ಸಚಿವ ಸಂಪುಟ ವಿಸ್ತರಣೆ: ರಾಹುಲ್ ಗಾಂಧಿ ಜತೆ ಚರ್ಚೆ ಬಳಿಕ ಅಂತಿಮ

Update: 2018-12-21 14:14 GMT

ಹೊಸದಿಲ್ಲಿ/ಬೆಂಗಳೂರು, ಡಿ. 21: ಮೈತ್ರಿ ಸರಕಾರದ ಸಂಪುಟದಲ್ಲಿ ಖಾಲಿ ಇರುವ ಕಾಂಗ್ರೆಸ್ ಪಾಲಿನ 6 ಸ್ಥಾನಗಳ ಭರ್ತಿ, ಕೆಲವರ ಖಾತೆ ಬದಲಾವಣೆಗೆ ‘ಕೈ’ ಹೈಕಮಾಂಡ್ ಮುಂದಾಗಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಲವು ಯಾರತ್ತ ಎಂಬುದು ಕುತೂಹಲ ಸೃಷ್ಟಿಸಿದೆ.

ಶುಕ್ರವಾರ ದಿಲ್ಲಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ರಾಜ್ಯ ಉಸ್ತುವಾರಿ ವೇಣುಗೋಪಾಲ್ ಜತೆ ಚರ್ಚಿಸಿದ್ದು, ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಗೆ ಒಪ್ಪಿಗೆ ನೀಡಿದ್ದಾರೆಂದು ಗೊತ್ತಾಗಿದೆ.

ರಾಹುಲ್ ಗಾಂಧಿಯವರನ್ನು ಶುಕ್ರವಾರ ಸಂಜೆ ಸಮಾಲೋಚನೆ ನಡೆಸಲಿರುವ ರಾಜ್ಯದ ಮುಖಂಡರು, ಆಕಾಂಕ್ಷಿಗಳ ಪಟ್ಟಿಗೆ ಅವರಿಂದ ಒಪ್ಪಿಗೆ ಪಡೆದುಕೊಳ್ಳಲಿದ್ದಾರೆ. ಆ ಬಳಿಕವಷ್ಟೇ ಸಂಪುಟಕ್ಕೆ ಸೇರ್ಪಡೆಗೊಳ್ಳಲಿರುವವರ ಹೆಸರುಗಳು ಗೊತ್ತಾಗಲಿವೆ ಎಂದು ಹೇಳಲಾಗಿದೆ.

ನಾಳೆ(ಡಿ.22) ಸಂಪುಟ ವಿಸ್ತರಣೆಯಾಗಲಿದೆ ಎಂಬ ನಿರೀಕ್ಷೆಯಲ್ಲಿರುವ ಸಚಿವ ಸ್ಥಾನಕಾಂಕ್ಷಿಗಳು, ನಮಗೆ ಸಚಿವ ಸ್ಥಾನ ಸಿಗಬಹುದೆಂದು ಕುತೂಹಲದಲ್ಲಿದ್ದಾರೆ. ಮುಂಬರುವ ಲೋಕಸಭೆ ಹಿನ್ನೆಲೆಯಲ್ಲಿ ಪಕ್ಷದಲ್ಲಿನ ಅಸಮಾಧಾನ ಉಂಟಾಗದಂತೆ ಎಚ್ಚರ ವಹಿಸಲು ಜಿಲ್ಲಾವಾರು, ಜಾತಿವಾರು ಪ್ರಾತಿನಿಧ್ಯ ಕಲ್ಪಿಸಲು ಮುಖಂಡರು ತೀರ್ಮಾನಿಸಿದ್ದಾರೆ ಎಂದು ಗೊತ್ತಾಗಿದೆ.

ಲಾಬಿ: ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಎಡಗೈ ಸಮುದಾಯದ ಸಂಸದ ಕೆ.ಎಚ್.ಮುನಿಯಪ್ಪ ತಮ್ಮ ಪುತ್ರಿ ಶಾಸಕಿ ರೂಪಾ ಶಶಿಧರ್ ಅವರಿಗೆ ಸ್ಥಾನ ಕೊಡಿಸಲು ದಿಲ್ಲಿಯಲ್ಲಿ ತೀವ್ರ ಲಾಬಿ ಆರಂಭಿಸಿದ್ದಾರೆ.

ಶಾಸಕರಾದ ಇ.ತುಕಾರಾಂ, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಸಿ.ಎಸ್.ಶಿವಳ್ಳಿ, ಎಂಟಿಬಿ ನಾಗರಾಜ್ ಅವರು ಕ್ರಮವಾಗಿ ಎಸ್ಟಿ, ಒಕ್ಕಲಿಗ, ಲಿಂಗಾಯತ ಮತ್ತು ಕುರುಬ ಸಮುದಾಯದ ಕೋಟಾದಲ್ಲಿ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದು, ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ.

ಇದೇ ವೇಳೆ ಹತ್ತು ಮಂದಿ ಸಂಸದೀಯ ಕಾರ್ಯದರ್ಶಿಗಳ ನೇಮಕ ಹಾಗೂ 30 ಪ್ರಮುಖ ನಿಗಮ-ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಸಂಬಂಧವೂ ಮಾತುಕತೆ ನಡೆಸಲಿದ್ದು, ಯಾರಿಗೆ ಸ್ಥಾನಮಾನ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News