ಲಂಚಕ್ಕೆ ಬೇಡಿಕೆ: ಆಹಾರ ಅಧಿಕಾರಿ ಎಸಿಬಿ ಬಲೆಗೆ
Update: 2018-12-18 16:51 GMT
ಬೆಂಗಳೂರು, ಡಿ.18: ಸಣ್ಣ ಉದ್ಯಮಕ್ಕೆ ಪರವಾನಿಗೆ ನೀಡುವ ಸಂಬಂಧ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಯೋರ್ವರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯ ಆಹಾರ ಸುರಕ್ಷತಾ ಅಧಿಕಾರಿ ಬಿ.ಉಲ್ಲಾಸ್ ಎಂಬವರ ವಿರುದ್ಧ ಎಸಿಬಿ ಮೊಕದ್ದಮೆ ದಾಖಲು ಮಾಡಿದೆ.
ನಗರದ ನಿವಾಸಿಯೊಬ್ಬರು ಮಸಾಲೆ ಪುಡಿಯನ್ನು ತಯಾರು ಮಾಡುವ ಸಣ್ಣ ಉದ್ಯಮ ಪ್ರಾರಂಭಿಸಲು ಪರವಾನಿಗೆ ಪಡೆಯುವ ಸಲುವಾಗಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ, ಆರೋಪಿ ಉಲ್ಲಾಸ್, ಅರ್ಜಿದಾರರ ಪರವಾನಿಗೆ ನೀಡಲು 5 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ.
ಮಂಗಳವಾರ ಎಸಿಬಿ ತನಿಖಾಧಿಕಾರಿಗಳು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ಉಲ್ಲಾಸ್ ಬಳಿ 90 ಸಾವಿರ ರೂ. ನಗದು ಪತ್ತೆಯಾಗಿದೆ. ಈ ಸಂಬಂಧ ದೂರು ದಾಖಲಿಸಿರುವ ಎಸಿಬಿ ತನಿಖೆ ಮುಂದುವರೆಸಿದೆ.