ್ರಿ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದು, ರವಿವಾರ ಬೆಳಗ್ಗೆ 5:30ರ ಸುಮಾರಿಗೆ ಬೈಕ್‌ನಲ್ಲಿ ರಾಜಾಜಿನಗರದ ಮನೆಗೆ ವಾಪಸ್ಸು ಬರುತ್ತಿದ್ದ.

ಮಾರ್ಗ ಮಧ್ಯೆ ಜೆಸಿನಗರದ ಪೈಪ್‌ಲೈನ್ ಬಳಿ ಸಾಯಿ ಕಾಂಡಿಮೆಂಟ್ಸ್ ಅಂಗಡಿ ಬಾಗಿಲು ತೆಗೆದಿದ್ದ ಮಂಜುನಾಥ್ ಅಂಗಡಿ ಮುಂಭಾಗ ನೀರು ಹಾಕಿದ್ದರು ಎನ್ನಲಾಗಿದೆ. ಬೈಕ್‌ನಲ್ಲಿ ವೇಗವಾಗಿ ಬಂದ ಆಕಾಶ್ ಅಂಗಡಿ ಮುಂಭಾಗವೇ ಜಾರಿ ಬಿದ್ದಿದ್ದಾನೆ. ಬಿದ್ದವನನ್ನು ಎತ್ತಲು ಮಂಜುನಾಥ್, ಆಕಾಶ್‌ಗೆ ಸಹಾಯ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ನೀವು ನೀರು ಹಾಕಿದ್ದರಿಂದ ನಾನು ಬಿದ್ದೆ ಎಂದು ಆಕಾಶ್ ಜಗಳ ತೆಗೆದು ಮಾರಕಾಸ್ತ್ರಗಳಿಂದ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಂಜುನಾಥ್ ಪತ್ರ ಮನೋಜ್, ಪತ್ನಿ ಗೌರಮ್ಮ ಅವರು ಗಲಾಟೆ ತಡೆಯಲು ಯತ್ನಿಸಿದ್ದಾರೆ.

ಈ ವೇಳೆ ಆಕಾಶ್, ಮಂಜುನಾಥ್ ಅವರ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಆಕ್ರೋಶಗೊಂಡ ಮನೋಜ್ ಸಹ ಚಾಕುವಿನಿಂದ ಆಕಾಶ್‌ಗೆ ಇರಿದಿದ್ದಾನೆ. ಸ್ಥಳದಲ್ಲೇ ಆಕಾಶ್ ಕುಸಿದುಬಿದ್ದಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೋಜ್ ಕೂಡ ಚಾಕು ಇರಿತಕ್ಕೊಳಗಾಗಿದ್ದಾನೆ ಎಂದು ತಿಳಿದುಬಂದಿದೆ.

ಮಂಜುನಾಥ್ ಅವರ ಎದೆಯ ಆಳಕ್ಕೆ ಚಾಕು ಇಳಿದಿದ್ದರಿಂದ ಸ್ಥಳದಲ್ಲಿಯೇ ಕುಸಿದು ರಕ್ತದ ಮಡುವಿನಲ್ಲಿ ಬಿದ್ದಿದ್ದು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News